ಯಾದಗಿರಿ: ನವದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯ (ಏಮ್ಸ್) ನಿರ್ದೇಶಕರಾಗಿ ಯಾದಗಿರಿಯ ಡಾ. ಎಂ.ಶ್ರೀನಿವಾಸ್ ನೇಮಕವಾಗಿದ್ದಾರೆ. ಅವರು ಪ್ರಸ್ತುತ ಹೈದರಾಬಾದ್ನ ಇಎಸ್ಐಸಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಡೀನ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಯಾದಗಿರಿಯ ಸ್ಟೇಷನ್ ಬಜಾರ್ನ ನಿವಾಸಿಗಳಾದ ಆಶೆಪ್ಪ ಮತ್ತು ಸರೋಜಾ ಅವರ ಪುತ್ರರಾದ ಡಾ. ಎಂ.ಶ್ರೀನಿವಾಸ್ ಅವರ ಸಹೋದರ ನಾಗರಾಜ ಕಲಬುರಗಿಯ ಇಎಸ್ಐ ಆಸ್ಪತ್ರೆಯಲ್ಲಿ ವೈದ್ಯರಾಗಿದ್ದಾರೆ. ಅವರು ಕಲಿತ ನಗರದ ನ್ಯೂ ಕನ್ನಡ ಶಾಲೆಯಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಸಂಭ್ರಮಿಸಿದರು. ವಿದ್ಯಾರ್ಥಿಗಳಿಗೆ ಚಾಕ್ಲೇಟ್ ವಿತರಿಸಲಾಯಿತು.
ಕನ್ನಡ ಮಾಧ್ಯಮದಲ್ಲೇ ಓದಿದ ಶ್ರೀನಿವಾಸ ಅವರು ಪ್ರಾಥಮಿಕ ಶಿಕ್ಷಣವನ್ನು ಯಾದಗಿರಿಯ ಎಂಪಿಎಸ್ ಶಾಲೆ, ಪ್ರೌಢಶಿಕ್ಷಣ ನ್ಯೂ ಕನ್ನಡ ಶಾಲೆ ಮತ್ತು ಪಿಯು ಶಿಕ್ಷಣವನ್ನು ಜೂನಿಯರ್ ಕಾಲೇಜಿನಲ್ಲಿ ಪಡೆದರು. ನಂತರ ಬಳ್ಳಾರಿಯಲ್ಲಿ ಎಂ.ಬಿ.ಬಿ.ಎಸ್, ದಾವಣಗೆರೆ ಜೆಜೆಎಂ ವೈದ್ಯಕೀಯ ಕಾಲೇಜಿನಲ್ಲಿ ಎಂ.ಎಸ್ ವ್ಯಾಸಂಗ ಮಾಡಿದರು. ಏಮ್ಸ್ನಲ್ಲಿ ಎಂಸಿಎಚ್ ಅಭ್ಯಾಸ ಮಾಡಿದ ಅವರು ಅಲ್ಲಿಯೇ ಮಕ್ಕಳ ಶಸ್ತ್ರಚಿಕಿತ್ಸೆ ತಜ್ಞ ವೈದ್ಯರಾಗಿ ಸೇವೆ ಸಲ್ಲಿಸಿದರು.
‘ಅಣ್ಣ ಎಂ.ಶ್ರೀನಿವಾಸ ಅವರು ಏಮ್ಸ್ ನಿರ್ದೇಶಕರಾಗಿದ್ದು ಸಂತಸ ತಂದಿದೆ’ ಎಂದು ಸಹೋದರ ಡಾ. ನಾಗರಾಜ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.