ಯರಗೋಳ: ಸುತ್ತಲಿನ ಗ್ರಾಮಗಳಲ್ಲಿ ಭಾನುವಾರ ಮಧ್ಯಾಹ್ನ ಸುರಿದ ಗುಡುಗು, ಮಿಂಚು, ಬಿರುಗಾಳಿ ಸಹಿತ ಸುರಿದ ಜೋರಾದ ಮಳೆಗೆ ಮರಗಳು, ವಿದ್ಯುತ್ ಕಂಬಗಳು ನೆಲಕ್ಕೆ ಬಿದ್ದಿವೆ, ಮನೆಯ ಮೇಲಿನ ಪತ್ರಾಸ್ಗಳು ಹಾರಿಹೋಗಿವೆ.
ಚಾಮನಹಳ್ಳಿ ಗ್ರಾಮದಲ್ಲಿ ಸಂಪೂರ್ಣ ಗ್ರಾಮವೇ ನೀರುಮಯವಾಗಿದೆ, ಮನೆಗಳಲ್ಲಿ ನೀರು ಹೊಕ್ಕು ದವಸ ಧಾನ್ಯಗಳು, ನೀರು ಪಾಲಾಗಿವೆ. ಅಲ್ಲಿಪುರ ಗ್ರಾಮದ ರಸ್ತೆ ಮೇಲೆ ನಿಂತಿದ್ದ ಆಟೋ ,ಟ್ರ್ಯಾಕ್ಟರ್ ಮೇಲೆ ಮರ ಬಿದ್ದಿವೆ. ಖಾನಳ್ಳಿ ಗ್ರಾಮದಲ್ಲಿ ಮರಗಳು, ವಿದ್ಯುತ್ ಕಂಬಗಳು ಬಿದ್ದು ಅಪಾರ ಪ್ರಮಾಣದ ನಷ್ಟವಾಗಿದೆ. ಯಡ್ಡಳ್ಳಿ ಗ್ರಾಮದಲ್ಲಿ ಮೋಹನ್ ಬಸವಲಿಂಗಪ್ಪ ಅವರ ಮನೆ ಮೇಲೆ ಮರ ಬಿದ್ದಿದೆ. ಕಂಚಗಾರಹಳ್ಳಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆ ಮೇಲೆ ಮರಗಳು ಬಿದ್ದಿವೆ.
ಹೆಡಗಿಮದ್ರಾ, ಅಬ್ಬೆತುಮಕೂರಿನಲ್ಲಿ ವಿದ್ಯುತ್ ಕಂಬ, ಮರಗಳು ಬಿದ್ದ ವರದಿಯಾಗಿದೆ. ಹೂನಗೇರಾ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಮೇಲೆ ವಿದ್ಯುತ್ ಕಂಬಗಳು ಬಿದ್ದಿವೆ. ಬಂದಳ್ಳಿ, ಹತ್ತಿಕುಣಿ, ಬೆಳಗೇರಾ, ಕೊಟಗೇರಾ, ಕಟ್ಟಿಗೆ ಶಹಪುರ, ಮೋಟ್ನಳ್ಳಿ, ಕೆ. ಹೊಸಳ್ಳಿ, ಚಿಂತಕುಂಟ, ಬೋಮ್ ಚಟ್ನಳ್ಳಿ, ಮುದ್ನಾಳ, ಮಲ್ಕಪ್ನಳ್ಳಿ, ಅರಿಕೇರಾ .ಬಿ, ಅಚ್ಚೋಲಾ, ವಡ್ನಳ್ಳಿ ಗ್ರಾಮಗಳಲ್ಲಿ ಮಳೆಯಿಂದಾಗಿ ತಗ್ಗು ಪ್ರದೇಶಗಳಲ್ಲಿ ನೀರು ನಿಂತು ಸಂಚಾರಕ್ಕೆ ತೊಂದರೆ ಆಗಿದೆ.
ಬಹುತೇಕ ಗ್ರಾಮಗಳಲ್ಲಿ ವಿದ್ಯುತ್ ಕಂಬಗಳು ಬಿದ್ದು, ವಿದ್ಯುತ್ ವ್ಯತ್ಯಯ ಉಂಟಾಗಿದೆ. ಜೋಪಡಿಗಳು, ಮನೆಯ ಮೇಲಿನ ಪತ್ರಾಸ್ಗಳು ಬಿರುಗಾಳಿಗೆ ಹಾರಿ ಹೋಗಿವೆ. ಆಡು ,ಕುರಿ ಹಟ್ಟಿಗಳಲ್ಲಿ ಮಳೆ ನೀರಿಂದ ತೊಂದರೆಯಾಗಿದೆ. ಹಳ್ಳ, ಕೆರೆಗಳಲ್ಲಿ ನೀರು ಹರಿದು ಬರುತ್ತಿದೆ. ಶುದ್ಧ ಕುಡಿಯುವ ನೀರಿನ ಅಭಾವ ಎದುರಾಗಿದ್ದು, ಸಾರ್ವಜನಿಕರಲ್ಲಿ ಕಾಲರಾ ಭೀತಿ ಆವರಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.