ಯಾದಗಿರಿ: ಬುಸ್ಸಣ್ಣ ಪದವಿ ಅಭ್ಯಾಸ ಮಾಡುತ್ತಲೇ ಕಥೆ-ಕವನ ರಚಿಸಿ ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿರುವುದು ಉತ್ತಮ ಬೆಳವಣಿಗೆ. ‘ಹೆಜ್ಜೆ ಗುರುತು’ ಪುಸ್ತಕ ಓದುಗರ ಮನಗೆಲ್ಲಲಿ ಎಂದು ನೆರಡಗಂ ಪಶ್ಚಿಮಾದ್ರಿ ಸಂಸ್ಥಾನ ವಿರಕ್ತ ಮಠದ ಪೀಠಾಧಿಪತಿ ಪಂಚಮ ಸಿದ್ಧಲಿಂಗ ಸ್ವಾಮೀಜಿ ಶುಭ ಹಾರೈಸಿದರು.
ನಗರದ ಕಸಾಪ ಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಬುಸ್ಸಣ್ಣ ವಿ ಯಾದವ ಬದ್ದೇಪಲ್ಲಿ ಅವರ ‘ಹೆಜ್ಜೆ ಗುರುತು’ ಕೃತಿ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಬದ್ದೇಪಲ್ಲಿ ಗ್ರಾಮದ ಯುವಕ ಪದವಿ ಹಂತದಲ್ಲಿಯೇ ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಲು ಹೊರಟಿದ್ದು, ಮೆಚ್ಚುಗೆಯ ಸಂಗತಿ. ಇವರ ಮುಂದಿನ ಕೃತಿಯನ್ನು ಶ್ರೀಮಠದದಿಂದ ಪ್ರಕಟಣೆ ಮಾಡುವುದಾಗಿ ತಿಳಿಸಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಿ.ಬಿ.ವೇದಮೂರ್ತಿ, ಗಡಿ ಅಂಚಿನಲ್ಲಿ ಹುಟ್ಟಿ ಬೆಳೆದ ಯುವಕ ಸಾಹಿತ್ಯ ಕೃಷಿಯಲ್ಲಿ ತೊಡಗಿ ಕೃತಿ ಬರೆದಿದ್ದು ಶ್ಲಾಘನೀಯ. ಯುವಕರು ಅನವಶ್ಯಕ ಕೆಲಸಕ್ಕೆ ಸಮಯ ವ್ಯರ್ಥ ಮಾಡದೆ ಸಾಮಾಜಿಕ ಉಪಯುಕ್ತ ಕಾರ್ಯಗಳಲ್ಲಿ ಪಾಲ್ಗೊಳ್ಳಬೇಕು ಎಂದು ತಿಳಿಸಿದರು.
ಕವಿಗೋಷ್ಠಿ: ‘ಹೆಜ್ಜೆ ಗುರುತು’ ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಆಯ್ದ ಕೆಲ ಯುವ ಸಾಹಿತಿಗಳಿಂದ ಕವಿಗೋಷ್ಠಿ ನಡೆಯಿತು. ಯುವ ಕವಿಗಳಾದ ರಾಮು ಎಚ್.ಬದ್ದೇಪಲ್ಲಿ, ಸೋಮೇಶ ಪ್ರಚಂಡಿ, ನಿಂಗಣ್ಣ ಐಕೂರು, ಪರಶುರಾಮ ಕೊಂಡಾಪುರ, ಗೂಳೇಶ ಗುಲಬರ್ಗಾ, ಚನ್ನಬಸಪ್ಪ ಐಕೂರು, ಯಲ್ಲಪ್ಪ ಸಾಲಿ ಚಿಂತಕುಂಟಾ, ಬಸವರಾಜ ಎಸ್.ಕೋಟಗೇರಾ ಕವನ ವಾಚಿಸಿದರು.
ಮುಖಂಡರಾದ ನಿಂಗನಗೌಡ ಹ ಪರಸನಹಳ್ಳಿ, ಚಂದ್ರಶೇಖರ ದೇವರು ಗದಗ, ಬಸವರಾಜಯ್ಯ ಸ್ವಾಮಿ ಬದ್ದೇಪಲ್ಲಿ, ಅಭಿಮನ್ಯು ಯಾದವ, ಪದವಿ ಕಾಲೇಜಿನ ಪ್ರಾಂಶುಪಾಲ ಸುಭಾಶ್ಚಂದ್ರ ಕೌಲಗಿ, ಜಿ.ಎಂ. ಗುರುಪ್ರಸಾದ, ಮುಖ್ಯಶಿಕ್ಷಕ ಖಾಜಾ ಮೈನೋದ್ದೀನ್, ಯಾದವ ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ತಾಯಪ್ಪ ಕಾಳೆಬೆಳಗುಂದಿ, ಚಾಂದಸಾಬ ಎಂ.ಚೌಕಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.