ವಡಗೇರಾ: ತಾಲ್ಲೂಕಿನ ಜೋಳದಡಗಿ ಗ್ರಾಮದ ಅನತಿ ದೂರದಲ್ಲಿರುವ ಬ್ರೀಜ್ ಕಮ್ ಬ್ಯಾರೇಜ್ನಲ್ಲಿ ನದಿಗೆ ನೀರು ಕುಡಿಯಲು ಹೋದ ಆಕಳ ಮೇಲೆ ಮೊಸಳೆ ಹಠಾತ್ ದಾಳಿ ಮಾಡಿ ಎಳೆದುಕೊಂಡು ಹೋದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಶನಿವಾರ ಮಧ್ಯಾಹ್ನ ಆಕಳು ನೀರು ಕುಡಿಯಲು ಕೃಷ್ಣಾ ನದಿಯ ತಟಕ್ಕೆಹೋಗಿ ನೀರು ಕುಡಿಯುವ ಸಮಯದಲ್ಲಿ ಮೊಸಳೆಯು ಆಕಳ ಮೇಲೆ ಎರಗಿ ಎಳೆದುಕೊಂಡು ಹೋಗಿ ಬ್ಯಾರೇಜಿನ ಗೇಟ್ ಹತ್ತಿರ ಬಿಟ್ಟಿದೆ.
ಸತ್ತ ಆಕಳಿನಿಂದ ದುರ್ವಾಸನೆ ಬರುತ್ತಿದ್ದು, ಸುತ್ತಲಿನ ಪರಿಸರವು ಗಬ್ಬು ನಾರುತ್ತಿದೆ. ಹಾಗೆಯೇ ಜೋಳದಡಗಿ, ಕೊಂಗಂಡಿ ಹಾಗೂ ಇನ್ನಿತರ ಗ್ರಾಮದ ಮಹಿಳೆಯರು ಬಟ್ಟೆ ಒಗೆಯಲು ಹಾಗೂ ಕೆಲವೊಂದು ವೇಳೆ ಕುಡಿಯಲು ನೀರನ್ನು ಬಳಕೆ ಮಾಡುತ್ತಾರೆ. ಮೊಸಳೆಗಳು ಮಧ್ಯಾಹ್ನ ವೇಳೆ ನದಿಯ ತಟದಲ್ಲಿ ಬಂದು ಬಿಸಿಲಿಗೆ ಮೈಯೊಡ್ಡಿ ನೀರಿಗೆ ಇಳಿಯುವ ಜಾನುವಾರು ಮೇಲೆ ದಾಳಿ ಮಾಡಲು ಹೊಂಚುಹಾಕಿ ಕುಳಿತುಕೊಳ್ಳತ್ತವೆ. ‘ಕೃಷ್ಣಾ ನದಿಯಲ್ಲಿ ಸಾಕಷ್ಟು ಮೊಸಳೆಗಳಿದ್ದು, ಯಾವುದೇ ನಾಮಫಲಕವಾಗಲಿ ಹಾಗೂ ಎಚ್ಚರಿಕೆ ಫಲಕವಾಗಲಿ ಸಂಬಂಧಪಟ್ಟ ಇಲಾಖೆಯವರು ಅಳವಡಿಸಿಲ್ಲ’ ಎಂದು ಗ್ರಾಮಸ್ಥರು ಆರೋಪಿಸುತ್ತಾರೆ.
‘ಪ್ರತಿವರ್ಷ ಬೇಸಿಗೆ ಕಾಲದಲ್ಲಿ ಮೊಸಳೆಗಳು ಜನ ಜಾನುವಾರುಗಳ ಮೇಲೆ ದಾಳಿ ಮಾಡುತ್ತವೆ. ಕೆಲವೊಂದು ವೇಳೆ ಜೀವ ಹಾನಿಗಳಾದ ಘಟನೆಗಳು ನಡೆದಿವೆ. ಸಂಬಂಧಪಟ್ಟ ಇಲಾಖೆ ಅಧಿಕಾರಿಗಳ ಮೃತ ಆಕಳಿನ ದೇಹವನ್ನು ನೀರಿನಿಂದ ಹೊರತೆಗೆಯಲು ಕ್ರಮ ಕೈಗೊಳ್ಳಬೇಕು’ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.