
ವಡಗೇರಾ ಸಾರಿಗೆ ಬಸ್ಸುಗಳು ಸಕಾಲದಲ್ಲಿ ಸಂಚರಿಸದೆ ಇರುವದರಿಂದ ಪಟ್ಟಣದ ವಾಲ್ಮೀಕಿ ವೃತ್ತದಲ್ಲಿ ವಿದ್ಯಾರ್ಥಿಗಳು ಬಸ್ಸಿಗಾಗಿ ಕಾಯುತ್ತಿರುವದು
ವಡಗೇರಾ: ಪಟ್ಟಣದಿಂದ ಪ್ರತಿದಿನ ನೂರಾರು ವಿದ್ಯಾರ್ಥಿಗಳು ಯಾದಗಿರಿ ನಗರದ ವಿವಿಧ ಕಾಲೇಜುಗಳಿಗೆ ತರಳುತ್ತಾರೆ. ಆದರೆ ಮಂಗಳವಾರ ಬಸ್ಸುಗಳು ರದ್ದಾದ ಕಾರಣ ಅನೇಕ ವಿದ್ಯಾರ್ಥಿಗಳು ಪಟ್ಟಣದ ವಾಲ್ಮೀಕಿ ವೃತ್ತದಲ್ಲಿ ಜಮಾಯಿಸಿ ಆಕ್ರೋಶ ವ್ಯಕ್ತಪಡಿಸಿದರು.
ರದ್ದಾದ ಬಸ್ಸುಗಳು: ಈ ಹಿಂದೆ ವಡಗೇರಾ–ಹೈದರಾಬಾದ, ವಡಗೇರಾ–ಕಲಬುರಗಿ, ವಡಗೇರಾ–ಯಾದಗಿರಿ ಬಸ್ಸುಗಳು ಬೆಳಿಗ್ಗೆ 7.30ಕ್ಕೆ ವಡಗೇರಾ ದಿಂದ ಜಿಲ್ಲಾ ಕೇಂದ್ರಕ್ಕೆ ಸಂಚರಿಸುತಿದ್ದವು. ಇದರಿಂದ ವಿದ್ಯಾರ್ಥಿಗಳಿಗೆ ಅನುಕೂಲವಾಗಿತ್ತು. ಆದರೆ ಈ ಬಸ್ಸುಗಳು ರದ್ದಾಗಿರುವುದರಿಂದ ನಮಗೆ ಸಮಸ್ಯೆಯಾಗಿದೆ ಎಂದು ವಿದ್ಯಾರ್ಥಿಗಳು ಅಳಲು ತೋಡಿಕೊಂಡರು.
ಸಂಗಮ್, ಬೆಂಡೆಬೆಂಬಳಿ ಯಿಂದ ಬರುವ ಬಸ್ಸುಗಳು ಬೆಳಿಗ್ಗೆ ತುಂಬಿ ತುಳುಕುತ್ತಾ ಬರುತ್ತವೆ. ಇದರಿಂದ ವಡಗೇರಾ ಪಟ್ಟಣದ ವಿದ್ಯಾರ್ಥಿ–ವಿದ್ಯಾರ್ಥಿನಿಯರು ಬಸ್ನಲ್ಲಿ ಹತ್ತಲು ಸಾಧ್ಯವಾಗಲ್ಲ.
ಬಸ್ ಸಮಸ್ಯೆ: ವಡಗೇರಾ–ಯಾದಗಿರಿ ನಡುವೆ ಬಸ್ ಮೊದಲು ಸಂಚರಿಸುತಿತ್ತು. ಆದರೆ ಆ ಬಸ್ ಸಂಚಾರವನ್ನು ತುಮಕೂರು ಗ್ರಾಮದವರೆಗೆ ವಿಸ್ತರಿಸಿದ್ದರಿಂದ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ. ಇದರಿಂದ ವಿದ್ಯಾರ್ಥಿಗಳಿಗೆ ಬಸ್ನಲ್ಲಿ ಸ್ಥಳವಕಾಶವಿಲ್ಲದೆ ತೊಂದರೆ ಅನುಭವಿಸುವಂತಾಗಿದೆ.
ಅಕ್ಟೋಬರ್ 18 ರಂದು ಸಕಾಲದಲ್ಲಿ ಬಸ್ ಕಲ್ಪಿಸುವಂತೆ ವಿದ್ಯಾರ್ಥಿಗಳು ಯಾದಗಿರಿಯ ಘಟಕ ವ್ಯವಸ್ಥಾಪಕರಿಗೆ ಮನವಿ ಪತ್ರ ಸಲ್ಲಿದ್ದರು. ಆದರೆ ವಿದ್ಯಾರ್ಥಿಗಳ ಮನವಿ ಸ್ಪಂದಿಸದ ಘಟಕ ವ್ಯವಸ್ಥಾಪಕರು ಅನೇಕ ಬಸ್ಸುಗಳನ್ನು ರದ್ದುಪಡಿಸಿ ವಿದ್ಯಾರ್ಥಿಗಳ ಭವಿಷ್ಯದ ಜತೆ ಚಲ್ಲಾಟವಾಡುತಿದ್ದಾರೆ ಎಂದು ಪಾಲಕರು ದೂರಿದರು.
ನೂತನ ತಾಲ್ಲೂಕು ವಡಗೇರಾದಿಂದ ಯಾದಗಿರಿಗೆ ಬೆಳಿಗ್ಗೆ ಬಸ್ ಸಂಚಾರವನ್ನು ಆರಂಭಿಸಿ ಗ್ರಾಮೀಣ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿ ಕೊಡಬೇಕು ಎಂಬುದು ಸಾರ್ವಜನಿಕರ ಒತ್ತಾಸೆಯಾಗಿದೆ.
ಸಮಸ್ಯೆ ನನ್ನ ಗಮನಕ್ಕೆ ಬಂದಿಲ್ಲ. ಕಂಟ್ರೋಲ್ ಪಾಯಿಂಟ್ನಲ್ಲಿ ಇರುವ ಚಾರ್ಟ್ನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು. ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಬಸ್ ವ್ಯವಸ್ಥೆ ಮಾಡಲಾಗುವುದುವಿ.ಆರ್. ರೆಡ್ಡಿ, ಡಿಟಿಒ ಯಾದಗಿರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.