ADVERTISEMENT

ಗುಣಮಟ್ಟದ ಶಿಕ್ಷಣಕ್ಕಾಗಿ ಗುರುಕುಲ ಪದ್ಧತಿ ಮರುಕಳಿಸಲಿ: ಸಿದ್ಧಲಿಂಗ ಶಿವಾಚಾರ್ಯ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2026, 5:07 IST
Last Updated 4 ಮಾರ್ಚ್ 2026, 5:07 IST
ಕೆಂಭಾವಿ ಸಮೀಪ ಮುನೀರ್ ಬೊಮ್ಮನಹಳ್ಳಿ ಗ್ರಾಮದಲ್ಲಿ ಸೋಮವಾರ ಅಮರೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಉಜ್ಜಯನಿ ಮಹಾಸಂಸ್ಥಾನದ ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯರ ಸನ್ನಿಧಿಯಲ್ಲಿ ಧರ್ಮಸಭೆ ಜರುಗಿತು
ಕೆಂಭಾವಿ ಸಮೀಪ ಮುನೀರ್ ಬೊಮ್ಮನಹಳ್ಳಿ ಗ್ರಾಮದಲ್ಲಿ ಸೋಮವಾರ ಅಮರೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಉಜ್ಜಯನಿ ಮಹಾಸಂಸ್ಥಾನದ ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯರ ಸನ್ನಿಧಿಯಲ್ಲಿ ಧರ್ಮಸಭೆ ಜರುಗಿತು   

ಕೆಂಭಾವಿ: ‘ಇಂದು ಶಿಕ್ಷಣ ಕ್ಷೇತ್ರದಲ್ಲಿ ಆಗುತ್ತಿರುವ ಹಲವು ಬದಲಾವಣೆಗಳಿಂದ ಶೈಕ್ಷಣಿಕ ಗುಣಮಟ್ಟ ಸಂಪೂರ್ಣ ಕುಸಿಯುತ್ತಿದೆ, ಹೀಗಾಗಿ ಹಿಂದಿನ ಗುರುಕುಲ ಪದ್ದತಿಯೇ ಮತ್ತೆ ತರುವ ಅನಿವಾರ್ಯತೆ ಬಂದಿದೆ’ ಎಂದು ಎಂದು ಉಜ್ಜಯನಿ ಮಹಾಸಂಸ್ಥಾನದ ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯರು ಹೇಳಿದರು.

ಸಮೀಪದ ಮುನೀರ್ ಬೊಮ್ಮನಹಳ್ಳಿ ಗ್ರಾಮದಲ್ಲಿ ಸೋಮವಾರ ಅಮರೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ನಡೆದ ಅಡ್ಡ ಪಲ್ಲಕ್ಕಿ ಮಹೋತ್ಸವ ಹಾಗೂ ಧರ್ಮ ಸಭೆಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

‘ಕೇವಲ ಅಂಕಪಟ್ಟಿಗಾಗಿ ಶಿಕ್ಷಣ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿವೆ. ಅಂದಿನ ಗುಡಿ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣದ ಜೊತೆಗೆ ಸಂಸ್ಕಾರ, ಸಂಪ್ರದಾಯ ಮತ್ತು ನೈತಿಕೆ ಪ್ರಜ್ಞೆ ಮೂಡಿಸುವ ಶಿಕ್ಷಣವನ್ನು ಕಲಿಸುತ್ತಿದ್ದರು. ಆದರೆ ತಾಂತ್ರಿಕ ಯುಗದ ಧಾವಂತದಲ್ಲಿ ವಿದ್ಯಾರ್ಥಿಗಳಲ್ಲಿ ನೈತಿಕ ಪ್ರಜ್ಞೆ ಸಂಪೂರ್ಣ ಕುಸಿಯುತ್ತಿದ್ದು ಇದರಿಂದ ಶಿಕ್ಷಣ ಗುಣಮಟ್ಟವೂ ಕಡಿಮೆಯಾಗುತ್ತಿದೆ’ ಎಂದರು.

ADVERTISEMENT

‘ಮಠ, ಮಂದಿರ, ದೇವರು, ಸನಾತನ ಸಂಸ್ಕೃತಿ, ಸಂಸ್ಕಾರ, ಸಂಪ್ರದಾಯ ಸೇರಿದಂತೆ ಮೊದಲಾದ ಧರ್ಮ ನಿಷ್ಠೆಯ ವಿಧಗಳನ್ನು ನಮ್ಮ ದೇಶದಲ್ಲಿ ಕಾಣಬಹುದು. ದೇವರಿಗೆ ನಮ್ಮ ಜನರು ಅರ್ಪಿಸುವ ಭಕ್ತಿಯಲ್ಲಿ ಯಾವುದೆ ಲೋಪದೋಷ ಕಾಣುವುದಿಲ್ಲ. ಎಂಥಾ ನಾಸ್ತಿಕ ವ್ಯಕ್ತಿಯಾದರೂ ಒಂದು ಸಮಯದಲ್ಲಿ ದೇವರಲ್ಲಿ ನಂಬಿಕೆ ಬಂದು ಶರಣು ಹೋಗುವುದೆ ನಮ್ಮ ದೇಶದ ಸಂಸ್ಕೃತಿ’ ಎಂದರು.

