ADVERTISEMENT

ಪೌರಕಾರ್ಮಿಕರು ಶಿಕ್ಷಣಕ್ಕೆ ಆದ್ಯತೆ ನೀಡಿ: ಶಾಸಕ ವೆಂಕಟರೆಡ್ಡಿ ಮುದ್ನಾಳ ಸಲಹೆ

ಓದು ಬರಹ ಆಂದೋಲನ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 3 ನವೆಂಬರ್ 2021, 6:55 IST
Last Updated 3 ನವೆಂಬರ್ 2021, 6:55 IST
ಯಾದಗಿರಿ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಓದು ಬರಹ ಆಂದೋಲನ ಕಾರ್ಯಕ್ರಮದಲ್ಲಿ ಕಲಿಕಾರ್ಥಿಗಳಿಗೆ ಕಲಿಕಾ ಬೋಧನಾ ಸಾಮಾಗ್ರಿಗಳನ್ನು ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ಆರ್., ಶಾಸಕ ವೆಂಕಟರೆಡ್ಡಿ ಮುದ್ನಾಳ ವಿತರಿಸಿದರು
ಯಾದಗಿರಿ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಓದು ಬರಹ ಆಂದೋಲನ ಕಾರ್ಯಕ್ರಮದಲ್ಲಿ ಕಲಿಕಾರ್ಥಿಗಳಿಗೆ ಕಲಿಕಾ ಬೋಧನಾ ಸಾಮಾಗ್ರಿಗಳನ್ನು ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ಆರ್., ಶಾಸಕ ವೆಂಕಟರೆಡ್ಡಿ ಮುದ್ನಾಳ ವಿತರಿಸಿದರು   

ಯಾದಗಿರಿ: ಪ್ರತಿಯೊಬ್ಬ ಪೌರಕಾರ್ಮಿಕ ಕಡ್ಡಾಯವಾಗಿ ಶಿಕ್ಷಣ ಪಡೆಯುವುದು ಅವಶ್ಯವಿದೆ. ಈ ಆಂದೋಲನ ಮುಗಿದ ಮೇಲೆಯು ನಿರಂತರ ಕಲಿಕೆಯಲ್ಲಿ ತೊಡಗಿಕೊಳ್ಳಬೇಕು. ಶಿಕ್ಷಣದಿಂದ ವಂಚಿತರಾಗಬಾರದು ಎಂದು ಯಾದಗಿರಿ ಶಾಸಕ ವೆಂಕಟರೆಡ್ಡಿ ಮುದ್ನಾಳ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ನಗರಸಭೆ ಹಾಗೂ ಜಿಲ್ಲಾವಯಸ್ಕರ ಶಿಕ್ಷಣ ಇಲಾಖೆ ವತಿಯಿಂದ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ‘ಓದು ಬರಹ ಆಂದೋಲನ’ ಕಾರ್ಯಕ್ರಮದಲ್ಲಿ ಕಲಿಕಾರ್ಥಿಗಳಿಗೆ ಕಲಿಕಾ ಬೋಧನಾ ಸಾಮಾಗ್ರಿಗಳನ್ನು ವಿತರಿಸಿ ಅವರು ಮಾತನಾಡಿದರು.

ಶಿಕ್ಷಣದ ಕೊರತೆ ಇರುವು ದರಿಂದಲೇ ನಿಮಗೆ ಬರುವ ತಿಂಗಳ ಸಂಬಳದ ಮಾಹಿತಿ ಮತ್ತು ಲೆಕ್ಕಪತ್ರಗಳು ಲೆಕ್ಕಕ್ಕೆ ಇಲ್ಲದಂತೆ ಆಗುತ್ತದೆ. ಓದು ಬರಹದಿಂದ ತಿಳಿವಳಿಕೆ ಬರುತ್ತದೆ. ಮತ್ತೊಬ್ಬರು ನಮಗೆ ಮೋಸ ಮಾಡುವುದಿಲ್ಲ. ಅಕ್ಷರ ಕಲಿಯಿರಿ ಎಂದು ಪ್ರೇರೇಪಿಸಿದರು.

