
ಆಲಮಟ್ಟಿ: ‘ಸಂಸ್ಕೃತಿ, ಸಂಸ್ಕಾರ, ಸಂರಕ್ಷಣೆ’ ಸಿದ್ಧಾಂತದಡಿ 2002 ರಿಂದ ಯಲಗೂರೇಶ್ವರನ (ಪವನಸುತ) ಕಾರ್ತಿಕೋತ್ಸವದಲ್ಲಿ ಎರಡು ದಿನಗಳ ಕಾಲ ನಿರಂತರ ಸಂಗೀತ ಕಾರ್ಯಕ್ರಮ ಏರ್ಪಡಿಸುತ್ತಿರುವ ಹರಿದಾಸ ಸಾಹಿತ್ಯ ಸಂಗೀತ ವೇದಿಕೆಗೀಗ 25ರ ಸಂಭ್ರಮ.
ಯಲಗೂರೇಶನ ಕಾರ್ತಿಕೋತ್ಸವದಲ್ಲಿ ಪ್ರತಿ ವರ್ಷವೂ ಸಂಗೀತ ಕಾರ್ಯಕ್ರಮ ಆದಿ ಕಾಲದಿಂದಲೂ ನಡೆದು ಬಂದ ಸಂಪ್ರದಾಯ. ಆದರೆ, ಅದಕ್ಕೆ ವೇದಿಕೆ ಇರಲಿಲ್ಲ. ಎಲ್ಲೋ ಕುಳಿತು ಹಾಡುತ್ತಿದ್ದರು. ಅದಕ್ಕೆ ಒಂದು ವೇದಿಕೆ ಕಲ್ಪಿಸಿ ನಿರಂತರ ಸಂಗೀತ ಕಾರ್ಯಕ್ರಮಗಳನ್ನು ಏರ್ಪಡಿಸುವುದರ ಮೂಲಕ ಇಡೀ ಕ್ಷೇತ್ರದಲ್ಲಿ ಜಾತ್ರೆಗೆ ಆಗಮಿಸುವ ಭಕ್ತಾದಿಗಳನ್ನು ಸಂಗೀತದ ಅಲೆಯಲ್ಲಿ ತೇಲುವಂತೆ ಮಾಡುತ್ತಿದೆ ಈ ವೇದಿಕೆ.
2002 ರಲ್ಲಿ ರಾಜ್ಯದ ನಾನಾ ಕಡೆ ಇರುವ ಯಲಗೂರೇಶನ ಭಕ್ತರೆಲ್ಲ ಕೂಡಿಕೊಂಡು ದೇವಸ್ಥಾನದ ಆವರಣದಲ್ಲಿಯೇ ಸಂಗೀತ ಕಾರ್ಯಕ್ರಮಕ್ಕೆಂದೇ ವೇದಿಕೆ ನಿರ್ಮಿಸಿ, ಅಲ್ಲಿ ಸಂಗೀತ ಕಾರ್ಯಕ್ರಮ ನಡೆಯುವಂತೆ ನೋಡಿಕೊಂಡರು. ಮುಂದೆ ಬರಬರುತ್ತಾ, ಇದರ ಸ್ವರೂಪ ಬದಲಾಗುತ್ತಲೇ ಹೋಯಿತು.
ಪ್ರತಿ ವರ್ಷ ನಾಡಿನ ಖ್ಯಾತ ನಾಮರ ಸಂಗೀತ ಕಚೇರಿ ಏರ್ಪಡಿಸುವುದರ ಜತೆಗೆ ಸಂಗೀತ, ಪಕ್ಕ ವಾದ್ಯಗಳ ಕಲೆ ಪ್ರದರ್ಶಿಸುವ ಪ್ರತಿಯೊಬ್ಬರನ್ನು ಕರೆಯಿಸಿದ ಕೀರ್ತಿ ಈ ವೇದಿಕೆಗೆ ಸಲ್ಲುತ್ತದೆ.