‘ಸಾಮಾಜಿಕ ಪ್ರಜ್ಞೆ, ಗುರುಹಿರಿಯರ ಮೇಲೆ ಭಕ್ತಿ, ಸನಾತನ ಧರ್ಮ ರಕ್ಷಣೆ, ಸಂಸ್ಕಾರ ಇವುಗಳನ್ನು ಶಿಕ್ಷಣ ಕ್ಷೇತ್ರದಲ್ಲಿ ಕಲಿಸುವ ಕ್ರಾಂತಿಯಾಗಬೇಕು. ಅಂದಾಗ ಮಾತ್ರ ಧರ್ಮ ಜಾಗೃತಿ ಮತ್ತಷ್ಟು ಹೆಚ್ಚುತ್ತದೆ. ಗುಡುಗುಂಟಿ ಕ್ಷೇತ್ರಕ್ಕೂ ಮತ್ತು ಈ ಗ್ರಾಮಕ್ಕೂ ನಮ್ಮ ಮಹಾಸಂಸ್ಥಾನ ಅವಿನಾಭಾವ ಸಂಬಂಧ ಹೊಂದಿದೆ’ ಎಂದರು.

ಹಿರೂರ ಜಯಸಿದ್ಧೇಶ್ವರ ಶಿವಾಚಾರ್ಯರು ನಾಂದಿ ನುಡಿಗಳನ್ನು ಹೇಳಿದರು.

ಮಾಗಣಗೇರಿ ವಿಶ್ವರಾಧ್ಯಾ ಶಿವಾಚಾರ್ಯರು, ಗುಂಡಕನಾಳ ಗುರುಲಿಂಗ ಶಿವಾಚಾರ್ಯರು, ಆಲಮೇಲ ಚಂದ್ರಶೇಖರ ಶಿವಾಚಾರ್ಯರು, ಮುದನೂರ ಸಿದ್ದಚನ್ನಮಲ್ಲಿಕಾರ್ಜುನ ಶಿವಾಚಾರ್ಯರು, ಮುದನೂರ-ರಸ್ತಾಪೂರ ಗಿರಿಧರ ಪಂಡಿತಾರಾಧ್ಯಾ ಶಿವಾಚಾರ್ಯರು, ಯಂಕಂಚಿ ರುದ್ರಮುನಿ ಶಿವಾಚಾರ್ಯರು ಸೇರಿದಂತೆ ಎಮ್. ಬೊಮ್ಮನಹಳ್ಳಿ ಹಾಗೂ ಯಕ್ತಾಪೂರ ಗ್ರಾಮದ ಹಲವು ಮಠಾಧೀಶರು, ಪ್ರಮುಖರು ಇದ್ದರು. ಅಮರಯ್ಯಸ್ವಾಮಿ ಜಾಲಿಬಂಚಿ ನಿರೂಪಣೆ ಮಾಡಿದರು.

ಕಠಿನ ಕಾನೂನು ಜಾರಿ ತನ್ನಿ’

‘ನಮ್ಮ ದೇಶದಲ್ಲಿ ಉಚಿತ ಶಿಕ್ಷಣ ಪಡೆದು ಹೊರ ರಾಷ್ಟ್ರಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ವಿದ್ಯಾರ್ಥಿಗಳಿಗೆ ಸರ್ಕಾರ ಕಠಿಣ ಕಾನೂನು ತರಬೇಕು. ಉಚಿತ ಶಿಕ್ಷಣ ಪಡೆದ ಪ್ರತಿಯೊಬ್ಬರೂ ನಮ್ಮ ದೆಶದಲ್ಲಿ ಕನಿಷ್ಠ ಹತ್ತು ವರ್ಷ ಸೇವೆ ಸಲ್ಲಿಸಬೇಕು ಎಂಬ ಕಾನೂನು ತಂದಾಗ ಮಾತ್ರ ಉಚಿತ ಶಿಕ್ಷಣಕ್ಕೆ ಮಹತ್ವ ಬರುವುದರ ಜೊತೆಗೆ ನಮ್ಮ ಹೊಸ ಆವಿಷ್ಕಾರಗಳು ಬರಲು ಸಾಧ್ಯ’ ಎಂದು ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.