
ಯಾದಗಿರಿ: ಸುರಪುರ ತಾಲ್ಲೂಕಿನಲ್ಲಿ ಕೃಷ್ಣಾ ನದಿಯಿಂದ ಅನಧಿಕೃತವಾಗಿ ಮರಳು ಗಣಿಗಾರಿಕೆ ನಡೆಸಿದ ಆರೋಪದಡಿ ಏಳು ಹಿಟಾಚಿಗಳು ಹಾಗೂ ₹4 ಕೋಟಿ ಮೌಲ್ಯದ 47,500 ಮೆಟ್ರಿಕ್ ಟನ್ ಮರಳು ಜಪ್ತಿ ಮಾಡಲಾಗಿದೆ.
ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಹಿರಿಯ ಭೂವಿಜ್ಞಾನಿ ವೀರೇಶ ಶಾಂತಪ್ಪ ಅವರು ನೀಡಿದ ದೂರಿನ ಅನ್ವಯ ಹಿಟಾಚಿಗಳ ಆಪರೇಟರ್ ಹಾಗೂ ಮಾಲೀಕರು ಮತ್ತು ಮರಳು ಸಂಗ್ರಹಿಸಿದ ಜಮೀನುಗಳ ಮಾಲೀಕರ ವಿರುದ್ಧ ಸುರಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮರಳು ದಾಸ್ತಾನು ಮಾಡಿಕೊಂಡಿದ್ದ ಮುಷ್ಟಳಿ ಗ್ರಾಮದ ಚೌಡಮ್ಮ ದುರ್ಗಪ್ಪ, ವಸಂತಬಾಯಿ, ಅಕ್ಷತಾ ಜೈನ್, ಅಂಕಿತಾ ಮತ್ತು ರಾಚಮ್ಮ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಮಾಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಧಿಕಾರಿಗಳ ತಂಡಗಳ ಪರಿಶೀಲನೆಯ ವೇಳೆ ನದಿ ದಡದಲ್ಲಿ ಅನಧಿಕೃತವಾಗಿ ಗಣಿಗಾರಿಕೆ ಮಾಡುತ್ತಿದ್ದ ಹಿಟಾಚಿಗಳ ಆಪರೇಟರ್ಗಳು ಓಡಿ ಹೋದರು. ಐವರು ಆರೋಪಿಗಳ ಜಮೀನುಗಳಲ್ಲಿ ₹4 ಕೋಟಿ ಮೌಲ್ಯದ 47,500 ಮೆಟ್ರಿಕ್ ಟನ್ ಮರಳು ಪತ್ತೆಯಾಗಿದೆ. ಕೃಷ್ಣಾ ನದಿಯಿಂದ ಅನಧಿಕೃತವಾಗಿ ಮರಳು ತೆಗೆಯಲು ಬಳಸಿದ್ದ ತಲಾ ₹15 ಲಕ್ಷ ಮೌಲ್ಯದ 7 ಹಿಟಾಚಿಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.