
ವಿಜಯಪುರ:ಜಿಲ್ಲೆಯ ವಿವಿಧೆಡೆ ನಡೆದ ಚಿನ್ನಾಭರಣ ಹಾಗೂ ಬೈಕ್ ಕಳವು ಪ್ರಕರಣಗಳನ್ನು ಭೇದಿಸಿರುವ ವಿಜಯಪುರ ಪೊಲೀಸರು ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ, ‘ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ದಾಖಲಾದ 48 ಬಂಗಾರ, ಬೈಕ್ ಕಳವು ಪ್ರಕರಣಗಳಿಗೆ ಸಂಬಂಧಿಸಿ ಒಟ್ಟು 14 ಅಂತರ ರಾಜ್ಯ ಹಾಗೂ ಅಂತರ ಜಿಲ್ಲಾ ಆರೋಪಿಗಳನ್ನು ಬಂಧಿಸಲಾಗಿದೆ. ಅವರಿಂದ ಅಂದಾಜು ₹65 ಲಕ್ಷ ಮೌಲ್ಯದ 426.2 ಗ್ರಾಂ ತೂಕದ ಬಂಗಾರದ ಆಭರಣ ಹಾಗೂ ₹20 ಲಕ್ಷ ನಗದು, ಕೃತ್ಯಕ್ಕೆ ಬಳಸಿದ 2 ಕಾರು, 39 ಬೈಕ್ ಜಪ್ತು ಮಾಡಿಕೊಳ್ಳಲಾಗಿದೆ. ಆರೋಪಿಗಳಿಂದ ಒಟ್ಟು ₹ 1.17 ಕೋಟಿ ಮೌಲ್ಯದ ಸ್ವತ್ತುಗಳನ್ನು ಜಪ್ತು ಮಾಡಿಕೊಳ್ಳಲಾಗಿದೆ ಎಂದರು.
ಬಸ್ನಲ್ಲಿ ಬಂಗಾರ ಕಳವು: 2025ರ ಮೇ 30ರಂದು ವಿಜಯಪುರ-ತಾಳಿಕೋಟೆಗೆ ಬಸ್ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯ ಬಳಿ ಇದ್ದ 65 ಗ್ರಾಂ ಚಿನ್ನಾಭರಣವನ್ನು ಮನಗೂಳಿ ಬಳಿ ಕಳವು ಮಾಡಿದ ಪ್ರಕರಣವನ್ನು ಭೇದಿಸಿರುವ ಪೊಲೀಸರು ಆರು ಆರೋಪಿಗಳನ್ನು ಬಂಧಿಸಿದ್ದಾರೆ.
ಅರಕೇರಿ ಗ್ರಾಮದ ಪ್ರಕಾಶ ವೆಂಕಟೇಶ ಭೋಯ್ರ್, ಅಂಕುಶ ಸಾಹೇಬರಾವ್ ಜಾಧವ, ಗೋವರ್ಧನ ವಿಠ್ಠಲ ಪವಾರ, ರಜನಿ ಶಿವು ಭೋವಿ, ಮಂಜು ಪ್ರಶಾಂತ ಭೋಯ್ರ, ಶಿವು ಲೇಟ್ ರಾಜಣ್ಣ ಬೋವಿ ಬಂಧಿತ
ಆರೋಪಿಗಳು.
ಮನಗೂಳಿ, ತಿಕೋಟಾ, ದೇವರಹಿಪ್ಪರಗಿ, ಬಬಲೇಶ್ವರ, ಆದರ್ಶನಗರ, ಗೋಳಗುಮ್ಮಟ ಹಾಗೂ ನಿಡಗುಂದಿ ಪೊಲೀಸ್ ಠಾಣೆಗಳಿಗೆ ಸಂಬಂಧಿಸಿ ಒಟ್ಟು 8 ಪ್ರಕರಣಗಳಲ್ಲಿ ಕೃತ್ಯಕ್ಕೆ ಬಳಸಿದ 1 ಕಾರು ಹಾಗೂ ಒಟ್ಟು 426.2 ಗ್ರಾಂ ಬಂಗಾರದ ಆಭರಣ, ಒಟ್ಟು ಅಂದಾಜು ₹65 ಲಕ್ಷ ಮೌಲ್ಯದ ಮಾಲನ್ನು ವಶಪಡಿಸಿಕೊಳ್ಳಲಾಗಿದೆ.
