ಶಹಾಪುರ: ‘ಪರಕೀಯರ ಕಪಿಮುಷ್ಠಿಯಿಂದ ಬಿಡಿಸಲು ನಡೆದ ಹೋರಾಟದ ಪರಂಪರೆಯಲ್ಲಿ ಕನ್ನಡದ ಅನೇಕ ಕವಿಗಳು ತಮ್ಮ ಬರಹಗಳ ಮೂಲಕ ಸ್ವಾತಂತ್ರ್ಯದ ಕಿಚ್ಚು ಹಚ್ಚಿದ್ದಾರೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ರಜಾಕರ ಹಾವಳಿಯ ಸಂದರ್ಭದಲ್ಲಿ ಅನೇಕ ಕಷ್ಟ-ನಷ್ಟಗಳನ್ನು ಅನುಭವಿಸಿದ್ದಾರೆ’ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯ ಸಿದ್ಧರಾಮ ಹೊನ್ಕಲ್ ತಿಳಿಸಿದರು.
ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು ಮತ್ತು ತಾಲ್ಲೂಕು ಕಸಾಪ ಘಟಕ, ಚಕೋರ ಸಾಹಿತ್ಯ ವಿಚಾರ ವೇದಿಕೆಯ ಆಶ್ರಯದಲ್ಲಿ ಶುಕ್ರವಾರ ಸ್ವಾತಂತ್ರ್ಯ ಸಂಗ್ರಾಮದ ನೆನೆಪುಗಳು ಹಾಗೂ ದೇಶಾಭಿಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ನಮ್ಮ ನೆಲ ಬಸವಾದಿ ಶರಣರ, ಸೂಫಿ ಸಂತರ ಸಮಾನತೆ, ಕೋಮು ಸಾಮರಸ್ಯ ಪರಂಪರೆಯನ್ನು ಉಳಿಸಿ ಬೆಳೆಸಿಕೊಂಡು ಬಂದಿರುವುದು ಹೆಮ್ಮೆಯ ಸಂಗತಿ’ ಎಂದು ಹೇಳಿದರು.
ಉಪನ್ಯಾಸಕ ಮಹೇಶ ಗಂವ್ಹಾರ ಮಾತನಾಡಿ, ‘ನಮ್ಮ ದೇಶದ ಅನೇಕ ಮಹನೀಯರ ಹೋರಾಟ, ತ್ಯಾಗ, ಬಲಿದಾನದಿಂದ ಸ್ವಾತಂತ್ರ್ಯ ಪಡೆದಿದ್ದೇವೆ. ಭಾರತವನ್ನು ಉಳಿಸಿ ಬೆಳೆಸುವುದರ ಮೂಲಕ ರಾಷ್ಟ್ರದ ಸಂರಕ್ಷಣೆ ಜವಾಬ್ದಾರಿ ಯುವಕರ ಮೇಲಿದೆ’ ಎಂದರು.
ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ರವೀಂದ್ರನಾಥ ಹೊಸಮನಿ, ನಿಕಟಪೂರ್ವ ಅಧ್ಯಕ್ಷ ಸಿದ್ದಲಿಂಗಪ್ಪ ಆನೇಗುಂದಿ, ಸಾಹಿತಿ ಶಿವಣ್ಣ ಇಜೇರಿ, ಶಿವರಂಜನ ಸತ್ಯಂಪೇಟೆ, ಗೋವಿಂದರಾಜ ಆಲ್ದಾಳ, ಬಾಬುರಾವ ಬೂತಾಳೆ, ದೇವಿಂದ್ರಪ್ಪ ಹಡಪದ, ಮಲ್ಲಣ್ಣಗೌಡ ಪೋಲಿಸ ಪಾಟೀಲ, ಮಹೇಶ ಪತ್ತಾರ, ಶರಣಬಸವ ಬಿರಾದಾರ ಮತ್ತು ಶ್ರೀಶೈಲ ಮಡಿವಾಳ, ಮಹಿಳಾ ಪ್ರತಿನಿಧಿ ನಿರ್ಮಲಾ ತುಂಬಗಿ, ಗೌರವ ಕಾರ್ಯದರ್ಶಿಗಳಾದ ಸುರೇಶಬಾಬು ಅರುಣಿ, ರಾಘವೇಂದ್ರ ಹಾರಣಗೇರಾ, ಶಂಕರ ಹುಲಕಲ್ ಭಾಗವಹಿಸಿದ್ದರು.
ಕವಿಗೋಷ್ಠಿಯಲ್ಲಿ 30ಕ್ಕೂ ಹೆಚ್ಚು ಹಿರಿಯ ಹಾಗೂ ಯುವಕವಿಗಳು ತಮ್ಮ ಸ್ವರಚಿತ ಕವಿತೆಗಳನ್ನು ವಾಚಿಸಿದರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.