ಹುಣಸಗಿ ತಾಲ್ಲೂಕಿನ ಕಲ್ಲದೇವನಹಳ್ಳಿ ಗ್ರಾಮದಲ್ಲಿ ನಡೆದ ಖಾಸ್ಗತೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ ನಡೆದ ಆನೆ ಹಾಗೂ ಸಿದ್ಧಲಿಂಗ ದೇವರ ಸಾರೋಟ ಮೆರವಣಿಗೆಯಲ್ಲಿ ಪಾಲ್ಗೊಂಡ ಭಕ್ತರು
ಹುಣಸಗಿ: ತಾಲ್ಲೂಕಿನ ಕಲ್ಲದೇವನಹಳ್ಳಿ ಗ್ರಾಮದಲ್ಲಿ ಖಾಸ್ಗತೇಶ್ವರ ಶಾಂತಾಶ್ರಮದ ಖಾಸ್ಗತ ವಿರಕ್ತ ಶಿವಯೋಗಿಗಳ ಜಾತ್ರಾ ಮಹೋತ್ಸವದ ಅಂಗವಾಗಿ ಶನಿವಾರ ಅನೆ ಮೆರವಣಿಗೆ ಹಾಗೂ ಕುಂಭ ಕಳಸ ಹಾಗೂ ವಿವಿಧ ಕಲಾ ತಂಡಗಳ ಪ್ರದರ್ಶನ ಸಂಭ್ರಮದಿಂದ ನಡೆಯಿತು.
ಬೆಳಿಗ್ಗೆ ಖಾಸ್ಗತ ವಿರಕ್ತ ಶಿವಯೋಗಿ ಮೂರ್ತಿಗೆ ಅಭಿಷೇಕ, ಬಿಲ್ವಾರ್ಚನೆ, ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ದೇವಸ್ಥಾನದಲ್ಲಿ ನಡೆದವು.
ಕಲ್ಲದೇವನಹಳ್ಳಿ ಗ್ರಾಮದಿಂದ ಅಲಂಕೃತ ಆನೆಯ ಮೇಲೆ ಅಂಬಾರಿಯಲ್ಲಿ ವಿರಕ್ತ ಶಿವಯೊಗಿಗಳ ರಜತ ಮೂರ್ತಿಯನ್ನಿಟ್ಟು ಬೆಳಿಗ್ಗೆ ಗ್ರಾಮದ ಹನುಮಂತದೇವರ ದೇವಸ್ಥಾನದಿಂದ ಮಠದ ವರೆಗೆ ಮೆರವಣಿಗೆ ನಡೆಯಿತು.
ಜೊತೆಗೆ ಮಠದ ಸಿದ್ದಲಿಂಗ ಸ್ವಾಮೀಜಿ ಅವರನ್ನು ಅಲಂಕೃತ ಸಾರೋಟದಲ್ಲಿ ಕುಳ್ಳಿರಿಸಿ ಮಹಿಳೆಯರಿಂದ ಪೂರ್ಣ ಕುಂಭ ಹಾಗೂ ಕಳಸ ಜರುಗಿತು.
ವಿವಿಧ ಕಲಾತಂಡಗಳ ಹಲಗೆ ವಾದನ ಕುಣಿತ, ಡೊಳ್ಳು ಕುಣಿತ, ಗಾರುಡಿ ಬೊಂಬೆ ಕುಣಿತ, ಕುದುರೆ ಕುಣಿತ ಗಮನ ಸೆಳೆದವು.
ಕಲ್ಲದೇವನಹಳ್ಳಿ, ಚನ್ನೂರ, ವಜ್ಜಲ, ಹುಣಸಗಿ, ಹೆಬ್ಬಾಳ, ಬೆನಕನಹಳ್ಳಿ, ದೇವತಕಲ್ಲ, ಕಚಕನೂರು, ಬಾಚಿಮಟ್ಟಿ, ಕನ್ನೇಳ್ಳಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಭಕ್ತರು ಮೆರವಣಿಗೆಯಲ್ಲಿ ಪಾಲ್ಗೊಂಡು ದರ್ಶನ ಪಡೆದರು.
ಮಹಿಳೆಯರು ಮಾರ್ಗದಲ್ಲಿರುವ ಮನೆಗಳ ಮಾಳಿಗೆ ಮೇಲೆ ನಿಂತು ಜಯಘೋಷ ಕೂಗಿ ನಮಸ್ಕರಿಸಿ ಭಕ್ತಿ ಸಮರ್ಪಿಸಿದರು. ಸ್ಥಳೀಯ ಯುವಕರು ಪೊಲೀಸ್ ಸಿಬ್ಬಂದಿ ಜೊತೆಗೆ ಸೂಕ್ತ ಬಂದೊಬಸ್ತ್ನಲ್ಲಿ ನಿರತರಾಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.