ಯಾದಗಿರಿ: ಜಿಲ್ಲೆಯ ಕೇಂದ್ರ ಸ್ಥಾನದಲ್ಲಿರುವ ಅನೇಕ ನಗರಗಳು ಇನ್ನೂ ಮೂಲಸೌಕರ್ಯಗಳಿಲ್ಲದೇ ನರಳುತ್ತಿವೆ. ರಸ್ತೆ, ಚರಂಡಿ, ಶೌಚಾಲಯ, ನೀರಿನಂತಹ ಅಗತ್ಯ ಸೌಕರ್ಯಗಳೇ ಇಲ್ಲದಾಗಿವೆ. ಇನ್ನು ಕೆಲವೆಡೆ ಸೌಲಭ್ಯಗಳನ್ನು ಕಲ್ಪಿಸಿದ್ದರೂ, ಉಪಯೋಗಕ್ಕೆ ಬಾರದಂತಾಗಿದೆ.
ನಗರದ 3 ನೇ ವಾರ್ಡ್ನಲ್ಲಿರುವ ಗಂಗಾನಗರದಲ್ಲಿ ಸಾರ್ವಜನಿಕ ಶೌಚಾಲಯ ನಿರ್ಮಾಣ ಮಾಡಲಾಗಿದ್ದರೂ, ಜನರ ಉಪಯೋಗಕ್ಕೆ ಮಾತ್ರ ಬಾರದಂತಾಗಿದೆ. ಕೇವಲ ನೀರಿನ ಸೌಲಭ್ಯ ಇಲ್ಲದೇ ಇರುವುದರಿಂದ ಲಕ್ಷಾಂತರ ಹಣ ವೆಚ್ಚ ಮಾಡಿ ನಿರ್ಮಿಸಿರುವ ಶೌಚಾಲಯ ನಿರರ್ಥ-ಕವಾಗಿ ನಿಂತಿದೆ.
ಗಂಗಾನಗರದಲ್ಲಿ ಸಾರ್ವಜನಿಕರಿಗೆ ಶೌಚಾಲಯ ನಿರ್ಮಾಣ ಮಾಡಲು ಆರಂಭದಲ್ಲಿ ಬಿಆರ್ಜಿಎಫ್ ಯೋಜನೆಯಡಿ ರೂ.8.5 ಲಕ್ಷ ನೀಡಲಾಗಿತ್ತು. ನಂತರ ಕಾಮಗಾರಿಯ ವೆಚ್ಚ ಬೆಳೆದು ₨11 ಲಕ್ಷ ಅನುದಾನದಲ್ಲಿ ಶೌಚಾಲಯವನ್ನು ಪೂರ್ಣಗೊಳಿಸಲಾಗಿದೆ. ಆದರೆ ಇಷ್ಟೆಲ್ಲ ಮಾಡಿದರೂ, ಈ ಶೌಚಾಲಯಕ್ಕೆ ನೀರಿನ ಸೌಲಭ್ಯವೇ ಇಲ್ಲದಂತಾಗಿದೆ. ಇದರಿಂದಾಗಿ ಪೂರ್ಣಗೊಂಡಿರುವ ಶೌಚಾಲಯ, ಜನರ ಉಪಯೋಗಕ್ಕೆ ಇಲ್ಲದಂತಾಗಿದೆ.
ಗಂಗಾನಗರದಲ್ಲಿ ಹಿಂದುಳಿದ ವರ್ಗದ ಜನರು ಹೆಚ್ಚಾಗಿ ವಾಸಿಸುತ್ತಿದ್ದು, ಇಲ್ಲಿನ ಜನರ ಅನುಕೂಲಕ್ಕಾಗಿ ನಾಲ್ಕು ವರ್ಷಗಳ ಹಿಂದೆ ಶೌಚಾಲಯ ನಿರ್ಮಾಣ ನಿರ್ಧರಿಸಲಾಗಿತ್ತು.
