ADVERTISEMENT

ಹುಣಸಗಿ| ಸನಾತನ ಸಂಸ್ಕೃತಿಗೆ 10 ಸಾವಿರ ವರ್ಷ ಇತಿಹಾಸ: ದಿನಕರ ಜೋಶಿ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2026, 4:21 IST
Last Updated 3 ಫೆಬ್ರುವರಿ 2026, 4:21 IST
ಹುಣಸಗಿ ತಾಲ್ಲೂಕಿನ ಕೊಡೇಕಲ್ಲ ಗ್ರಾಮದಲ್ಲಿ ನಡೆದ ಹಿಂದೂ ಸಮಾಜೋತ್ಸವ ಕಾರ್ಯಕ್ರಮವನ್ನು ಆರ್‌ಟಿಜೆ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಹನುಮಂತನಾಯಕ (ಬಬಲುಗೌಡ) ಉದ್ಘಾಟಿಸಿದರು
ಹುಣಸಗಿ ತಾಲ್ಲೂಕಿನ ಕೊಡೇಕಲ್ಲ ಗ್ರಾಮದಲ್ಲಿ ನಡೆದ ಹಿಂದೂ ಸಮಾಜೋತ್ಸವ ಕಾರ್ಯಕ್ರಮವನ್ನು ಆರ್‌ಟಿಜೆ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಹನುಮಂತನಾಯಕ (ಬಬಲುಗೌಡ) ಉದ್ಘಾಟಿಸಿದರು   

ಹುಣಸಗಿ: ‘ಭಾರತಿಯ ಸನಾತನ ಸಂಸ್ಕೃತಿ, ಇಲ್ಲಿನ ಪರಂಪರೆಗೆ 10 ಸಾವಿರಕ್ಕೂ ಹೆಚ್ಚು ವರ್ಷಗಳ ಇತಿಹಾಸವಿದೆ. ಇಲ್ಲಿ ಜನಿಸಿದ ಎಲ್ಲರೂ ಭಾರತ ಮಾತೆಯ ಮಕ್ಕಳು’ ಎಂದು ವಿಜಯಪುರದ ದಿನಕರ ಜೋಶಿ ಹೇಳಿದರು.

ಹುಣಸಗಿ ತಾಲ್ಲೂಕಿನ ಕೊಡೇಕಲ್ಲ ಗ್ರಾಮದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಹಿಂದೂ ಸಮಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

‘ಈ ಹಿಂದೆ ದೇಶದಲ್ಲಿ ಹಲವಾರು ಬಾರಿ ಆಕ್ರಮಣಗಳು ನಡೆದಿವೆ. ಇಲ್ಲಿನ ಸಂಪತ್ತನ್ನು ದೋಚಿದ್ದರೂ ಕೂಡಾ ಇಂದಿಗೂ ಭಾರತ ವಿಶ್ವದಲ್ಲಿಯೇ ತನ್ನ ಮಹತ್ವವಾದ ಇತಿಹಾಸವನ್ನು ಉಳಿಸಿಕೊಂಡು ಬಂದಿದೆ’ ಎಂದರು.

ADVERTISEMENT

‘ಅನಾದಿ ಕಾಲದಿಂದಲೂ ತಮ್ಮದೇ ಆದ ಐತಿಹಾಸಿಕ ಪರಂಪರೆ ಸಂಸ್ಕೃತಿಯನ್ನು ಕಾಪಾಡಿಕೊಂಡು ಅದನ್ನು ಉಳಿಸಿಕೊಂಡು ಬಂದಿರುವುದು ಇತಿಹಾಸ ತಿಳಿಸುತ್ತದೆ. ಇಲ್ಲಿ ಅನೇಕ ಭಾಷೆ, ಉಡುಗೆ, ತೊಡುಗೆ, ಸಂಪ್ರದಾಯ, ಆಹಾರ ಪದ್ಧತಿ ಇದ್ದರೂ ಕೂಡಾ ದೇಶದ ಏಕತೆಯನ್ನು ಎತ್ತಿ ಹಿಡಿಯಲಾಗಿದೆ. ಈ ದೇಶದ 65 ಕೋಟಿ ಯುವಕರು ದೇಶದ ಒಳಿತಿಗಾಗಿ ಚಿಂತಿಸುವುದು ಹಾಗೂ ಸೇವೆ ಸಲ್ಲಿಸುವದು ಅಗತ್ಯವಿದೆ’ ಎಂದರು.

ಸಾನ್ನಿಧ್ಯ ವಹಿಸಿದ್ದ ಮಹಲಿನ ಮಠದ ವೃಷಬೇಂದ್ರ ಸ್ವಾಮೀಜಿ ಮಾತನಾಡಿ, ‘ಪ್ರತಿಯೊಬ್ಬ ಪಾಲಕರು ತಮ್ಮ ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲಿಯೇ ಹಿರಿಯರಿಗೆ ಗೌರವ ಕೊಡುವದನ್ನು ಕಲಿಸಬೇಕು. ಅಲ್ಲದೇ ಯುವಕರು ದೇಶಪ್ರೇಮವನ್ನು ಬೆಳೆಸಿಕೊಳ್ಳುವ ನಿಟ್ಟಿನಲ್ಲಿ ದೇಶಕ್ಕಾಗಿ ಹೋರಾಟ ಮಾಡಿದ ಮಹಾನ್‌ ಹೋರಾಟಗಾರರ ಚರಿತ್ರೆ ತಿಳಿದುಕೊಳ್ಳಬೇಕು’ ಎಂದರು.

