ಸುರಪುರ: ‘ಮಕ್ಕಳು ನಾಳಿನ ಭವಿಷ್ಯ. ಮಕ್ಕಳೇ ರಾಷ್ಟ್ರದ ನಿಜವಾದ ಸಂಪತ್ತು. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಪರಿಶ್ರಮದಿಂದ ಅಭ್ಯಾಸ ಮಾಡಿ ಸಾಧನೆ ಮಾಡುವ ಅಗತ್ಯವಿದೆ’ ಎಂದು ಸಗರನಾಡು ಸೇವಾ ಸಂಸ್ಥೆಯ ಅಧ್ಯಕ್ಷ ಪ್ರಕಾಶ ಅಂಗಡಿ ಕನ್ನೆಳ್ಳಿ ಹೇಳಿದರು.
ರಂಗಂಪೇಟೆಯ ಬಸವೇಶ್ವರ ಕಾಲೇಜಿನಲ್ಲಿ ಮಂಗಳವಾರ ಕಲಬುರಗಿಯ ನೆಹರೂ ಯುವ ಕೇಂದ್ರ, ಕನ್ನೆಳ್ಳಿಯ ಸಗರನಾಡು ಯುವಕ ಸಂಘದ ಸಹಯೋಗದಲ್ಲಿ ನಡೆದ ನೆಹರೂ ಯುವ ಕೇಂದ್ರದ ಸಂಸ್ಥಾಪನಾ ದಿನ ಮತ್ತು ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಎಲ್ಲ ಮಕ್ಕಳಲ್ಲಿ ಒಂದಿಲ್ಲೊಂದು ಸುಪ್ತ ಪ್ರತಿಭೆ ಇರುತ್ತದೆ. ಅದು ಕಲೆ, ಸಾಹಿತ್ಯ, ಓದು, ಕ್ರೀಡೆ ಯಾವುದೇ ಆಗಿರಬಹುದು. ಅದನ್ನು ಗುರುತಿಸಿ ಅವರಲ್ಲಿನ ಪ್ರತಿಭೆಯನ್ನು ಪ್ರೋತ್ಸಾಹಿಸುವ ಅಗತ್ಯವಿದೆ. ಇಂಥ ಮಕ್ಕಳು ದೇಶದ ದೊಡ್ಡ ಆಸ್ತಿಯಾಗಬಲ್ಲರು’ ಎಂದು ಅವರು ತಿಳಿಸಿದರು.
ಪ್ರಾಚಾರ್ಯ ವಿರೇಶ ಹಳಿಮನಿ ಕಾರ್ಯಕ್ರಮ ಉದ್ಘಾಟಿಸಿದರು.
ಸಲೀಂ ಅಡ್ಡೊಡಗಿ ಅವರು ನಿರೂಪಿಸಿದರು. ಅಂಬಿಕಾ ಪ್ರಾರ್ಥಿಸಿದರು.
ಕೃಷ್ಣ ದೇವತ್ಕಲ್ ಸ್ವಾಗತಿಸಿದರು. ಗುರುಸ್ವಾಮಿ ವಂದಿಸಿದರು.
ಶಾಂತು ನಾಯಕ, ಬಲಭೀಮ ಪಾಟೀಲ, ಭಾರತಿ ಪುಜಾರಿ, ರಮೇಶ ನಾಯಕ ಗುರುಗುಂಟಿ ಇದ್ದರು. ವಿವಿಧ ಸ್ಪರ್ಧೆಗಳನ್ನು ಆಯೋಜಿಸಿ ವಿಜೇತರಾದ ಮಕ್ಕಳಿಗೆ ಪಾರಿತೋಷಕ ವಿತರಿಸಲಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.