ADVERTISEMENT

ಸಿದ್ಧೇಶ್ವರ ಶ್ರೀಗಳ ಅಂತಿಮ ಅಭಿವಂದನಾ ಪತ್ರ

​ಪ್ರಜಾವಾಣಿ ವಾರ್ತೆ
Published 3 ಜನವರಿ 2023, 22:52 IST
Last Updated 3 ಜನವರಿ 2023, 22:52 IST
   

ವಿಜಯಪುರ: ಜ್ಞಾನಯೋಗಾಶ್ರಮದ ಸಿದ್ಧೇಶ್ವರ ಸ್ವಾಮೀಜಿ 2014ರ ಗುರುಪೂರ್ಣಿಮೆಯಂದು ಮೂವರು ಸಾಕ್ಷಿಗಳೊಂದಿಗೆ ‘ಅಂತಿಮ ಅಭಿವಂದನ ಪತ್ರ’ ಬರೆದಿಟ್ಟಿದ್ದರು. ಅದರ ಪ್ರಕಾರ, ‘ದೇಹವನ್ನು ಭೂಮಿಯಲ್ಲಿಡುವ ಬದಲು ಅಗ್ನಿಯರ್ಪಿತ ಮಾಡು
ವುದು, ಶ್ರಾದ್ಧಿಕ ವಿಧಿ-ವಿಧಾನಗಳು ಅನಗತ್ಯ. ಚಿತಾಭಸ್ಮವನ್ನು ನದಿ ಅಥವಾ ಸಾಗರದಲ್ಲಿ ವಿಸರ್ಜಿಸುವುದು ಹಾಗೂ ಯಾವುದೇ ಬಗೆಯ ಸ್ಮಾರಕ ನಿರ್ಮಿಸಲಾಗದು’ ಎಂದು ಬರೆಯಲಾಗಿದೆ.

‘ಬದುಕು ಅನುಭವಗಳ ಪ್ರವಾಹ. ಅದರ ಸಿರಿವಂತಿಕೆಯು ವಿಶ್ವ ಚಿಂತನೆ ಹಾಗೂ ಸತ್ಯ ಶೋಧನೆಗಳಿಂದ. ಅದರ ಸೌಂದರ್ಯವು ರಾಗ ದ್ವೇಷ ರಹಿತವಾದ ಹಾಗೂ ಅಸೀಮಿತವಾದ ಸದ್ಭಾವದಿಂದ‌. ಅದನ್ನು ಸುಭಗ ಹಾಗೂ ಸಮೃದ್ಧಗೊಳಿಸುವುದೇ ‘ಸಾಧನೆ’. ಅಂತಹ ಜೀವನದ ಉಪಯುಕ್ತವಾದ ಅನುಭವಗಳನ್ನು ಆಸಕ್ತರೊಂದಿಗೆ ಹಂಚಿಕೊಳ್ಳುವುದೇ ಧರ್ಮ. ಅದು ಸ್ವ-ಪರ ನೆಮ್ಮದಿಗೆ ಕಾರಣ.’

‘ನನ್ನದು ಆವೇಗವಿಲ್ಲದ, ಸಾವಧಾನದ ಸಾಮಾನ್ಯ ಬದುಕು. ಅದನ್ನು ರೂಪಿಸಿದವರು ಗುರುದೇವರು. ಅದನ್ನು ಹದುಳಿಸಿದವರು ನಾಡಿನ ಪೂಜ್ಯರು, ಹಿತೈಷಿಗಳು, ಸಹ- ಹೃದಯರು, ಸಾಧಕರು ಹಾಗೂ ಶ್ರೀ ಸಾಮಾನ್ಯರು. ನಿಸರ್ಗವು ಮೈಮನಸ್ಸುಗಳಿಗೆ ತಂಪನ್ನಿತ್ತಿದೆ. ತಾತ್ವಿಕ ಚಿಂತನೆಗಳು ತಿಳಿ ಬೆಳಗ ಹರಡಿವೆ‌‌. ಜಾಗತಿಕ ತತ್ವಜ್ಞಾನಿಗಳ ಮತ್ತು ವಿಜ್ಞಾನಿಗಳ ಶೋಧನೆಗಳು ದೃಷ್ಟಿಯ ಪರಿಸೀಮೆಯನ್ನು ದೂರ ದೂರ ಸರಿಸಿವೆ. ಆದ್ದರಿಂದಲೇ ನಾನು ಎಲ್ಲರಿಗೂ ಎಲ್ಲದಕ್ಕೂ ಉಪಕೃತ.

ADVERTISEMENT

‘ಬದುಕು ಮುಗಿಯುತ್ತಿದೆ; ದೀಪ ಆರಿದಂತೆ; ತೆರೆ ಅಡಗಿದಂತೆ; ಮೇಘ ಕರಗಿದಂತೆ. ಉಳಿಯುವುದು ಬರೀ ಬಯಲು. ಮಹಾಮೌನ, ಶೂನ್ಯ ಸತ್ಯ! ಹಲವು ದಶಕಗಳ ಕಾಲ ಈ ಅದ್ಭುತ ಜಗತ್ತಿನಲ್ಲಿ ಬಾಳಿದ್ದೇನೆ; ನೋಡಿ ತಿಳಿದು ಅನುಭವಿಸಿದ್ದೇನೆ. ನನ್ನ ಬದುಕು ಕೊನೆಗೊಳ್ಳುವ ಮುಂಚೆ ಅದನ್ನು ಕೃತಜ್ಞತೆಯಿಂದ ಸ್ಮರಿಸಬೇಕು. ಅದಕ್ಕಾಗಿ ಈ ಅಂತಿಮ ಅಭಿವಂದನ ಪತ್ರ’ ಎಂದು ಬರೆದಿದ್ದಾರೆ.

ಅಂತಿಮ ನೆನಹು:

‘ಸತ್ಯವೂ ಇಲ್ಲ, ಅಸತ್ಯವೂ ಇಲ್ಲ.

ಸಹಜವೂ ಇಲ್ಲ, ಅಸಹಜವೂ ಇಲ್ಲ.

ನಾನೂ ಇಲ್ಲ, ನೀನೂ ಇಲ್ಲ.

ಇಲ್ಲ, ಇಲ್ಲ ಎಂಬುದು ತಾನಿಲ್ಲ.

ಗುಹೇಶ್ವರನೆಂಬುದು ತಾ ಬಯಲು ಅಂತ್ಯ ಪ್ರಣಮಾಂಜಲಿಃ!

ಸ್ವಾಮಿ ಸಿದ್ಧೇಶ್ವರ

ಸಾಕ್ಷಿದಾರರು: ನ್ಯಾ.ಎ.ಎಸ್.‌ಪಚ್ಚಾಪುರ, ಹೈಕೋರ್ಟ್, ಬೆಂಗಳೂರು. ನ್ಯಾ.ಎಸ್.ಎಸ್. ಸುಲ್ತಾನಪುರ, ಫ್ಯಾಮಿಲಿ‌ ಕೋರ್ಟ್, ವಿಜಯಪುರ ಹಾಗೂ ಕಾಡಸಿದ್ಧೇಶ್ವರ ಮಹಾ ಸ್ವಾಮೀಜಿ, ಕನ್ಹೇರಿ‌ಮಠ, ಕೊಲ್ಹಾಪುರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.