ADVERTISEMENT

ಹುಣಸಗಿ: ಶ್ರೀಶೈಲ ಪಾದಯಾತ್ರಿಗಳಿಗೆ ಭಕ್ತಿ ಸೇವೆ, ಯುವಕರಿಂದ ಧಾರ್ಮಿಕ ರೀಲ್ಸ್‌!

ಹುಣಸಗಿ: ಯಾತ್ರಿಗಳಿಗೆ ಹಣ್ಣು, ನೀರು, ಅನ್ನ ವಿತರಣೆ

ಭೀಮಶೇನರಾವ ಕುಲಕರ್ಣಿ
Published 29 ಮಾರ್ಚ್ 2024, 5:44 IST
Last Updated 29 ಮಾರ್ಚ್ 2024, 5:44 IST
ಹುಣಸಗಿ ಪಟ್ಟಣದ ಮಾರ್ಗವಾಗಿ ಶ್ರೀಶೈಲಕ್ಕೆ ತೆರಳುತ್ತಿರುವ ಭಕ್ತರು ಮರಗಾಲು ಕಟ್ಟಿಕೊಂಡು ನಡೆಯುತ್ತಿರುವದು
ಹುಣಸಗಿ ಪಟ್ಟಣದ ಮಾರ್ಗವಾಗಿ ಶ್ರೀಶೈಲಕ್ಕೆ ತೆರಳುತ್ತಿರುವ ಭಕ್ತರು ಮರಗಾಲು ಕಟ್ಟಿಕೊಂಡು ನಡೆಯುತ್ತಿರುವದು   

ಹುಣಸಗಿ: ಪಾದಯಾತ್ರೆ ಮೂಲಕ ಶ್ರೀಶೈಲಕ್ಕೆ ತೆರಳುತ್ತಿರುವ ಭಕ್ತರು ತಾಲ್ಲೂಕಿನ ಮೂಲಕ ತಮ್ಮ ಪ್ರಯಾಣ ಮುಂದುವರಿಸಿದ್ದಾರೆ. ಕಳೆದ ಮೂರು ದಿನಗಳಿಂದಲ ಹಗಲು ರಾತ್ರಿ ಎನ್ನದೇ ಅಸಖ್ಯಾಂತ ಭಕ್ತರು ಈ ಮಾರ್ಗವಾಗಿ ತೆರಳುತ್ತಿದ್ದಾರೆ.

ನೆರೆಯ ವಿಜಯಪುರ, ಬಾಗಲಕೋಟೆ ಹಾಗೂ ಮಹಾರಾಷ್ಟ್ರದ ಗಡಿ ಭಾಗಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಪಾದಯಾತ್ರೆ ಕೈಗೊಂಡಿದ್ದು ಮಹಿಳೆಯರು ಇರುವುದು ವಿಶೇಷವಾಗಿದೆ.

ಯಾತ್ರೆಯಲ್ಲೂ ರೀಲ್ಸ್: ಕೆಲ ಯುವಕರು ಪಾದಯಾತ್ರೆಯಲ್ಲೂ ಧಾರ್ಮಿಕ ರೀಲ್ಸ್‌ಗಳನ್ನು ಹಾಗೂ ಪಾದಯಾತ್ರೆಯ ಲೈವ್ ವಿಡಿಯೊಗಳನ್ನು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವುದು ಕಂಡುಬಂತು. ಕೆಲ ಭಕ್ತರು ಭಜನೆಗೆ ಮೊರೆ ಹೋಗಿದ್ದರೆ ಕೆಲವರು ಹಲಗೆ ವಾದನಕ್ಕೆ ತಕ್ಕಂತೆ ಮಲ್ಲಯ್ಯನಿಗೆ ಜೈಕಾರ ಹಾಕುತ್ತಾ ಹೆಜ್ಜೆ ಹಾಕುತ್ತಿದ್ದರು.

