ಶಹಾಪುರ: ‘ಗ್ರಾಹಕರಿಗೆ ಉತ್ತಮ ಸೇವೆ ನೀಡುವ ಭರದಲ್ಲಿ ರಾಷ್ಟ್ರೀಕೃತ, ಗ್ರಾಮೀಣ ಪ್ರದೇಶದ ಅಲ್ಲದೆ ಪಟ್ಟಣ ಸಹಕಾರ ಬ್ಯಾಂಕಿನಲ್ಲಿ ಗ್ರಾಹಕರಿಗೆ ಚಿನ್ನವನ್ನು ಅಡಮಾನವಾಗಿಟ್ಟುಕೊಂಡು ಸಾಲ ನೀಡುತ್ತಿದ್ದಾರೆ. ಆದರೆ ಕೆಲ ಬ್ಯಾಂಕಿನಲ್ಲಿ ನಕಲಿ ಚಿನ್ನವನ್ನು ಇಟ್ಟು ಸಾಲ ಪಡೆದುಕೊಂಡಿದ್ದಾರೆ ಎಂಬ ಸುದ್ದಿ ಹರಿದಾಡುತ್ತಲಿದೆ. ಇದರ ಬಗ್ಗೆ ಸಮಗ್ರವಾದ ತನಿಖೆ ನಡೆಸಬೇಕು ಹಾಗೂ ಗ್ರಾಹಕರಿಗೆ ಸುಳ್ಳು ಸುದ್ದಿ ಹರಡುತ್ತಿದ್ದರೆ ಲೀಡ್ ಬ್ಯಾಂಕಿನ ಹಿರಿಯ ಅಧಿಕಾರಿಗಳು ಸ್ಪಷ್ಟಪಡಿಸಬೇಕು’ ಎಂದು ಬಿಜೆಪಿಯ ಹಿರಿಯ ಮುಖಂಡ ಯಲ್ಲಯ್ಯ ನಾಯಕ ವನದುರ್ಗ ಲೀಡ್ ಬ್ಯಾಂಕಿನ ಅಧಿಕಾರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಅವರು, ‘ಅಡಮಾನ ಇಡಲು ತಂದಿರುವ ಚಿನ್ನವನ್ನು ಖಾತರಿಪಡಿಸುವ ವ್ಯಕ್ತಿಯ ಪ್ರಮಾಣ ಪತ್ರದ ಭರವಸೆಯ ಮೇಲೆ ಹತ್ತು ಗ್ರಾಂ. ಚಿನ್ನಕ್ಕೆ ಶೇ 75ರಷ್ಟು ಮೊತ್ತದ ಸಾಲವನ್ನು ಗ್ರಾಹಕರಿಗೆ ನೀಡುತ್ತಿದ್ದಾರೆ. ಚಿನ್ನ ಖಾತರಿಪಡಿಸುವ ವ್ಯಕ್ತಿಗೆ ಯಾವುದೇ ಹೊಣೆಗಾರಿಕೆ ಇರುವುದಿಲ್ಲ. ಚಿನ್ನ ಪಡೆಯುವ ವ್ಯಕ್ತಿ ಮತ್ತು ಚಿನ್ನ ಖಾತರಿಪಡಿಸುವ ವ್ಯಕ್ತಿ ಶಾಮೀಲಾಗಿ ಬ್ಯಾಂಕಿನ ಅಧಿಕಾರಿಗೆ ದಾರಿ ತಪ್ಪಿಸಿ ಮೋಸದಿಂದ ಸಾಲ ಪಡೆಯುವ ಸಾಧ್ಯತೆ ಹೆಚ್ಚಾಗಿದೆ’ ಎಂದು ಅವರು ಅನುಮಾನ ವ್ಯಕ್ತಪಡಿಸಿದ್ದಾರೆ.
‘ಲೀಡ್ ಬ್ಯಾಂಕಿನ ಹಿರಿಯ ಅಧಿಕಾರಿಯು ಸುತ್ತೋಲೆ ಹೊರಡಿಸಿ ಯಾವ ಬ್ಯಾಂಕಿನಲ್ಲಿ ಎಷ್ಟು ಅಡಮಾನವಿಟ್ಟು ಚಿನ್ನದ ಸಾಲ ಪಡೆದಿದ್ದಾರೆ ಎಂಬುದನ್ನು ತನಿಖೆ ನಡೆಸಬೇಕು.ಅದರಲ್ಲಿ ಮುಖ್ಯವಾಗಿ ನಗರದ ಪಟ್ಟಣ ಸಹಕಾರ ಬ್ಯಾಂಕಿನಲ್ಲಿ ಇಂತಹ ಅಕ್ರಮ ನಡೆದಿರುವ ಬಗ್ಗೆ ಅನುಮಾನವನ್ನು ಜನತೆ ವ್ಯಕ್ತಪಡಿಸಿದ್ದಾರೆ. ಗ್ರಾಹಕರು ಬ್ಯಾಂಕಿನ ಮೇಲೆ ಇಟ್ಟ ವಿಶ್ವಾಸ ಹಾಗೂ ಭರವಸೆಯ ನಂಬಿಕೆಯನ್ನು ಹೆಚ್ಚಿಸಬೇಕು’ ಎಂದು ಅವರು ಮನವಿ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.