ಮೊದಲು ಖ್ಯಾತ ಸಂಗೀತಗಾರರನ್ನು ದುಡ್ಡು ಕೊಟ್ಟು ಕರೆದುಕೊಂಡು ಬರಲಾಗುತ್ತಿತ್ತು. ಆದರೆ. ಈ ಕ್ಷೇತ್ರದ ಮಹಿಮೆ ಕಂಡು ಯಾರೂ ಸಂಭಾವನೆಯನ್ನು ಪಡೆಯುವುದಿಲ್ಲ. ಇದನ್ನು ಸೇವೆಯ ರೀತಿಯಲ್ಲಿ ಅವರು ಕಾಣುತ್ತಾರೆ ಎನ್ನುತ್ತಾರೆ ನಾರಾಯಣ ಒಡೆಯರ.
ಪ್ರತಿ ವರ್ಷ ಸಂಗೀತಾ ಕಟ್ಟಿ, ಜಯತೀರ್ಥ ಮೇವುಂಡಿ, ಮುದ್ದುಕೃಷ್ಣ ಸೇರಿದಂತೆ ಹಲವಾರು ಶ್ರೇಷ್ಠ ಸಂಗೀತಗಾರರು ಯಾವುದೇ ಫಲಾಪೇಕ್ಷೆ ಇಲ್ಲದೇ ಇಲ್ಲಿ ಸಂಗೀತ ಸೇವೆ ಸಲ್ಲಿಸುತ್ತಿದ್ದಾರೆ.
ಜಾತ್ರೆಯ ದಿನ ಶನಿವಾರ ನಸುಕಿನ ಜಾವ ಆರಂಭಗೊಳ್ಳುವ ಸಂಗೀತ ಕಾರ್ಯಕ್ರಮ ಪೂರ್ಣಗೊಳ್ಳುವುದು ಭಾನುವಾರ ಸಂಜೆ. ಶನಿವಾರ ಮಧ್ಯರಾತ್ರಿಯೂ ಸಂಗೀತ ಕಾರ್ಯಕ್ರಮ ನಡೆಯುತ್ತದೆ. ಅದನ್ನು ಕೇಳಲು ಸಹಸ್ರಾರು ಶೋತೃಗಳು ಹಗಲು ರಾತ್ರಿಯನ್ನೆದೆ ಅಲ್ಲಿಯೇ ಕುಳಿತಿರುವುದು ಜಾತ್ರೆಯ ವಿಶೇಷ.
ಈ ಕಾರ್ಯಕ್ರಮ ನಡೆಸಲು ಎಲ್ಲಿಯೂ ದುಡ್ಡು ಸಂಗ್ರಹಿಸುವುದಿಲ್ಲ, ಕೇವಲ ಸಮಾನ ಮನಸ್ಕ ಗೆಳೆಯರೇ ಸೇರಿಕೊಂಡು ತಮ್ಮಲ್ಲಿ ತಾವೇ ಹಣ ಕೂಡಿಸಿ ಈ ಕಾರ್ಯಕ್ರಮ ಆಯೋಜಿಸುತ್ತಿರುವುದು ವಿಶೇಷ. ಈ ವೇದಿಕೆಯ ಆಮಂತ್ರಣ ಪತ್ರಿಕೆಯಲ್ಲಿ ಎಲ್ಲಿಯೂ ಸಂಘಟಕರೊಬ್ಬರ ಹೆಸರನ್ನು ಇವರು ಬರೆಯುವುದಿಲ್ಲ, ಯಾವುದೇ ಪ್ರಚಾರವನ್ನು ಬಯಸುವುದಿಲ್ಲ ಎನ್ನುತ್ತಾರೆ ಆ ವೇದಿಕೆಯ ಮುಂಚೂಣಿಯಲ್ಲಿರುವ ನಾರಾಯಣ ಒಡೆಯರ, ವೆಂಕಟೇಶ ಒಡೆಯರ, ನರಸಿಂಹ ಆಲೂರ, ಪ್ರಸನ್ನಕಟ್ಟಿ, ಸಂತೋಷ ಪೂಜಾರ, ನಾರಾಯಣ ತಾಸಗಾಂವ, ಗಿರೀಶ ದೇಸಾಯಿ, ಗೋಪಾಲ ಗದ್ದನಕೇರಿ.
