
ವಿಜಯಪುರ: ಯುಗಾದಿ ಹಬ್ಬದ ಅಂಗವಾಗಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವಿಜಯಪುರ ವಿಭಾಗದಿಂದ ಯಾತ್ರಾರ್ಥಿಗಳಿಗೆ ಉತ್ತಮ ಸಾರಿಗೆ ಸೌಲಭ್ಯ ಕಲ್ಪಿಸಲು ಮಾರ್ಚ್ 11 ರಿಂದ 22ರವರೆಗೆ ಶ್ರೀಶೈಲದಲ್ಲಿ ಜರುಗುವ ಮಲ್ಲಿಕಾರ್ಜುನ ಸ್ವಾಮಿ ಜಾತ್ರೆಗೆ ವಿಶೇಷ ಸಾರಿಗೆ ವ್ಯವಸ್ಥೆ ಕಾರ್ಯಾಚರಣೆ ಮಾಡಲಾಗುತ್ತಿದೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ನಾರಾಯಣಪ್ಪ ಕುರುಬರ ತಿಳಿಸಿದ್ದಾರೆ.
ವಿಜಯಪುರ, ಇಂಡಿ, ಸಿಂದಗಿ, ಮುದ್ದೇಬಿಹಾಳ, ತಾಳಿಕೋಟೆ, ಬ.ಬಾಗೇವಾಡಿ ಘಟಕ ಕೇಂದ್ರ ಸ್ಥಾನಗಳಿಂದ ವಿಶೇಷ ಸಾರಿಗೆಗಳ ಕಾರ್ಯಾಚರಣೆ ಮಾಡಲಾಗುವುದು. ಪ್ರಯಾಣಿಕರಿಗೆ ವಿಜಯಪುರ ಕೇಂದ್ರ ಬಸ್ ನಿಲ್ದಾಣ ಹಾಗೂ ಎಲ್ಲ ಘಟಕಗಳ ಬಸ್ ನಿಲ್ದಾಣಗಳಲ್ಲಿ ಮುಂಗಡ ಟಿಕೆಟ್ ಕಾಯ್ದಿರಿಸುವ ವ್ಯವಸ್ಥೆ ಕಲ್ಪಿಸಲಾಗಿದೆ. ಉಚಿತ ಅನ್ನ ಸಂತರ್ಪಣೆ ಸ್ಥಳಗಳಲ್ಲಿ ಊಟಕ್ಕಾಗಿ ಕಾಲಾವಕಾಶ ಕೊಡಲಾಗುವುದು. ಘಟಕ ಕೇಂದ್ರ ಸ್ಥಾನದಿಂದ ಹೆಚ್ಚುವರಿ ಬಸ್ಸುಗಳಲ್ಲದೇ ಪ್ರಯಾಣಿಕರು ಇಚ್ಛಿಸಿದಲ್ಲಿ ಅವರ ಸ್ವಗ್ರಾಮಗಳಿಂದ ನೇರವಾಗಿ ಶ್ರೀಶೈಲಕ್ಕೆ ಸಾರಿಗೆ ವ್ಯವಸ್ಥೆ ಒದಗಿಸಲಾಗುವುದು. ಪ್ರಯಾಣಿಕರು ಮಂತ್ರಾಲಯ ಹಾಗೂ ಮಹಾನಂದಿ ದರ್ಶನ ಮಾಡಲು ಇಚ್ಛಿಸಿದಲ್ಲಿ ಈ ಸ್ಥಳಗಳಿಗೆ ತಗಲುವ ಪ್ರಯಾಣ ದರವನ್ನು ಪಾವತಿಸಿದಲ್ಲಿ ಮಂತ್ರಾಲಯ ಹಾಗೂ ಮಹಾನಂದಿಗೆ ಕಾರ್ಯಾಚರಣೆ ಮಾಡಲಾಗುವುದು ಎಂದು ತಿಳಿಸಿದರು.
ಹೆಚ್ಚಿನ ಮಾಹಿತಿಗೆ ಸಂಬಂಧಿತ ಘಟಕ ವ್ಯವಸ್ಥಾಪಕರು ಅಥವಾ ವಿಜಯಪುರ ಕೇಂದ್ರ ಬಸ್ ನಿಲ್ದಾಣದ ಅಧಿಕಾರಿಗಳನ್ನು ಸಂಪರ್ಕಿಸಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.