ವಡಗೇರಾ: ತಾಲ್ಲೂಕಿನ ಕ್ಯಾತನಾಳ ಗ್ರಾಮದ ಹೊಸ ಓಣಿಯಲ್ಲಿಮುಸ್ಲಿಂ ಯುವಕ ದಾವೂದ್ ಚಾಕ್ರಿ ಸ್ವಂತ ಖರ್ಚಿನಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡುವ ಮೂಲಕ ಭಾವೈಕ್ಯ ಮೆರೆದಿದ್ದಾರೆ.
‘ಹಬ್ಬದ ಸಂದರ್ಭದಲ್ಲಿ ನಮ್ಮ ಓಣಿಯಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡುತ್ತಿರಲಿಲ್ಲ. ನನ್ನ ಹಿಂದೂ ಸ್ನೇಹಿತರಿಗಾಗಿ ಈ ಬಾರಿ ನಮ್ಮ ಓಣಿಯಲ್ಲಿ ಗಣೇಶ ಚತುರ್ಥಿ ಆಚರಿಸಬೇಕು ಎಂದು ನಿರ್ಧರಿಸಿ ಗೆಳೆಯರಾದ ದೇವಪ್ಪ ಬಾಣಕಾರ, ಭೀಮಣ್ಣ ದೊರೆ ಮತ್ತು ತಾಯಪ್ಪ ಅವರ ಸಹಕಾರದಿಂದ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಲಾಯಿತು’ ಎನ್ನುತ್ತಾರೆ ದಾವೂದ್.
ಕಿರಾಣಿ ವ್ಯಾಪಾರಿಯಾಗಿರುವ ದಾವೂದ್ ಸ್ವಂತ ಹಣದಲ್ಲಿ 3 ಅಡಿಯ ಮೂರ್ತಿ ಖರೀದಿಸಿದ್ದಾರೆ. ಇನ್ನುಳಿದ ಪೂಜೆ ಮತ್ತು ಮಂಟಪದ ಖರ್ಚುಗಳಿಗೆ ಅವರ ಗೆಳೆಯರಾದಅಬ್ದುಲ್, ಮುಸ್ತಫಾ ಕೊಲ್ಮಿ ಸಹಕಾರ ನೀಡಿದ್ದಾರೆ. ಯುವಕರನ್ನು ಕರೆದುಕೊಂಡು ಹೋಗಿ ಶಹಾಪುರ ಪಟ್ಟಣದಿಂದ ಗಣೇಶ ಮೂರ್ತಿ ತಂದು ಭಾನುವಾರ ಪ್ರತಿಷ್ಠಾಪನೆ ಮಾಡಿದ್ದಾರೆ.
ದಾವೂದ್ ಕಾರ್ಯಕ್ಕೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ನನಗೆ ಮೊದಲಿನಿಂದಲೂ ಗಣೇಶ ಹಬ್ಬವೆಂದರೆ ಇಷ್ಟ. ಊರಿನಲ್ಲಿ ನಡೆಯುವ ಪೂಜೆ, ಉರುಸ್ ಸೇರಿದಂತೆ ಎಲ್ಲಾ ಕಾರ್ಯಕ್ರಮಗಳನ್ನು ಹಿಂದು– ಮುಸ್ಲಿಮರು ಒಟ್ಟಾಗಿ ಆಚರಿಸುತ್ತೇವೆ ಎನ್ನುತ್ತಾರೆದಾವೂದ್ ಚಾಕ್ರಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.