ಕಾರ್ಯಕ್ರಮವನ್ನು ಆರ್‌ಟಿಜೆ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಹನುಮಂತನಾಯಕ (ಬಬಲುಗೌಡ) ಉದ್ಘಾಟಿಸಿದರು. ನೀಲಕಂಠಸ್ವಾಮೀಜಿ ವಿರಕ್ತಮಠ, ರಾಜಾ ವೆಂಕಟಪ್ಪನಾಯಕ ಇದ್ದರು.

ಕಾರ್ಯಕ್ರಮ ಆರಂಭಕ್ಕೂ ಮುನ್ನ ಗ್ರಾಮದ ಗದ್ದೆಮ್ಮದೇವಿ ಕಟ್ಟೆಯಿಂದ ಬಸವೇಶ್ವರ ದೇವಸ್ಥಾನದವರೆಗೂ ಭಾರತ ಮಾತೆಯ ದೊಡ್ಡ ಭಾವಚಿತ್ರವನ್ನು ವಾಹನದಲ್ಲಿಟ್ಟು ಪ್ರಮುಖ ಬೀದಿಗಳಲ್ಲಿ ಶೋಭಾ ಯಾತ್ರೆ ನಡೆಯಿತು. ಮಹಿಳೆಯರು ಪೂರ್ಣಕುಂಭ ಕಳಸ ಹೊತ್ತು ಸಾಗಿದರೇ, ಚಂಡೆ ಮದ್ದಲೆ, ಹಲಗೆ, ಗಾರುಡಿ ಗೊಂಬೆ, ಕೀಲು ಕುದರೆ, ನಂದಿ ಧ್ವಜ ಕಲಾ ತಂಡಗಳ ಕುಣಿತ ಗಮನ ಸೆಳೆಯಿತು. ಗ್ರಾಮ ಪ್ರಮುಖ ರಸ್ತೆಗಳಲ್ಲಿ ಮಹಿಳೆಯರು ರಂಗೋಲಿ ಬಿಡಿಸಿ ಸ್ವಾಗತಿಸಿದರು. ಅಲ್ಲಲ್ಲಿ ಯುವಕರ ತಂಡ ತಂಪು ಪಾನೀಯ ಹಾಗೂ ಶರಬತ್ತು ವ್ಯವಸ್ಥೆ ಮಾಡಿರುವುದು ಕಂಡು ಬಂತು.

ಮೆರವಣಿಗೆಗೆ ರಾಜಾ ಜಿತೇಂದ್ರನಾಯಕ ಜಹಗಿರದಾರ, ರಾಜಾ ವೆಂಕಟಪ್ಪನಾಯಕ ಜಹಗಿರದಾರ ಚಾಲನೆ ನೀಡಿದರು.

ರಂಗನಾಥ ದೊರಿ, ಶಾಮಸುಂದರ ಜೋಶಿ, ವೀರಸಂಗಪ್ಪ ಹಾವೇರಿ, ಸೋಮನಿಂಗಪ್ಪ ದೊರಿ, ಮೋಹನ ಪಾಟೀಲ, ದೇವು ಗೋಪಾಳೆ, ಕನಕು ಜೀರಾಳ, ಮಲ್ಲು ನವಲಗುಡ್ಡ, ಮಲ್ಲು ಜಂಗಳಿ, ಕನಕು ದೊರಿ, ಸಂಗಪ್ಪ ಶಿವಪೂರ, ರವೀಂದ್ರ ಅಂಗಡಿ, ಮೌನೇಶ ಬಡಿಗೇರ, ರಮೇಶ ಬಿರಾದಾರ ಸುರೇಶ ದೇವೂರ, ರಮೇಶ ಉಪ್ಪಲದಿನ್ನಿ, ಅಯ್ಯಪ್ಪ ಡಂಬಳ, ಸಂಗು ರಾಮನಗೌಡ್ರ, ಶಂಕರಗೌಡ ಜೇವರ್ಗಿ, ಚಂದ್ರಶೇಖರ ಹೊಕ್ರಾಣಿ, ಶಾಂತು ಅಡ್ಡಿ ಸೇರಿದಂತೆ ಇತರರು ಇದ್ದರು.

ಪವನ ದೇಶಪಾಂಡೆ ನಿರೂಪಿಸಿದರು. ಶಿವಶಂಕರ ಯಡಹಳ್ಳಿ ವಂದಿಸಿದರು.

ಹುಣಸಗಿ ತಾಲ್ಲೂಕಿನ ಕೊಡೇಕಲ್ಲ ಗ್ರಾಮದಲ್ಲಿ ನಡೆದ ಹಿಂದೂ ಸಮಾಜೋತ್ಸವ ಅಂಗವಾಗಿ ನಡೆದ ಶೋಭಾ ಯಾತ್ರೆಯಲ್ಲಿ 108 ಮಹಿಳೆಯರು ಪೂರ್ಣಕುಂಭದೊಂದಿಗೆ ಪಾಲ್ಗೊಂಡಿದ್ದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.