ಯಾದಗಿರಿ: ಸಿ.ಎಸ್.ದ್ವಾರಕನಾಥ್ ಅವರನ್ನು ವಿಧಾನ ಪರಿಷತ್ ಸದಸ್ಯರನ್ನಾಗಿ ನಾಮನಿರ್ದೇಶನ ಮಾಡಬೇಕೆಂದು ಕರ್ನಾಟಕ ರಾಜ್ಯ ಅಲೆಮಾರಿ ಬುಡಕಟ್ಟು ಮಹಾಸಭಾದ ಜಿಲ್ಲಾ ಘಟಕದ ಅಧ್ಯಕ್ಷ ರುದ್ರಪ್ಪ ದೊಡ್ಡಮನಿ ಸರ್ಕಾರಕ್ಕೆ ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿ.ಎಸ್.ದ್ವಾರಕನಾಥ್ ಅವರು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿ, ವಕೀಲರಾಗಿ, ಲೇಖಕರಾಗಿ ತಬ್ಬಲಿ ಸಮುದಾಯಗಳ ಅಸ್ತಿತ್ವಕ್ಕಾಗಿ ನಲವತ್ತು ವರ್ಷಗಳಿಂದ ದುಡಿಯತ್ತಲೇ ಬಂದಿದ್ದಾರೆ. ಇದರೊಂದಿಗೆ ದ್ವಾರಕನಾಥ್ ಅವರು ವಕೀಲರಾಗಿ ನಾಲ್ಕು ದಶಕಗಳ ಕಾಲ ತಳ ಸಮುದಾಯಗಳನ್ನು ಗುರುತಿಸುತ್ತಾ, ಅವರ ಅರ್ಥಿಕ ಪರಿಸ್ಥಿತಿ ಮತ್ತು ಜೀವನ ಶೈಲಿ ಮತ್ತು ಬದುಕುವ ರೀತಿ ಇವುಗಳನ್ನೆಲ್ಲಾ ಅಧ್ಯಯನ ಮಾಡುತ್ತಾ ಸಮಸ್ತ ಅಲೆಮಾರಿ ಸಮುದಾಯದವರ ಬಗ್ಗೆ ಮಾಹಿತಿ ಪಡೆಯುತ್ತಾ ರಾಜ್ಯದಾದ್ಯಂತ ಪ್ರವಾಸ ಮಾಡಿದ್ದಾರೆ’ ಎಂದು ಹೇಳಿದರು.
‘ತಳ ಸಮುದಾಯಗಳಿಗೆ ಬೇಕಾಗುವ ವಸತಿ ಮತ್ತು ಸರ್ಕಾರಿ ಸವಲತ್ತುಗಳ ಬಗ್ಗೆ ಪ್ರತ್ಯೇಕ ಅಲೆಮಾರಿ ಕೋಶವನ್ನು ರಚನೆ ಮಾಡುವಂತೆ ಸರ್ಕಾರದ ಗಮನಕ್ಕೆ ತಂದು ಸಿದ್ದರಾಮಯ್ಯ ಸರ್ಕಾರವು ಅಲೆಮಾರಿ ಅಭಿವೃದ್ಧಿ ಕೋಶ ರಚನೆ ಮಾಡುವಲ್ಲಿ ಮುಖ್ಯವಾದ ಪಾತ್ರ ವಹಿಸಿದ್ದಾರೆ’ ಎಂದು ತಿಳಿಸಿದ್ದಾರೆ.
‘ದ್ವಾರಕನಾಥ್ ಅವರು ಇದೀಗ ಕಾಂಗ್ರೆಸ್ ಪಕ್ಷದ ಸಾಮಾಜಿಕ ನ್ಯಾಯ ವಿಭಾಗದ ರಾಜ್ಯ ಘಟಕದ ಅಧ್ಯಕ್ಷ, ಮುಖ್ಯ ವಕ್ತಾರ ಮತ್ತು ಚುನಾವಣಾ ಪ್ರಚಾರ ಸಮಿತಿಯ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದು, ಕಳೆದ ವಿಧಾನಸಭಾ ಮತ್ತು ಈಗಿನ ಲೋಕಸಭಾ ಚುನಾವಣೆಗಳಲ್ಲಿ ರಾಜ್ಯಜಾದ್ಯಂತ ಮೂಲೆ ಮೂಲೆಗಳನ್ನು ಸುತ್ತಾಡಿ ಪಕ್ಷಕ್ಕಾಗಿ ಅಲೆಮಾರಿ ಸಮುದಾಯಗಳನ್ನು ಒಗ್ಗೂಡಿಸಿ ಪ್ರಜಾಪ್ರಭುತ್ವದ ಬಗ್ಗೆ ಮತ್ತು ಸಾಮಾಜಿಕ ನ್ಯಾಯದ ಬಗ್ಗೆ ಹಾಗೂ ಚುನಾವಣೆಗಳಲ್ಲಿ ನಮ್ಮ ಮತದ ಹಕ್ಕನ್ನು ಚಲಾಯಿಸುವ ಬಗ್ಗೆ ಅರಿವು ಮೂಡಿಸಿದ್ದಾರೆ. ಸಂವಿಧಾನದ ಅರಿವುಳ್ಳಂತಹ ಸಿ.ಎಸ್.ದ್ವಾರಕನಾಥ್ ಅವರನ್ನು ನಮ್ಮೆಲ್ಲರ ಪ್ರತಿನಿಧಿಯಾಗಿ ವಿಧಾನ ಪರಿಷತ್ತಿಗೆ ನಾಮನಿರ್ದೇಶನ ಮಾಡಬೇಕು’ ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮುಖಂಡರಾದ ವೆಂಕಟೇಶ ಕಟ್ಟಿಮನಿ ನಾಯ್ಕಲ್, ಜುಮ್ಮಣ್ಣ ಬಲಶೆಟ್ಟಿಹಾಳ, ವಿರೂಪಾಕ್ಷ ಕಚಕನೂರ, ಲಕ್ಷ್ಮಣ ಡೊಳ್ಳಿ ದಾಸರಗೋಟ, ಈರಣ್ಣ ಅಂಬ್ರಪ್ಪಗೌಡ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.