ಬೈಕ್ ಕಳವು: ನಾಗಠಾಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿವಿಧ ಬೈಕ್ ಕಳವು ಪ್ರಕರಣಗಳಲ್ಲಿ ಭಾಗಿಯಾದ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಸಿದ್ರಾಮ ಅರಕೇರಿ, ಮಂಜುನಾಥ ಉಕ್ಕಲಿ, ಆಕಾಶ ಮಠಪತಿ ಬಂಧಿತ ಆರೋಪಿಗಳು. ವಿವಿಧ ಠಾಣೆಗಳಲ್ಲಿ ದಾಖಲಾಗಿದ್ದ ಬೈಕ್ ಕಳವು ಪ್ರಕರಣಗಳಿಗೆ ಸಂಬಂಧಿಸಿ ಆರೋಪಿಗಳಿಂದ ಒಟ್ಟು ₹7 ಲಕ್ಷ ಮೌಲ್ಯದ 20 ಬೈಕ್ಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.
ಮನಗೂಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಖಲಾಗಿದ್ದ ಬೈಕ್ ಕಳವು ಪ್ರಕರಣದಲ್ಲಿ ಬಾಬು ಬಸಗೊಂಡ ಜಮಖಂಡಿ ಬಂಧಿತ ಆರೋಪಿ. ವಿವಿಧ ಠಾಣೆಗಳಲ್ಲಿ ದಾಖಲಾಗಿದ್ದ ಬೈಕ್ ಕಳವು ಪ್ರಕರಣಗಳಿಗೆ ಸಂಬಂಧಿಸಿ ಆರೋಪಿಯಿಂದ 19 ಬೈಕ್ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಎಎಸ್ಪಿ ರಾಮನಗೌಡ ಹಟ್ಟಿ, ಡಿವೈಎಸ್ಪಿ ಟಿ.ಎಸ್. ಸುಲ್ಫಿ ಪತ್ರಿಕಾಗೋಷ್ಠಿಯಲ್ಲಿ ಇದ್ದರು.
ಮನಗೂಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳೆದ ವರ್ಷದ ಮೇ 8ರಂದು ಬಂಗಾರ ನಾಣ್ಯ ಎಂದು ನಂಬಿಸಿ ಲಕ್ಷಾಂತರ ರೂಪಾಯಿ ಹಣ ಪಡೆದ ಪ್ರಕರಣದಲ್ಲಿ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ನಕಲಿ ಬಂಗಾರ ನಾಣ್ಯಗಳನ್ನು ಅಸಲಿ ಎಂದು ಯಾಮಾರಿಸಿ ದೂರುದಾರರಿಂದ ₹26 ಲಕ್ಷ ಹಣ ಪಡೆದು ಮೋಸ ಮಾಡಿದ್ದರು. ವಿಜಯನಗರದ ಹಣಮಂತ ಉರ್ಫ್ ಸಂತೋಷ ಲಾಲ ಮಾನಪ್ಪ ಉರ್ಫ್ ಲಕ್ಷ್ಮಣ ಕೊರಚರ ರಾಜಾ ಗೋವಿಂದ ಉರ್ಫ್ ವೆಂಕಟೇಶ ಕಾವಾಡಿ ಹರೀಶ ಚೌಡಪ್ಪ ಕೊರಚರ ಚೀರಂಜೀವಿ ದುರ್ಗಪ್ಪ ಕೊರಚರ ಬಂಧಿತ ಆರೋಪಿಗಳು. ಆರೋಪಿಗಳು ಮೋಸ ಮಾಡಿ ತೆಗೆದುಕೊಂಡು ಹೋದ ₹20 ಲಕ್ಷ ನಗದು ಹಾಗೂ ಕೃತ್ಯಕ್ಕೆ ಬಳಸಿದ 1 ಕಾರನ್ನು ಪೊಲೀಸರು ಜಪ್ತು ಮಾಡಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.