ಸುರಪುರ: ‘ಸಾವಯುವ ಗೊಬ್ಬರಗಳಾದ ಕೃಷಿ ತ್ಯಾಜ್ಯಗಳು, ಪ್ರಾಣಿ ತ್ಯಾಜ್ಯಗಳು ಮತ್ತು ಹಸಿರೆಲೆ ಗೊಬ್ಬರಗಳು ಕೃಷಿಯಲ್ಲಿ ಬಳಸುವುದರ ಮಣ್ಣಿನ ಫಲವತ್ತತೆ ಹೆಚ್ಚಾಗುತ್ತದೆ’ ಎಂದು ಕೃಷಿ ವಿಜ್ಞಾನ ಕೇಂದ್ರ ಮುಖ್ಯಸ್ಥ ಅಮರೇಶ ವೈ.ಎಸ್. ಹೇಳಿದರು.
ತಾಲ್ಲೂಕಿನ ಕವಡಿಮಟ್ಟಿಯ ಕೃಷಿ ವಿಜ್ಞಾನ ಕೇಂದ್ರದಲ್ಲಿ ಬುಧವಾರ ರಸಗೊಬ್ಬರಗಳ ಬಳಕೆ ಮತ್ತು ಮಣ್ಣಿನ ಆರೋಗ್ಯ ಕುರಿತು ಕೃಷಿ ಪರಿಕರಗಳ ಮಾರಾಟಗಾರರಿಗೆ ಏರ್ಪಡಿಸಿದ್ದ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಸಾವಯವದಲ್ಲಿ ಸತು ಬಹಳ ಮುಖ್ಯವಾದ ಪೋಷಕಾಂಶವಾಗಿದೆ. ಅದರ ಪ್ರಾಮುಖ್ಯತೆ ಇತರೆ ಪೋಷಕಾಂಶಗಳಾದ ಕಬ್ಬಿಣ, ತಾಮ್ರ, ಮ್ಯಾಂಗನೀಸ್, ಬೋರಾನ್ ಮತ್ತು ಕ್ಲೋರಿನ್ ಪೋಷಕಾಂಶಗಳ ಸಮಾಂತರವಾಗಿ ಬೆಳೆಯ ಇಳುವರಿಗೆ ಪರಿಣಾಮಕಾರಿಯಾಗಿದೆ. ಪ್ರಕೃತಿಗೆ ರಾಸಾಯನಿಕ ಗೊಬ್ಬರ, ಕೀಟನಾಶಕಗಳಿಂದ ಆಗಬಹುದಾದ ಹಾನಿ ತಡೆಗಟ್ಟಬಹುದು’ ಎಂದರು.
ವಿಜ್ಞಾನಿ ಡಾ.ಉಮೇಶ ಭರಿಕರ ಮಾತನಾಡಿ, ‘ರೈತರು ಮಣ್ಣು ಪರೀಕ್ಷೆ ಮಾಡಿಸಿ ಶಿಫಾರಸು ಮಾಡಿದ ಪ್ರಮಾಣದಲ್ಲಿ ರಸಗೊಬ್ಬರಗಳನ್ನು ಹಾಕಬೇಕು. ಮತ್ತು ಸಾವಯವ ಗೊಬ್ಬರಗಳಿಗೆ ಹೆಚ್ಚಿನ ಮಹತ್ವ ಕೂಡಿ’ ಎಂದು ಸಲಹೆ ನೀಡಿದರು.
ವಿಜ್ಞಾನಿ ಡಾ.ಗುರುಪ್ರಸಾದ. ಎಚ್ ಮಾತನಾಡಿ, ‘ಕೃಷಿಯಲ್ಲಿ ಕೀಟಗಳನ್ನು ನಿಯಂತ್ರಿಸಲು ಕೀಟನಾಶಕ ಬಳಕೆಯಿಂದ ಮಾನವ, ಪ್ರಾಣಿ, ಪಕ್ಷಿಗಳಿಗೆ ಹಾನಿಯಾಗುವದಲ್ಲದೆ. ಕೆಲವೊಂದು ಕ್ಷುಲ್ಲಕ ಕೀಟಗಳು ಪ್ರಮುಖ ಕೀಟವಾಗಿ ಪರಿಣಮಿಸಬಹುದು. ಸಾವಯುವ ಕೃಷಿಯಲ್ಲಿ ಸಸ್ಯಮೂಲ, ಕೀಟನಾಶಕ ಮತ್ತು ಜೈವಿಕ ಕೀಟನಾಶಕಗಳ ಬಳಕೆ ಕೀಟ ನಿರ್ವಹಣೆಯಲ್ಲಿ ಹೆಚ್ಚಿನ ಪ್ರಾಮುಖ್ಯತೆಯನ್ನು ಪಡೆಯುತ್ತಿದೆ’ ಎಂದು ಹೇಳಿದರು.
ಕ್ರಿಭ್ಕೋ ಸಂಸ್ಥೆಯ ಹಿರಿಯ ವಲಯ ವ್ಯವಸ್ಥಾಪಕ ಕೆ.ಮುತ್ತುರಾಮಲಿಂಗಂ, ವಿಜ್ಞಾನಿ ಡಾ.ಸತೀಶಕುಮಾರ ಕಾಳೆ, ಕ್ರಿಭ್ಕೋ ಸಂಸ್ಥೆಯ ಕ್ಷೇತ್ರ ಅಧಿಕಾರಿ ಶಶಿಕುಮಾರ ಮಾತನಾಡಿದರು. ಕೋಟ್ರೆಶ್ ಪ್ರಸಾದ ನಿರೂಪಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.