ADVERTISEMENT

ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ಆರ್., ಕನ್ನಡ ರಾಜ್ಯೋತ್ಸವ ಅಂಗವಾಗಿ 2021-22 ನೇ ಸಾಲಿನ ಕೇಂದ್ರ ಪುರಸ್ಕೃತ ಓದು ಬರಹ ಆಂದೋಲನವು ಯಾದಗಿರಿ ನಗರದಲ್ಲಿನ ನಗರಸಭೆಯ ಅನಕ್ಷರಸ್ಥ- ಪೌರಕಾರ್ಮಿಕರನ್ನು ಸಾಕ್ಷರರನ್ನಾಗಿ ಮಾಡುವುದೇ ಉದ್ದೇಶವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

ಮಾನವ ಅಭಿವೃದ್ಧಿಗೆ ತೊಡಕಾಗಿ ಕಾಡುತ್ತಿರುವ ಹತ್ತು ಹಲವು ಸಮಸ್ಯೆಗಳಲ್ಲಿ ಅನಕ್ಷರತೆಯೂ ಒಂದಾಗಿದ್ದು, ಇದನ್ನು ತೊಡೆದು ಹಾಕಲು ಹಲವಾರು ಪ್ರಯತ್ನಗಳು ಹಿಂದಿನಿಂದಲೂ ನಡೆಯುತ್ತಿದೆ ಎಂದರು.

ಇಡೀ ದೇಶದಲ್ಲಿಯೇ ಮೊಟ್ಟಮೊದಲ ಬಾರಿಗೆ ಸಾಕ್ಷರತೆಯ ಅಗತ್ಯತೆ ಮನಗಂಡು ಅದನ್ನು ಅನುಷ್ಠಾನಗೊಳಿಸಿದ ಹೆಗ್ಗಳಿಕೆ ಕನ್ನಡ ನಾಡಿನದು. 1912 ರಲ್ಲಿ ಆಗಿನ ಮೈಸೂರು ಸಂಸ್ಥಾನದ ದಿವಾನರಾಗಿದ್ದ ಸರ್ ಎಂ.ವಿಶ್ವೇಶ್ವರಯ್ಯರವರ ದೂರದೃಷ್ಟಿಯ ಫಲವಾಗಿ 7,000 ರಾತ್ರಿ ಶಾಲೆಗಳನ್ನು ಮತ್ತು ಹಲವು ಸಂಚಾರಿ ಪುಸ್ತಕ ಭಂಡಾರಗಳನ್ನು ಪ್ರಾರಂಭಿಸಿದರು ಎಂದರು.

ಜಿ.ಪಂ ಸಿಇಒ ಶಿಲ್ಪಾ ಶರ್ಮಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಿ.ಬಿ.ವೇದಮೂರ್ತಿ, ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಬಸವರಾಜ ಚಂಡ್ರಿಕಿ, ನಗರಸಭೆ ಅಧ್ಯಕ್ಷ ವಿಲಾಸ್ ಪಾಟೀಲ, ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಅಜಿತ್ ನಾಯಕ, ಡಿಡಿಪಿಐ ಶಾಂತಗೌಡ ಪಾಟೀಲ, ನಗರಸಭೆ ಪೌರಾಯುಕ್ತ ಬಕ್ಕಪ್ಪ, ಜಿಲ್ಲಾ ವಯಸ್ಕರ ಕಾರ್ಯಕ್ರಮ ಸಹಾಯಕ ಶ್ರೀಶೈಲ ಹೊಸ್ಮನಿ, ವಯಸ್ಕರ ಯಾದಗಿರಿ ತಾಲ್ಲೂಕು ಸಂಯೋಜಕ ವಿರೂಪಾಕ್ಷ ರೆಡ್ಡಿ ಹಾಗೂ ನಗರಸಭೆ ಪೌರಕಾರ್ಮಿಕರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.