ಸೈದಾಪುರ: ಉತ್ತಮ ಸಾಧನೆಗೆ ಸ್ಪರ್ಧಾ ಮನೋಭಾವನೆ ಮುಖ್ಯವಾಗಿದೆ. ಇದನ್ನು ಪರಿಗಣಿಸಿ ಸಂಸ್ಥೆಯಲ್ಲಿ ಅಭ್ಯಾಸ ಮಾಡಿದ ಹಳೆ ವಿದ್ಯಾರ್ಥಿಗಳು ಸೇರಿಕೊಡು ಪ್ರೋತ್ಸಾಹ ಧನದ ನೆರವು ನೀಡಲಾಗುತ್ತಿದೆ ಎಂದು ವಿದ್ಯಾ ವರ್ಧಕ ಪ್ರೌಢ ಶಾಲೆಯ ಹಳೆ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ನಿರಂಜನರೆಡ್ಡಿ ಪಾಟೀಲ ಶೆಟ್ಟಹಳ್ಳಿ ಹೇಳಿದರು.
ಪಟ್ಟಣದ ವಿದ್ಯಾ ವರ್ಧಕ ಪ್ರೌಢ ಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆದ ಚಂದ್ರಶೇಖರ ಮೌನೇಶ ಹಾಗೂ ಭವಾನಿ ಮಲ್ಲೇಶಪ್ಪ ವಿದ್ಯಾರ್ಥಿಗಳಿಗೆ ತಲಾ ₹10 ಸಾವಿರ ರೂಪಾಯಿಯ ಪ್ರೋತ್ಸಾಹ ಧನದ ಚೆಕ ವಿತರಣೆ ಮಾಡಿ ಅವರು ಮಾತನಾಡಿದರು.
ಈ ಸಂಸ್ಥೆಯಲ್ಲಿ ಅಭ್ಯಾಸ ಮಾಡಿದ 45 ಕ್ಕಿಂತ ಹೆಚ್ಚಿನ ವಿದ್ಯಾರ್ಥಿಗಳು ಉತ್ತಮ ಸ್ಥಾನದಲ್ಲಿ ಇದ್ದೇವೆ. ಇದನ್ನು ಪರಿಗಣಿಸಿ 1987-88ನೇ ಸಾಲಿನ ಹಳೆ ವಿದ್ಯಾರ್ಥಿಗಳ ಸಂಘ ರಚನೆ ಮಾಡಿ ಹಣವನ್ನು ಠೇವಣಿ ಮಾಡಿದ್ದೇವೆ ಎಂದು ಹೇಳಿದರು.
ಪ್ರತಿ ವರ್ಷ ಅದರಿಂದ ಬಂದ ಬಡ್ಡಿಯಿಂದ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನೀಡಲಾಗುತ್ತಿದೆ. ನೀವು ಕೂಡ ಇದರ ಸದುಪಯೋಗ ಪಡೆದುಕೊಂಡು ಉತ್ತಮ ಸಾಧನೆ
ಮಾಡುವುದರೊಂದಿಗೆ ಮುಂದಿನ ದಿನಗಳಲ್ಲಿ ನಿಮ್ಮಿಂದಲು ನೆರವು ನೀಡುವ ಸಾಮರ್ಥ್ಯ ಬರಲಿ ಎಂದು ಹಾರೈಸಿದರು.
ಮುಖ್ಯಗುರು ಲಿಂಗಾರೆಡ್ಡಿ ನಾಯಕ ಮಾತನಾಡಿ, ಹಳೆ ವಿದ್ಯಾರ್ಥಿಗಳ ಈ ಕಾರ್ಯ ಉತ್ತಮವಾಗಿದೆ ಎಂದು ಹೇಳಿದರು. ಪ್ರಾಂಶುಪಾಲ ಜಿ.ಎಂ.ಗುರುಪ್ರಸಾದ, ಶಿಕ್ಷಕ ಜಿ.ಎಸ್.ಗುರುನಂಜಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.