ADVERTISEMENT

ತಾಲ್ಲೂಕು ಮಾರ್ಗವಾಗಿ ತೆರಳುವ ಪಾದಯಾತ್ರಿಗಳಳಿಗೆ ಗಡಿ ಆರಂಭದ ಗ್ರಾಮವಾದ ಮಾಳನೂರು ಗ್ರಾಮದಿಂದ ಪ್ರತಿ ಗ್ರಾಮದಲ್ಲಿಯೂ ಭಕ್ತರ ಆರೈಕೆ ಕೇಂದ್ರ ಹಾಗೂ ಶುದ್ಧ ಕುಡಿಯುವ ನೀರು, ಮಜ್ಜಿಗೆ, ಹಾಲು ಹಣ್ಣು ಸೇರಿದಂತೆ ತಮ್ಮ ಶಕ್ತಿಗೆ ತಕ್ಕಂತೆ ಸೇವೆ ಮಾಡುತ್ತಿದ್ದಾರೆ.

‘ವಿರಕ್ತ ಮಠದಲ್ಲಿ ಕಳೆದ ಮೂವತ್ತು ವರ್ಷಗಳಿಂದಲೂ ಶ್ರೀಶೈಲ ಯಾತ್ರಾರ್ಥಿಗಳಿಗೆ ರಾತ್ರಿ ಪ್ರಸಾದದ ವ್ಯವಸ್ಥೆ ಮಾಡಲಾಗುತ್ತಿದೆ’ ಎಂದು ಶಿವಲಿಂಗಸ್ವಾಮಿ ವಿರಕ್ತಮಠ ಹೇಳಿದರು.

ಪಟ್ಟಣದ ಹೊರವಲಯದಲ್ಲಿರುವ ಖೊಜ್ಜಾಪುರ ಗ್ರಾಮ ದೇವತೆ ದೇವಸ್ಥಾನದ ಬಳಿ ಬಸವರಾಜಸ್ವಾಮಿ ಸ್ಥಾವರಮಠ ಅವರು ಸುಮಾರು 10 ದಿನಗಳ ಕಾಲ ನಿರಂತರ ದಾಸೋಹ ವ್ಯವಸ್ಥೆ ಮಾಡುತ್ತಾ ಬಂದಿದ್ದಾರೆ. ಮುಖ್ಯ ರಸ್ತೆಯಲ್ಲಿರುವ ಸಣ್ಣ ವ್ಯಾಪಾರಸ್ಥರು ಪಾದಯಾತ್ರಿಗಳಿಗೆ ಹಣ್ಣುಗಳನ್ನು ವಿತರಿಸುತ್ತಿದ್ದಾರೆ. 

ಶ್ರೀಶೈಲಕ್ಕೆ ತೆರಳುವ ಭಕ್ತರಿಗೆ ಯಾವುದೇ ತೊಂದರೆಯಾದಲ್ಲಿ ಅವರಿಗೆ ಉಚಿತ ಸೇವೆ ಒದಗಿಸುವದಾಗಿ ವೈದ್ಯ ವೀರಭದ್ರಗೌಡ ಹೊಸಮನಿ ಹೇಳಿದರು.

‘ತಾಲ್ಲೂಕಿನ ಬಹುತೇಕ ಗ್ರಾಮಗಳ ಜನರು ಪಾದಯಾತ್ರಿಗಳಿಗೆ ಅನ್ನಪ್ರಸಾದ ವ್ಯವಸ್ಥೆ ಮಾಡುತ್ತಿದ್ದಾರೆ’ ಎಂದು ಅಥಣಿ ತಾಲ್ಲೂಕಿನ ಮುರಗುಂಡಿಯ ಮಲ್ಲಿಕಾರ್ಜುನ ಪ್ರಜಾವಾಣಿಗೆ ತಿಳಿಸಿದರು.

ಮಹಾರಾಷ್ಟ್ರದ ಕೆಲ ಭಕ್ತರು ಮರಗಾಲು (ಕಾಲಿಗೆ ಉದ್ದನ ಕಟ್ಟಿಗೆ) ಕಟ್ಟಿಕೊಂಡು ಕಂಬಿಯನ್ನು ಹೊತ್ತುಕೊಂಡು ತೆರಳುತ್ತಿರುವುದು ಜನರನ್ನು ಆಕರ್ಷಿಸುತ್ತಿದೆ.

ಕಲ್ಲದೇವನಹಳ್ಳಿ ಗ್ರಾಮದ ಖಾಸ್ಗತೇಶ್ವರ ಶಾಂತಾಶ್ರಮದಲ್ಲಿ ಗ್ರಾಮಸ್ಥರು ದಾಸೋಹ ಕಾರ್ಯದಲ್ಲಿ ನಡೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.