ಹುಣಸಗಿ ಪಟ್ಟಣ ಪಂಚಾಯಿತಿ ಅಧ್ಯಕ್ಷರಾಗಿ ತಿಪ್ಪಣ್ಣ ನಾಯ್ಕ್ ಹಾಗೂ ಉಪಾಧ್ಯಕ್ಷರಾಗಿ ಶಾಂತಪ್ಪ ಮಲಗಲದಿನ್ನಿ ಅವಿರೋಧ ಆಯ್ಕೆಯಾದ ಬಳಿಕ ಅವರನ್ನು ಗೌರವಿಸಲಾಯಿತು. ಶಾಸಕ ರಾಜಾ ವೇಣುಗೋಪಾಲನಾಯಕ ಉಪಸ್ಥಿತರಿದ್ದರು
ಹುಣಸಗಿ (ಯಾದಗಿರಿ ಜಿಲ್ಲೆ): ಹುಣಸಗಿಯ ಪಟ್ಟಣ ಪಂಚಾಯಿತಿಗೆ ಅಧ್ಯಕ್ಷರಾಗಿ ತಿಪ್ಪಣ್ಣ ನಾಯ್ಕ್ ರಾಠೋಡ, ಉಪಾಧ್ಯಕ್ಷರಾಗಿ ಶಾಂತಪ್ಪ ಮಲಗಲದಿನ್ನಿ ಶುಕ್ರವಾರ ಅವಿರೋಧವಾಗಿ ಆಯ್ಕೆಯಾದರು.
ಪರಿಶಿಷ್ಟ ಜಾತಿಗೆ ಅಧ್ಯಕ್ಷ ಸ್ಥಾನ ಮೀಸಲಾಗಿತ್ತು. ವಾರ್ಡ್ ನಂ 16ರ ತಿಪ್ಪಣ್ಣ ನಾಯ್ಕ್ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಶಾಂತಪ್ಪ ಮಲಗಲದಿನ್ನಿ (ಸಾಮಾನ್ಯ) ಅವರು ಮಾತ್ರ ನಾಮಪತ್ರ ಸಲ್ಲಿಸಿದ್ದರು. ಚುನಾವಣಾಧಿಕಾರಿ ಬಸಲಿಂಗಪ್ಪ ನಾಯ್ಕೋಡಿ ಅವರು ಅವಿರೋಧ ಆಯ್ಕೆಯನ್ನು ಘೋಷಣೆ ಮಾಡಿದರು.
ಬಳಿಕ ಮಾತನಾಡಿದ ಸುರಪುರ ಶಾಸಕ ರಾಜಾ ವೇಣುಗೋಪಾಲನಾಯಕ ಅವರು, ’ನಮ್ಮ ತಂದೆ ಶಾಸಕರಿದ್ದಾಗ ನೂತನ ಪಟ್ಟಣ ಪಂಚಾಯಿತಿಯನ್ನಾಗಿ ಮಾಡಿದ್ದರು. ಮೊದಲ ಬಾರಿಗೆ ಅಧ್ಯಕ್ಷ-ಉಪಾಧ್ಯಕ್ಷರಾಗಿ ಕಾಂಗ್ರೆಸ್ ಪಕ್ಷ ಅಧಿಕಾರ ಹಿಡಿದಿರುವುದು ಸಂತಸವಾಗಿದೆ. ಎಲ್ಲ ಸದಸ್ಯರ ವಿಶ್ವಾಸಕ್ಕೆ ತೆಗೆದುಕೊಂಡು ಪಟ್ಟಣದ ಸರ್ವತೋಮುಖ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಕೆಲಸ ಮಾಡಬೇಕು‘ ಎಂದು ಸಲಹೆ ನೀಡಿದರು.
ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಸಿದ್ರಾಮೇಶ್ವರ ಅವರು ನೂತನ ಅಧ್ಯಕ್ಷ-ಉಪಾಧ್ಯಕ್ಷರನ್ನು ಸನ್ಮಾನಿಸಿದರು. ಕಾಂಗ್ರೆಸ್ ಪಕ್ಷದ ಅಭಿಮಾನಿಗಳು ಹಾಗೂ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಿದರು.
ಮುಖಂಡರಾದ ನಾಗಣ್ಣ ದಂಡಿನ್, ಸಿದ್ದಣ್ಣ ಮಲಗಲದಿನ್ನಿ, ರಾಜಾ ಸಂತೋಷನಾಯಕ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ ದಂಡಿನ್, ಸಿದ್ದು ಮುದಗಲ್, ಶರಣು ದಂಡಿನ್, ಮಹಾಂತೇಶ ಮಲಗದಿನ್ನಿ, ಬಸವರಾಜ ಸಜ್ಜನ್, ಆರ್.ಎಂ.ರೇವಡಿ, ಕಾಶೀಂಸಾಬ್ ಟೊಣ್ಣೂರು, ಮರಲಿಂಗಪ್ಪ ನಾಟೇಕರ್, ರವಿ ಮಲಗಲದಿನ್ನಿ ಸೇರಿದಂತೆ ಪಕ್ಷದ ಕಾರ್ಯಕರ್ತರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.