ಯಾದಗಿರಿ ತಾಲ್ಲೂಕಿನ ಸೌದಾಗರ್ ತಾಂಡಾದಲ್ಲಿ ಮನೆಗೆ ನುಗ್ಗಿದ ಮಳೆ ನೀರು
ಯಾದಗಿರಿ: ನಗರವೂ ಸೇರಿದಂತೆ ಜಿಲ್ಲೆಯ ಹಲವೆಡೆ ಗುರುವಾರ ರಾತ್ರಿಯಿಂದ ಶುರುವಾದ ಮಳೆ ಬಿಟ್ಟುಬಿಡದೆ ಸುರಿಯುತ್ತಿದೆ.
ರಾತ್ರಿ ಹತ್ತರ ಸುಮಾರಿಗೆ ಆರಂಭಗೊಂಡ ಜಿಟಿಜಿಟಿ ಮಳೆ ಶುಕ್ರವಾರ ಬೆಳಗಿನ ಜಾವದ ವರೆಗೆ ಸುರಿಯಿತು. ಬಳಿಕ ಕೆಲಕಾಲ ಬಿರುಸಾಗಿ ಸುರಿದ ಮಳೆ ಮತ್ತೆ ಜಿಟಿಜಿಟಿಯಾಗಿ ಬೀಳುತ್ತಿದೆ. ಜನಜೀವನ ಅಸ್ತವ್ಯಸ್ತವಾಗಿದೆ.
ಬಿಡುವು ಕೊಡದೆ ಮಳೆ ಸುರಿಯುತ್ತಿರುವುದರಿಂದ ಶುಕ್ರವಾರ ಬೆಳಿಗ್ಗೆ ದೈನಂದಿನ ಕೆಲಸಕ್ಕೆ ಹೋಗುವವರಿಗೆ ತೊಂದರೆಯಾಯಿತು. ಕೆಲವರು ಮಳೆಯಲ್ಲೇ ನೆನೆದುಕೊಂಡು ಹೋದರು. ಮತ್ತೆ ಕೆಲವರು ಕೊಡೆಗಳನ್ನು ಆಶ್ರಯಿಸಿಕೊಂಡು ಹೆಜ್ಜೆ ಹಾಕಿದರು. ಕೃಷಿ ಚಟುವಟಿಕೆಗಳು ಸಂಪೂರ್ಣವಾಗಿ ಸ್ಥಗಿತಗೊಂಡವು. ವ್ಯಾಪಾರ ವಹಿವಾಟಿಗೂ ಹಿನ್ನಡೆಯಾಗಿದೆ.
ಲಕ್ಷ್ಮಿ ನಗರ, ಕೋಳಿವಾಡ, ರೈಲ್ವೆ ಸ್ಟೇಷನ್ ಏರಿಯಾ, ಮಹಾತ್ಮ ಗಾಂಧಿ ವೃತ್ತ, ರೈಲ್ವೆ ನಿಲ್ದಾಣ ಪ್ರದೇಶ, ಚಿತ್ತಾಪುರ ರಸ್ತೆ, ಹಳೆ, ಹೊಸ ಬಸ್ ನಿಲ್ದಾಣ, ಚಕ್ರಕಟ್ಟಾ, ಕನಕದಾಸ ವೃತ್ತ, ಹೊಸಳ್ಳಿ ಕ್ರಾಸ್, ಗಂಜ್ ಪ್ರದೇಶ, ರಾಜೀವ ಗಾಂಧಿ ನಗರ, ಮಾತಾ ಮಾಣಿಕೇಶ್ವರ ಕಾಲೊನಿ ಸೇರಿದಂತೆ ಹಲವೆಡೆಯ ರಸ್ತೆಗಳಲ್ಲಿ ನೀರು ಹರಿದಾಡಿತು.
ಮನೆಗೆ ನುಗ್ಗಿದ ನೀರು: ತಾಲ್ಲೂಕಿನ ಸೌದಾಗರ್ ತಾಂಡಾದ ಮನೆ, ದನದ ಕೊಟ್ಟಿಗೆಗಳಿಗೆ ಮಳೆಯ ನೀರು ನುಗ್ಗಿದೆ. ಮನೆಯಲ್ಲಿನ ದವಸ ಧಾನ್ಯಗಳು ನೀರಲ್ಲಿ ಕೊಚ್ಚಿಕೊಂಡು ಹೋಗಿವೆ. ನಿವಾಸಿಗಳು ನಿದ್ರೆ ಇಲ್ಲದೆ ಇಡೀ ರಾತ್ರಿ ಎಚ್ಚರವಾಗಿದ್ದರು.
'ನನ್ನ ಮಗ ಮುಂಬೈಗೆ ಕೆಲಸಕ್ಕಾಗಿ ವಲಸೆ ಹೋಗಿದ್ದಾನೆ. ಜೋಪಡಿ ಕಟ್ಟಿಕೊಂಡು ವಾಸ ಮಾಡುತ್ತಿದ್ದೇವೆ. ಮಳೆ ನೀರು ಜೋಪಡಿಗೆ ನುಗ್ಗಿದೆ. ನಮ್ಮ ಕಷ್ಟಗಳು ಕೇಳುವವರಿಲ್ಲ, ಹೇಳುವವರೂ ಇಲ್ಲ. ಒಂದು ಕುರಿ ಮರಿ ಸಹ ಸತ್ತಿದೆ. ಗುಡಿಸಲಿಗೂ ಹಾನಿಯಾಗಿದೆ. ಜೋರು ಮಳೆಯಾದರೆ ತಾಂಡಾಕ್ಕೆ ನೀರು ಆವರಿಸಿಕೊಳ್ಳುತ್ತದೆ. ಅಧಿಕಾರಿಗಳು ತಾಂಡಾದ ಸಮಸ್ಯೆಗೆ ಪರಿಹಾರ ಕೊಡುತ್ತಿಲ್ಲ' ಎಂದು ತಾಂಡಾ ನಿವಾಸಿ ಹೆಮ್ಲಾ ಜಗುನು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.