ಯಾದಗಿರಿ: ವಡಗೇರಾ ತಾಲ್ಲೂಕಿನ ತುಮಕೂರಿನ ಕೋರ್ ಗ್ರೀನ್ ಸಕ್ಕರೆ ಕಾರ್ಖಾನೆಯವರು ರೈತರಿಗೆ ₹23 ಕೋಟಿ ಕಬ್ಬಿನ ಬಾಕಿ ನೀಡದೆ ಪರಾರಿಯಾಗಿದ್ದು, ಶೀಘ್ರವೇ ಮಾಲಿಕರನ್ನು ಪತ್ತೆ ಹಚ್ಚಿ ಬಾಕಿ ಹಣ ವಸೂಲಿ ಮಾಡಿ ರೈತರಿಗೆ ನೀಡಲು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯಕರ್ತರು ನಗರದಲ್ಲಿ ಮಂಗಳವಾರ ಜಾಥಾ ನಡೆಸಿದರು.
ನಗರದ ನೇತಾಜಿ ಸುಭಾಶ್ಚಂದ್ರ ಬೋಸ್ ವೃತ್ತದಲ್ಲಿ ಜಮಾಯಿಸಿದ ಕಾರ್ಯಕರ್ತರು ಅಲ್ಲಿಂದ ಕಾಲ್ನಡಿಗೆಯಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಪ್ರತಿಭಟನೆ ನಡೆಸಿದರು.
ಕಳೆದ 10 ತಿಂಗಳ ಹಿಂದೆಯೇ ಕಬ್ಬು ಪೂರೈಸಿದ ರೈತರಿಗೆ ಬಾಕಿ ಪಾವತಿಸದೇ ದಿನ ದೂಡಿದ್ದಲ್ಲದೇ ಪ್ರತಿಭಟನೆ ಮಾಡಿದರೂ ಕ್ಯಾರೆ ಅನ್ನದೇ ಲಿಖಿತ ರೂಪದಲ್ಲಿ ಒಂದು ತಿಂಗಳಲ್ಲಿ ಬಾಕಿ ಪಾವತಿಸುವುದಾಗಿ ಹೇಳಿದ ಸಕ್ಕರೆ ಕಾರ್ಖಾನೆ ವ್ಯವಸ್ಥಾಪಕರು, ಆ ಅವಧಿಯೂ ಪೂರ್ಣಗೊಂಡರೂ ಹಣ ನೀಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ತಕ್ಷಣ ಕಾರ್ಖಾನೆ ಮಾಲೀಕನ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ರೈತರಿಗೆ ಬರಬೇಕಾದ ಬಾಕಿ ಪಾವತಿಗೆ ಕ್ರಮ ವಹಿಸುವಂತೆ ಆಗ್ರಹಿಸಿದರು.
ಈ ವೇಳೆ ರೈತ ಸಂಘ ಹಸಿರು ಸೇನೆ ಜಿಲ್ಲಾಧ್ಯಕ್ಷ ಬಸನಗೌಡ ಚಿಂಚೋಳಿ, ತಾಲ್ಲೂಕು ಅಧ್ಯಕ್ಷ ಮಂಜುಗೌಡ ತಂಗಡಿಗಿ, ಶಹಾಬಾದ ತಾಲ್ಲೂಕು ಅಧ್ಯಕ್ಷ ಬಸವರಾಜ ಕೋರಿ ಸೇರಿದಂತೆ ಹಲವಾರು ರೈತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.