ADVERTISEMENT

ತೈಲ ಬೆಲೆ ಖಂಡಿಸಿ ಕಾಂಗ್ರೆಸ್‌ ಪ್ರತಿಭಟನೆ

ಬೈಸಿಕಲ್‌, ಎತ್ತಿನ ಬಂಡಿ ಏರಿ ವಿನೂತನವಾಗಿ ಜಿಲ್ಲಾ ಕಾಂಗ್ರೆಸ್‌ನಿಂದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 15 ಜೂನ್ 2021, 15:29 IST
Last Updated 15 ಜೂನ್ 2021, 15:29 IST
ಯಾದಗಿರಿ ತಾಲ್ಲೂಕಿನ ರಾಮಸಮುದ್ರದಲ್ಲಿ ಬೈಸಿಕಲ್‌, ಎತ್ತಿನ ಬಂಡಿ ಏರಿ ವಿನೂತನವಾಗಿ ಮಂಗಳವಾರ ಪ್ರತಿಭಟನೆ ನಡೆಸಿದರು
ಯಾದಗಿರಿ ತಾಲ್ಲೂಕಿನ ರಾಮಸಮುದ್ರದಲ್ಲಿ ಬೈಸಿಕಲ್‌, ಎತ್ತಿನ ಬಂಡಿ ಏರಿ ವಿನೂತನವಾಗಿ ಮಂಗಳವಾರ ಪ್ರತಿಭಟನೆ ನಡೆಸಿದರು   

ರಾಮಸಮುದ್ರ (ಯಾದಗಿರಿ): ಕೇಂದ್ರ ಸರ್ಕಾರ ನಿರಂತರವಾಗಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಸುತ್ತಿರುವುದನ್ನು ಖಂಡಿಸಿ ಜಿಲ್ಲಾ ಕಾಂಗ್ರೆಸ್‌ ಸಮಿತಿ ವತಿಯಿಂದ ತಾಲ್ಲೂಕಿನ ರಾಮಸಮುದ್ರದಲ್ಲಿ ಬೈಸಿಕಲ್‌, ಎತ್ತಿನ ಬಂಡಿ ಏರಿ ವಿನೂತನವಾಗಿ ಮಂಗಳವಾರ ಪ್ರತಿಭಟನೆ ನಡೆಸಿದರು.

ಈ ವೇಳೆ ಮಾತನಾಡಿದ ವಿಧಾನ ಪರಿಷತ್ ಮಾಜಿ ಸದಸ್ಯ ಚನ್ನಾರೆಡ್ಡಿ ಪಾಟೀಲ ತುನ್ನೂರು, ‘ದೇಶದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಪ್ರತಿನಿತ್ಯ ಏರಿಕೆಯಾಗುತ್ತಿದ್ದು, ಇದು ಜನಸಾಮಾನ್ಯರ ಮೇಲೆ ಹೊರೆಯಾಗಿದೆ. ಸರಕು ಸಾಗಣೆ ವಾಹನಗಳ ಮೇಲೆಯೂ ಪ್ರಭಾವ ಬೀರುತ್ತಿದೆ. ದರ ಏರಿಕೆ ದವಸ, ಧಾನ್ಯಗಳ ಏರಿಕೆಗೂ ಕಾರಣವಾಗಿದೆ. ಹೀಗಾಗಿ ಬೈಸಿಕಲ್‌, ಎತ್ತಿನ ಬಂಡಿ ಏರಿ ವಿನೂತನವಾಗಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದರು.

‘ರೈತ, ಜನಸಾಮಾನ್ಯ ವಿರೋಧಿಯಾಗಿರುವ ಕೇಂದ್ರ, ರಾಜ್ಯ ಬಿಜೆಪಿ ಸರ್ಕಾರ ಪೆಟ್ರೋಲ್, ಡೀಸೆಲ್ ಮೇಲೆ ವಿಧಿಸುತ್ತಿರುವ ಅವೈಜ್ಞಾನಿಕ ತೆರಿಗೆಯೇ ಇದಕ್ಕೆ ಕಾರಣವಾಗಿದೆ. ಕೂಡಲೇ ತೆರಿಗೆ ರದ್ದು ಮಾಡಿ ಕಡಿಮೆ ಬೆಲೆ ತೈಲ ಸಿಗುವಂತೆ ಮಾಡಬೇಕು’ ಎಂದು ಆಗ್ರಹಿಸಿದರು.

ADVERTISEMENT

ಇದಕ್ಕೂ ಮುಂಚೆ ರಾಮಸಮುದ್ರ ಗ್ರಾಮದ ಮುಖ್ಯರಸ್ತೆಯಿಂದ ಪೆಟ್ರೋಲ್‌ ಬಂಕ್‌ ಇರುವ ಬಳಿ ಜಮಾಯಿಸಿ ಬಿಜೆಪಿ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು.

ಪ್ರತಿಭಟನೆಯಲ್ಲಿ ಜಿಲ್ಲಾ ಕಾಂಗ್ರೆಸ್‌ ಘಟಕದ ಅಧ್ಯಕ್ಷ ಮರಿಗೌಡ ಹುಲಕಲ್‌, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಸುದರ್ಶನ ನಾಯಕ, ಕಲಬುರ್ಗಿ ಕಾಡಾ ಮಾಜಿ ಅಧ್ಯಕ್ಷ ಶ್ರೀನಿವಾಸ ರೆಡ್ಡಿ ಕಂದಕೂರ, ಮಹಿಳಾ ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷೆ ಮಂಜುಳಾ ಗೂಳಿ, ಕೆಪಿಸಿಸಿ ವೀಕ್ಷಕ ರಾಘವೇಂದ್ರ ಮಾನಸಗಲ್‌, ಬ್ಲಾಕ್‌ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಸೋಮಶೇಖರ ಮಸ್ಕನಹಳ್ಳಿ, ಸುರೇಶ ಜೈನ್‌, ಮಲ್ಲಣ್ಣ ದಾಸಕನಕೇರಿ, ಭಾಸ್ಕರ ರಾಮಸಮುದ್ರ, ದೇವಿಂದ್ರ ಹಳಿಗೇರ ಸೇರಿದಂತೆ ಮೈಲಾಪುರ, ಅರಕೇರಾ (ಕೆ), ಹಳಿಗೇರ, ಹೊಸಳ್ಳಿ ಗ್ರಾಮಸ್ಥರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.