ಕೆಂಭಾವಿ: ಸಮರ್ಪಕ ವಿದ್ಯುತ್ ಪೂರೈಕೆಗೆ ಆಗ್ರಹಿಸಿ ರೈತ ಕೃಷಿ ಕಾರ್ಮಿಕ ಸಂಘಟನೆ ನೇತೃತ್ವದಲ್ಲಿ ರೈತರು ಪಟ್ಟಣದ ಜೆಸ್ಕಾಂ ಕಚೇರಿ ಎದುರು ಶನಿವಾರ ಪ್ರತಿಭಟನೆ ನಡೆಸಿದರು. ಶಾಖಾಧಿಕಾರಿಗೆ ಮನವಿ ಸಲ್ಲಿಸಿದರು.
ನಗನೂರ, ಗೌಡಗೇರಾ, ಖಾನಾಪೂರ, ಗೊಗಡಿಹಾಳ ಸೇರಿ ಹಲವು ಗ್ರಾಮಗಳ ನೂರಾರು ರೈತರು ಜೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿ ಇಲಾಖೆ ವಿರುದ್ಧ ಘೋಷಣೆ ಕೂಗಿದರು.
ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ಶರಣಗೌಡ ಗೂಗಲ್ ಮಾತನಾಡಿ,‘ದೊಡ್ಡ ಕೈಗಾರಿಕೆಗಳಿಗೆ ಸರ್ಕಾರ ಮನಬಂದಂತೆ ವಿದ್ಯುತ್ ನೀಡುತ್ತಿದೆ. ರೈತರಿಗೆ ವಂಚನೆ ಮಾಡುತ್ತಿದೆ. ಸರ್ಕಾರದ ಆದೇಶದನ್ವಯ ರೈತರ ಪಂಪ್ಸೆಟ್ಗಳಿಗೆ 7 ಗಂಟೆ ವಿದ್ಯುತ್ ನೀಡಬೇಕು. ಹದಿನೈದು ದಿನಗಳಿಂದ ದಿನಕ್ಕೆ 1 ರಿಂದ 2 ಗಂಟೆ ಮಾತ್ರ ವಿದ್ಯುತ್ ನೀಡಲಾಗುತ್ತಿದೆ. ಇದರಿಂದ ರೈತರಿಗೆ ತೊಂದರೆಯಾಗುತ್ತಿದೆ’ ಎಂದು ಹೇಳಿದರು.
ಕೆಂಭಾವಿ 110 ಕೆವಿ ವಿದ್ಯುತ್ ವಿತರಣಾ ಕೇಂದ್ರಕ್ಕೆ ಒಳಪಡುವ ಎಲ್ಲ ಗ್ರಾಮಗಳ ರೈತರ ಸ್ಥಿತಿ ಇದೇ ಆಗಿದೆ. ಬೆಳೆಗಳಿಗೆ ನೀರು ಹರಿಸುವ ಸಮಯದಲ್ಲಿ ಜೆಸ್ಕಾಂ ಇಲಾಖೆ ರೈತರ ಜತೆ ಚೆಲ್ಲಾಟ ಆಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೆಲ ಸಮಯ ಪ್ರತಿಭಟನಾಕಾರರು ಮತ್ತು ಶಾಖಾಧಿಕಾರಿ ಮಧ್ಯೆ ಜಟಾಪಟಿ ನಡೆಯಿತು.
ನಾಳೆಯಿಂದ ಏಳು ಗಂಟೆ ವಿದ್ಯುತ್ ನೀಡುವುದಾಗಿ ಶಾಖಾಧಿಕಾರಿ ಶ್ರೀಶೈಲ್ ಭರವಸೆ ನೀಡಿದ ಕಾರಣ ಪ್ರತಿಭಟನೆ ಹಿಂಪಡೆದು ಮನವಿ ಪತ್ರ ಸಲ್ಲಿಸಲಾಯಿತು.
ಸಿದ್ದಣ್ಣ ಗೂಗಲ್, ಗುರುನಾಥರೆಡ್ಡಿ ವಣಕ್ಯಾಳ, ಗುರಪ್ಪಗೌಡ ಹೊಸಗೌಡ, ಗುರುಲಿಂಗಪ್ಪ ತಳವಾರ, ಬಸಣ್ಣ ದೇಶಪಾಂಡೆ, ವೆಂಕಟೇಶ ಮಾಲಿ ಪಾಟೀಲ, ಮಹೇಶ ಬಡಿಗೇರ, ದೇವೇಂದ್ರ ಹಿರೇಗೌಡ, ಬೀರಪ್ಪ ಪೂಜಾರಿ, ರಾಚಣ್ಣ ಕುಂಬಾರ, ದೇವಪ್ಪ ಕಟ್ಟಿಮನಿ, ತಿಪ್ಪಣ್ಣ ಬಿರಾದಾರ, ಗುರಡ್ಡಿ ವಣ್ಯಕ್ಯಾಳ್, ಭೀಮಣ್ಣ ಅಸನಪುರ ಹಾಗೂ ಅಯ್ಯಣ್ಣ ಬಾಚಿಮಟ್ಟಿ ಇದ್ದರು.
‘ನಗನೂರು ಭಾಗದಲ್ಲಿ ದುರಸ್ತಿಗೆ ಲೈನ್ಮ್ಯಾನ್ಗಳಿಗೆ ಹಣ ನೀಡಬೇಕು. ಹಣ ನೀಡದವರಿಗೆ ವಿದ್ಯುತ್ ಕಡಿತಗೊಳಿಸಿ ಸತಾಯಿಸಲಾಗುತ್ತದೆ. ಇದನ್ನು ಇಲಾಖೆ ಗಂಭೀರವಾಗಿ ಪರಿಗಣಿಸಿ ರೈತರಿಗೆ ನ್ಯಾಯ ಒದಗಿಸಬೇಕು’ ಎಂದು ರೈತ ಬಾಲಪ್ಪ ನಗನೂರ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.