ಯಲಗೂರೇಶ ಅನುಗ್ರಹ ಪ್ರಶಸ್ತಿ:
ಪ್ರಸಕ್ತ ಸಾಲಿನ ‘ಯಲಗೂರೇಶ ಅನುಗ್ರಹ ಪ್ರಶಸ್ತಿ’ಯನ್ನು ಖ್ಯಾತ ಕಲಾವಿದರಾದ ರೇಣುಕಾ ನಾಕೋಡ, ಪ್ರವೀಣ ಗೋಡಖಿಂಡಿ, ಜಯತೀರ್ಥ ಮೇವುಂಡಿ, ಎಸ್.ಎಲ್.ಎನ್. ಸ್ವಾಮಿ, ಪದ್ಮಶ್ರೀ ವೆಂಕಪ್ಪ ಸುತೇಗಾರ ಅವರಿಗೆ ಫೆ.8ರಂದು ನೀಡಿ ಗೌರವಿಸಲಾಗುತ್ತದೆ.
ಕ್ಷೇತ್ರ ಅಭಿವೃದ್ಧಿಗೆ ಡಿಪಿಎಆರ್
ಪ್ರವಾಸೋದ್ಯಮ ಇಲಾಖೆಯು ಯಲಗೂರು ಗ್ರಾಮವನ್ನು ಸಮಗ್ರವಾಗಿ ಅಭಿವೃದ್ಧಿಗೊಳಿಸಲು ₹55 ಕೋಟಿ ವೆಚ್ಚದಲ್ಲಿ ಡಿಪಿಎಆರ್ ಸಿದ್ಧಪಡಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ ಎಂದು ಯಲಗೂರೇಶ ಅನ್ನಪ್ರಸಾದ ಸೇವಾ ಸಮಿತಿ ಅಧ್ಯಕ್ಷ ಶ್ಯಾಮ ಪಾತ್ರದ ಹಾಗೂ ದೇವಸ್ಥಾನ ಸಮಿತಿಯ ಅಧ್ಯಕ್ಷ ಅನಂತ ಓಂಕಾರ ತಿಳಿಸಿದ್ದಾರೆ. ಸಮುದಾಯ ಭವನ: ಗ್ರಾಮದಲ್ಲಿಪ್ರವಾಸೋದ್ಯಮ ಇಲಾಖೆಯಿಂದ ಸದ್ಯ ₹2 ಕೋಟಿ ವೆಚ್ಚದಲ್ಲಿ ಸಮುದಾಯ ಭವನ ನಿರ್ಮಾಣ ಆರಂಭಗೊಂಡಿದೆ. ಕೆಬಿಜೆಎನ್ ಎಲ್ ನಿಂದ ₹1.5 ಕೋಟಿ ವೆಚ್ಚದಲ್ಲಿ ನದಿ ತೀರದಲ್ಲಿ ಸ್ನಾನ ಗ್ರಹ ನಿರ್ಮಾಣ ಕಾಮಗಾರಿ ನಿಧಾನವಾಗಿದ್ದು ಅದನ್ನು ಶೀಘ್ರವೇ ಆರಂಭಿಸಲಾಗುತ್ತದೆ ಎಂದು ಪಾತ್ರದ ತಿಳಿಸಿದರು. ಹೊಸ ರಥ ನಿರ್ಮಾಣ: ಯಲಗೂರು ಆಂಜನೇಯನ ಕಾರ್ತಿಕೋತ್ಸವದ ಎರಡನೇ ದಿನ ಎಳೆಯುವ ತೇರು ಈಗ ಚಿಕ್ಕದಾಗಿದ್ದು ಅದಕ್ಕಾಗಿ ನೂತನ ಮಾದರಿಯಲ್ಲಿ ₹60 ಲಕ್ಷ ವೆಚ್ಚದಲ್ಲಿ 35 ಅಡಿ ಎತ್ತರದ ರಥ ನಿರ್ಮಾಣಕ್ಕೆ ತೀರ್ಮಾನಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.