ADVERTISEMENT

ಮೂಢನಂಬಿಕೆ ತೊರೆಯಿರಿ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2012, 6:10 IST
Last Updated 22 ಅಕ್ಟೋಬರ್ 2012, 6:10 IST

ಚಿತ್ತಾಪುರ: ಸಮಾಜದಲ್ಲಿ ಬೇರೂರಿರುವ ಅನಿಷ್ಠ ಪದ್ದತಿಗಳಿಂದ ಹಾಗೂ ಮಾನವ ಜೀವನ ಅಂಧಕಾರಕ್ಕೆ ತಳ್ಳುವ ಮತ್ತು ಹಾಳು ಮಾಡುವ ಮೂಢನಂಬಿಕೆಗಳಿಂದ ದೂರವಿರಬೇಕು. ಅವುಗಳನ್ನು ಸಮಾಜದಿಂದ ತೊಲಗಿಸಬೇಕು ಎಂದು ಕಂಬಳೇಶ್ವರ ಸಂಸ್ಥಾನ ಮಠದ ಪೀಠಾಧಿಪತಿ ಸೋಮಶೇಖರ ಶಿವಾಚಾರ್ಯರು ಹಿತೋಪದೇಶ ನೀಡಿದರು.

ಪಟ್ಟಣದ ಸ್ಟೇಷನ್ ತಾಂಡಾದ ಸೇವಾಲಾಲ್ ಮಂದಿರದಲ್ಲಿ ಬಂಜಾರಾ ಸಮಾಜದಿಂದ ಈಚೆಗೆ ಹಮ್ಮಿಕೊಂಡಿದ್ದ ದಸರಾ ಉತ್ಸವ ಕಾರ್ಯಕ್ರಮದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಶ್ರೀಗಳು, ಸಮಾಜದಲ್ಲಿ ಆಚರಣೆಯಲ್ಲಿರುವ ಅನಿಷ್ಠ ಪದ್ದತಿಗಳ ಮತ್ತು ಮೂಢನಂಬಿಕೆ ಬಗ್ಗೆ ಮಾಧ್ಯಮಗಳು ಜನರಲ್ಲಿ ಜಾಗೃತಿ, ಅರಿವು ಮೂಡಿಸುವ ಕಾರ‌್ಯ ಮಾಡುತ್ತಿವೆ. ವೈಜ್ಞಾನಿಕ ಯುಗದಲ್ಲೂ ಜನರು ಮೂಢನಂಬಿಕೆಗಳಿಗೆ ಮಾರು ಹೋಗಿ ಮೋಸ ವಂಚನೆಗೆ ಗುರಿಯಾಗುತ್ತಿದ್ದಾರೆ ಎಂದು ತೀವ್ರ ಬೇಸರ ವ್ಯಕ್ತ ಮಾಡಿದರು.

ಜನರು ಗುರು ಹಿರಿಯರಿಗೆ ಗೌರವ ನೀಡಬೇಕು. ಅವರ ಮಾರ್ಗದರ್ಶನ ಪಡೆದು ಜೀವನ ಸಾರ್ಥಕ ಮಾಡಿಕೊಳ್ಳಬೇಕು. ಜೀವನ ಕೊನೆಯಾಗುವ ಮುಂಚೆ ಏನಾದರೊಂದು ಗುರುತರ ಸಾಧನೆ ಮಾಡಬೇಕು. ಅದು ಸಮಾಜದಲ್ಲಿ ಚಿರ ಕಾಲ ಉಳಿಯುವಂತೆ ಮಾಡುತ್ತದೆ. ಸಮಾಜದಲ್ಲಿ ಕೆಲವರು ಕೇವಲ ಹಣ ಮಾಡುವವರಾಗಿರುತ್ತಾರೆ. ಅವರಿಂದ ಜನರು ಎಚ್ಚರವಾಗಿರಬೇಕು ಎಂದು ಶ್ರೀಗಳು ಹೇಳಿದರು.

ಮುಖ್ಯ ಅತಿಥಿಯಾಗಿದ್ದ ಬಂಜಾರಾ ಸಮಾಜದ ಜಿಲ್ಲಾಧ್ಯಕ್ಷ ಡಾ.ಉಮೇಶ ಜಾಧವ್ ಮಾತನಾಡಿ, ಬಂಜಾರಾ ಜನರು ಶಿಕ್ಷಣಕ್ಕೆ ಮೊದಲಾದ್ಯತೆ ಮತ್ತು ಹೆಚ್ಚಿನ ಪ್ರಾಮುಖ್ಯತೆ ನೀಡಬೇಕು. ಶಿಕ್ಷಣವೇ ಸಮಾಜದ ಬದಲಾವಣೆಯ ಮೂಲ ಬೇರು ಎಂಬುದು ಅರಿತುಕೊಳ್ಳಬೇಕು. ಬಂಜಾರಾ ಜನರು ತಮ್ಮ ಬದುಕಿನ ಎಲ್ಲಾ ಕಷ್ಟಗಳನ್ನು ಎದುರಿಸುವ ಜೊತೆಗೆ ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ಕೊಡಿಸಬೇಕು ಎಂದು ಹೇಳಿದರು.

ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಮುಗುಳನಾಗಾಂವದ ಜೇಮಸಿಂಗ್ ಮಾಹರಾಜರು ಆಶೀರ್ವಚನ ನೀಡಿದರು. ಮುಖಂಡ ಗೋಪಾಲ ರಾಠೋಡ್ ಅತಿಥಿಗಳಾಗಿದ್ದರು. ದಸರಾ ಉತ್ಸವ ಸಮಿತಿ ಅಧ್ಯಕ್ಷ ಗೋವಿಂದ ಚವ್ಹಾಣ್, ಪುರಸಭೆ ಸದಸ್ಯ ಗೋವಿಂದ ನಾಯಕ್, ಶಿವರಾಮ ಚವ್ಹಾಣ್, ಭೀಮಾನಾಯಕ, ವಿಠಲ್ ನಾಯಕ್, ಕಿಶನ್ ನಾಯಕ್, ಚಂದರ್ ನಾಯಕ್, ಬಾಬು ನಾಯಕ್, ತುಕಾರಾಮ್ ನಾಯಕ್, ರಾಮದಾಸ್ ಚವ್ಹಾಣ್, ಶಂಕರ್ ಚವ್ಹಾಣ್, ಭೀಮಸಿಂಗ್ ಚವ್ಹಾಣ್, ದಿಲೀಪ್ ಪವಾರ್, ರವಿ ಜಾಧವ್, ಮೈನೋದ್ದಿನ್ ಚಿಂಚೋಳಿ ಮುಂತಾದವರು ಉಪಸ್ಥಿತರಿದ್ದರು. ಪೋಮು ಚವ್ಹಾಣ್ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ಜಗದೀಶ ಚವ್ಹಾಣ್ ನಿರೂಪಿಸಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.