ಮೂರು ವರ್ಷಗಳಲ್ಲಿ ಈ ಶೌಚಾಲಯ ನಿರ್ಮಾಣವಾಗಿದೆ. ನಗರಸಭೆ ವತಿಯಿಂದ ನಿರ್ಮಿಸಿರುವ ಈ ಶೌಚಾಲಯದ ನಿರ್ವಹಣೆಯೇ ಇದೀಗ ಬಹುದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ.
ಶೌಚಾಲಯದ ನಿರ್ವಹಣೆಗಾಗಿ ಬಡಾವಣೆಯ ಪ್ರತಿಯೊಂದು ಮನೆಯಿಂದ ತಿಂಗಳಿಗೆ ₨20 ನೀಡುವಂತೆ ಕೇಳಲಾಗಿತ್ತು. ಜೊತೆಗೆ ನಗರಸಭೆ ವತಿಯಿಂದಲೂ ಸ್ವಲ್ಪ ಹಣವನ್ನು ನಿರ್ವಹಣೆಗೆ ಮೀಸಲಿಡಲು ನಿರ್ಧರಿಸಲಾಗಿತ್ತು. ಆದರೆ ಬಡಾವಣೆಯ ಜನರು ನಿರ್ವಹಣಾ ವೆಚ್ಚ ರೂ.20 ನೀಡುತ್ತಿಲ್ಲ.
ಇದರಿಂದಾಗಿ ಶೌಚಾಲಯದ ನಿರ್ವಹಣೆ ಆಗುತ್ತಿಲ್ಲ ಎನ್ನುವ ಮಾತನ್ನು ನಗರಸಭೆ ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ ಬಡಾವಣೆಯ ಜನರ ಪ್ರಕಾರ, ಈ ಶೌಚಾಲಯಕ್ಕೆ ನೀರಿನ ಸೌಲಭ್ಯವೇ ಇಲ್ಲ. ಹೀಗಾಗಿ ಜನರು ಉಪಯೋಗಿಸಲು ಆಗುತ್ತಿಲ್ಲ. ಉಪಯೋಗಿಸದೇ ನಿರ್ವಹಣಾ ವೆಚ್ಚ ನೀಡಲು ಜನರು ಮುಂದಾಗುತ್ತಿಲ್ಲ.
ಸರ್ಕಾರವೇ ಶೌಚಾಲಯ ನಿರ್ಮಾಣಕ್ಕಾಗಿ ಅನೇಕ ಯೋಜನೆಗಳನ್ನು ಹಮ್ಮಿಕೊಳ್ಳುತ್ತಿದೆ.
ನಿರ್ಮಲ ಭಾರತ ಯೋಜನೆ, ಉದ್ಯೋಗ ಖಾತರಿ ಸೇರಿದಂತೆ ಸುಮಾರು ₨10 ಸಾವಿರ ಅನುದಾನವನ್ನು ವೈಯಕ್ತಿಕ ಶೌಚಾಲಯಗಳಿಗೆ ನೀಡಲಾಗುತ್ತಿದೆ. ಆದರೆ ನಗರಸಭೆಯ ವತಿಯಿಂದಲೇ ₨11 ಲಕ್ಷ ವೆಚ್ಚ ಮಾಡಿ ನಿರ್ಮಾಣ ಮಾಡಿರುವ ಈ ಶೌಚಾಲಯ ಕೇವಲ ನೀರಿನ ಸಮಸ್ಯೆಯಿಂದಾಗಿ ಉಪಯೋಗಕ್ಕೆ ಬಾರದಂತಾಗಿರುವುದು ಬಡಾವಣೆಯ ಜನರ ಆಕ್ರೋಶಕ್ಕೆ ಕಾರಣವಾಗಿದೆ.
ನಿರ್ಮಾಣವಾಗಿರುವ ಶೌಚಾಲಯವನ್ನು ಆದಷ್ಟು ಶೀಘ್ರ ಉದ್ಘಾಟಿಸಬೇಕು. ಬಡಾವಣೆಯ ಜನರಿಗೆ ಅನುಕೂಲ ಮಾಡಿಕೊಡಬೇಕು ಎಂದು ಜನರು ಆಗ್ರಹಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.