ಕಕ್ಕೇರಾ: ಕೃಷಿ ಕಾಯ್ದೆ ತಿದ್ದುಪಡಿಗಳನ್ನು ಹಿಂಪಡೆಯಬೇಕು ಎಂದು ಮಾಜಿ ಶಾಸಕ ರಾಜಾ ವೆಂಕಟಪ್ಪನಾಯಕ ಕೇಂದ್ರ ಸರ್ಕಾರಕ್ಕೆ ಆಗ್ರಹಿಸಿದರು.
ಪಟ್ಟಣದ ಸಾಮೂಹಿಕ ಸಂಘಟನೆಗಳ ವೇದಿಕೆ ವತಿಯಿಂದ ಸೋಮವಾರ ವಾಲ್ಮೀಕಿ ವೃತ್ತದಲ್ಲಿ ಭಾರತ್ ಬಂದ್ ಬೆಂಬಲಿಸಿ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.
ಕೃಷಿ ಕಾಯ್ದೆ ತಿದ್ದುಪಡಿ ದೇಶದ ಜನರನ್ನು ಹಸಿವಿನತ್ತ ತಳ್ಳುವ ಕಾಯ್ದೆಯಾಗಿದೆ. ದೆಹಲಿಯ ಗಡಿಯಲ್ಲಿ 10 ತಿಂಗಳಿಂದ ಸಾವಿರಾರು ರೈತರು ಚಳಿ, ಮಳೆ, ಬಿಸಿಲೆನ್ನದೇ ಪ್ರತಿಭಟನೆ ಮಾಡುತ್ತಿದ್ದರೂ ಕೇಂದ್ರ ಸರ್ಕಾರ ಸ್ಪಂದಿಸಿಲ್ಲ. ಇಂಥ ರೈತ ವಿರೋಧಿ ನಿಲುವು ಹೊಂದಿರುವ ಸರ್ಕಾರವನ್ನು ಹಿಂದೆಂದೂ ನೋಡಿಲ್ಲ ಎಂದರು.
ರೈತ ಮುಖಂಡರಾದ ಚಂದ್ರು ವಜ್ಜಲ್, ಬುಚ್ಚಪ್ಪನಾಯಕ, ಮರೆಪ್ಪ ಮಾತನಾಡಿ, ಬಿಜೆಪಿ ನೇತೃತ್ವದ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ರೈತ ಪರವಾಗಿರದೇ ರೈತರ ಪಾಲಿಗೆ ಮರಣ ಶಾಸನ ಬರೆದು ಬಂಡವಾಳ ಶಾಹಿಗಳ ಪರ ನಿಂತು ರೈತ ವಿರೋಧಿ ನೀತಿ ಅನುಸರಿಸುತ್ತಿದೆ. ಒಳ್ಳೆಯ ದಿನಗಳ ಭರವಸೆ ಕೇವಲ ಭರವಸೆಗಳಾಗಿಯೆ ಉಳಿದಿವೆ ಎಂದರು.
ಮುಖಂಡರಾದ ತಿಪ್ಪಣ್ಣ ಜಂಪಾ, ಗುಂಡಪ್ಪ ಸೊಲ್ಲಾಪುರ, ಪರಮಣ್ಣ ಕುಂಬಾರ, ಪರಮಣ್ಣ ಕಮತಗಿ, ಮೌನೇಶ ಗುರಿಕಾರ, ಪರಮಣ್ಣ ತೇರಿನ್, ವೆಂಕಟೇಶ ಗುರಿಕಾರ, ಪರಮಣ್ಣ ದೊಡ್ಡಮನಿ, ಪರಮಣ್ಣ ಹಡಪದ, ಯಂಕಪ್ಪ ಮಡಿವಾಳ್, ಲಕ್ಕಪ್ಪ ಮೇಲಾ, ಗ್ವಾಲಪ್ಪನಾಯಕ, ಭೀಮು ಮ್ಯಾಗೇರಿ, ಬಸವರಾಜ ಕಮತಗಿ, ಮಹಿಬೂಬ ಸುರಪುರ, ಅಯುಬ್, ಸೋಮು ಬಂದೊಡ್ಡಿ, ದ್ಯಾವಪ್ಪ ಕುರಿ, ಬಾಬು ಶ್ಯಾನಿ ಇದ್ದರು. ನಂತರ ನಾಡಕಚೇರಿ ಸಿಬ್ಬಂದಿ ಬಸವರಾಜ ಅವರಿಗೆ ಮನವಿ ಸಲ್ಲಿಸಲಾಯಿತು.
ಪಟ್ಟಣದ ಅಂಗಡಿ-ಮುಂಗಟ್ಟುಗಳು ಕೆಲವು ಗಂಟೆ ಮುಚ್ಚಿದ್ದವು. ಸಾರಿಗೆ ಸಂಚಾರದಲ್ಲಿ ಯಾವುದೇ ವ್ಯತ್ಯಯವಾಗಲಿಲ್ಲ. ಸರ್ಕಾರಿ ಕಚೇರಿಗಳು ಎಂದಿನಂತೆ ಕಾರ್ಯ ನಿರ್ವಹಿಸಿದವು. ಪಿಎಸ್ಐ ಬಾಷುಮಿಯಾ ಕೊಂಚೂರ ಬಂದೊಬಸ್ತ್ ಮಾಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.