
ಪೊಲೀಸ್
ಸಾಂದರ್ಭಿಕ ಚಿತ್ರ
ಯಾದಗಿರಿ: ಗಂಡನನ್ನು ಆತನ ಸ್ನೇಹಿತ ಮದ್ಯ ಕುಡಿಸಿ ಕಾಲುವೆಗೆ ತಳ್ಳಿ ಕೊಲೆ ಮಾಡಿದ್ದಾರೆ ಎಂದು ಆರೋಪಿಸಿ ಮೃತರ ಪತ್ನಿ ಗೋಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಸುರಪುರ ತಾಲ್ಲೂಕಿನ ಯಾಳಗಿ ಗ್ರಾಮದ ರಮೇಶ ನಿಂಗಣ್ಣ ಕೊಲೆಯಾದವರು. ಆತನ ಪತ್ನಿ ಹೊನ್ನಮ್ಮ ಅವರು ನೀಡಿದ ದೂರಿನ ಅನ್ವಯ ಮಾಚಗುಂಡಾಳ ಗ್ರಾಮದ ಭರಮರೆಡ್ಡಿ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಹೊನ್ನಮ್ಮ ಅವರು ಜನವರಿ 27ರಂದು ಕೆಂಭಾವಿ ಪೊಲೀಸ್ ಠಾಣೆಯಲ್ಲಿ ಪತಿ ಕಾಣೆಯಾದ ಬಗ್ಗೆ ದೂರು ದಾಖಲಿಸಿದ್ದರು. ಸ್ನೇಹಿತನ ಜೊತೆಗೆ ಕೆಂಭಾವಿಯ ಮುಖ್ಯ ನಾಲೆಯಲ್ಲಿ ಈಜಾಡುತ್ತಿದ್ದಾಗ ನೀರಿನಲ್ಲಿ ಹರಿದುಕೊಂಡು ಇಲ್ಲವೇ ಎಲ್ಲಿಗೋ ಹೋಗಿರಬಹುದು ಎಂದಿದ್ದರು.
ಕಾಲುವೆಯಲ್ಲಿ ಕೊಚ್ಚಿ ಕೊಂಡು ಹೋಗಿದ್ದ ರಮೇಶ ಅವರ ಶವ ಕರಕಳ್ಳಿ ಸಮೀಪದಲ್ಲಿ ಪತ್ತೆಯಾಗಿದೆ. ಆತನ ಸ್ನೇಹಿತ ಭರಮರೆಡ್ಡಿ ಅವರು ಅನ್ಯ ವಿಚಾರಕ್ಕೆ ರಮೇಶ ಬಗ್ಗೆ ದ್ವೇಷ ಬೆಳೆಸಿಕೊಂಡಿದ್ದರು. ಕಂಠಪೂರ್ತಿ ಮದ್ಯ ಕುಡಿಸಿ ಕೆಂಭಾವಿ ಎಪಿಎಂಸಿ ಹಿಂಭಾಗದ ಮುಖ್ಯ ಕಾಲುವೆಗೆ ಈಜಾಡಲು ಕರೆದೊಯ್ದು ನೀರಿನಲ್ಲಿ ತಳ್ಳಿದ್ದಾರೆ ಎಂದು ಆರೋಪಿಸಿ ಪತ್ನಿ ದೂರು ಕೊಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.