ಹಣಮಂತ ಇಟಗಿ
ಯಾದಗಿರಿ: ‘ಮೊದಲ ಪ್ರಧಾನಮಂತ್ರಿಯ ಆಯ್ಕೆಯ ವೇಳೆ ಕೇವಲ ಒಂದು ಮತ ಪಡೆದಿದ್ದ ಜವಾಹರಲಾಲ್ ನೆಹರೂ ಅವರು ಸರ್ದಾರ್ ವಲ್ಲಭಬಾಯಿ ಪಟೇಲ್ ವಿರುದ್ಧ ಸೋತಿದ್ದರೂ ಅಡ್ಡದಾರಿಯಲ್ಲಿ ಪ್ರಧಾನಿಯಾಗಿದ್ದರು. ಅದು ದೇಶದ ಮೊದಲ ಮತಗಳ್ಳತನ. ಕಾಂಗ್ರೆಸ್ ನಿಜವಾದ ಮತಗಳ್ಳ ಪಕ್ಷ’ ಎಂದು ಜಿಲ್ಲಾ ಬಿಜೆಪಿ ವಕ್ತಾರ ಹಣಮಂತ ಇಟಗಿ ಆರೋಪಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿದ ಅವರು, ‘1952ರಲ್ಲಿ ಮೌಲಾನಾ ಆಜಾದ್ 20 ಸಾವಿರ ಮತಗಳ ಅಂತರದಿಂದ ಸೋತಿದ್ದರು. ಆದರೆ, ಅಂದಿನ ಪ್ರಧಾನಿ ನೆಹರೂ ಅವರು ಉತ್ತರಪ್ರದೇಶದ ಸಿಎಂ ಗೋವಿಂದ ಬಲ್ಲಬ್ ಪಂತ್ ಅವರಿಗೆ ಕರೆ ಮಾಡಿ ಒತ್ತಡ ಹಾಕಿದ ನಂತರ, ಗೆದ್ದ ಅಭ್ಯರ್ಥಿಯ ಬ್ಯಾಲೆಟ್ ಕದ್ದು, ಸೋತ ಮೌಲಾನಾ ಅವರ ಡಬ್ಬಿಯಲ್ಲಿ ಹಾಕುವ ಮೂಲಕ ಅವರನ್ನು ಗೆಲ್ಲಿಸಿದ್ದರು’ ಎಂದಿದ್ದಾರೆ.
‘ಮಾಜಿ ಪ್ರಧಾನಿ ದಿ.ಇಂದಿರಾ ಗಾಂಧಿಯವರೂ ಚುನಾವಣೆಯಲ್ಲಿ ಅಡ್ಡದಾರಿಯಿಂದ ಗೆಲುವು ಸಾಧಿಸಿದ್ದು ನ್ಯಾಯಾಲಯದಲ್ಲಿ ಸಾಬೀತಾದ ಕಾರಣ ಅವರ ಆಯ್ಕೆ ಅಸಿಂಧುಗೊಂಡಿದ್ದ ವಿಷಯ ಎಲ್ಲರಿಗೂ ಗೊತ್ತಿದೆ. ಈಗ ಬಿಜೆಪಿ ಮತಗಳ್ಳತನ ಮಾಡಿದೆ ಎಂದು ಸುಳ್ಳು ಆರೋಪಿಸುತ್ತಿದೆ. ಅವರ ಆರೋಪ ನಿಜವಾಗಿದ್ದರೆ ಬಿಜೆಪಿಯ ಸಂಖ್ಯಾಬಲ 304 ಸಂಸದರಿಂದ 240ಕ್ಕೆ ಕುಸಿಯುತ್ತಿರಲಿಲ್ಲ’ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.