ADVERTISEMENT

ಗುರುಮಠಕಲ್‌ | ಕಾಂಗ್ರೆಸ್‌-ಜೆಡಿಎಸ್‌ ಕಾರ್ಯಕರ್ತರ ಜಗಳ: ವಿಡಿಯೊ ಹರಿದಾಟ

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2023, 11:10 IST
Last Updated 4 ಏಪ್ರಿಲ್ 2023, 11:10 IST
   

ಗುರುಮಠಕಲ್‌ (ಯಾದಗಿರಿ ಜಿಲ್ಲೆ): ತಾಲ್ಲೂಕಿನ ಯದ್ಲಾಪುರ ಗ್ರಾಮದ ಹೊರವಲಯದ ಮೌಲಾಲಿ ಬೆಟ್ಟದ ಆವರಣದಲ್ಲಿ ಸೋಮವಾರ ಕಾಂಗ್ರೆಸ್‌-ಜೆಡಿಎಸ್‌ ಕಾರ್ಯಕರ್ತರ ನಡುವೆ ಜಗಳವಾಗಿದೆ.

ಸೋಮವಾರ ಬೆಟ್ಟದ ಮೇಲಿನ ಮೌಲಾಲಿ ದರ್ಗಾಕ್ಕೆ ಯದ್ಲಾಪುರ ಗ್ರಾಮಸ್ಥರೊಬ್ಬರು ದೇವರನ್ನು ಮಾಡಿದ್ದರು (ಹರಕೆ ತೀರಿಸುವುದು). ಕಾರ್ಯಕ್ರಮಕ್ಕೆ ಮಾಜಿ ಎಂಎಲ್‌ಸಿ ಬಾಬುರಾವ ಚಿಂಚನಸೂರ ಆಗಮಿಸಿ ಹಿಂದಿರುಗಿದ್ದರು.

ಚಿಂಚನಸೂರ ಅವರು ಬಂದಾಗ ಕೆಲವರು ತಮ್ಮ ಸಮಸ್ಯೆಗಳ ಕುರಿತು ಬೇಸರ ವ್ಯಕ್ತಪಡಿಸಿ, ತರಾಟೆಗೆ ತೆಗೆದುಕೊಂಡಿದ್ದರು. ಬಾಬುರಾವ ಬಿಜೆಪಿ ತೊರೆದು ಕಾಂಗ್ರೆಸ್‌ ಸೇರಿದ್ದಾರೆ. ಚಿಂಚನಸೂರ ಹಿಂದಿರುಗಿದ ಮೇಲೆ ಸ್ಥಳೀಯ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಕಾರ್ಯಕರ್ತರ ನಡುವೆ ವಾಗ್ವಾದ ನಡೆದಿದೆ ಎಂದು ಗ್ರಾಮಸ್ಥರು ಮಾಹಿತಿ ನೀಡಿದರು.

ADVERTISEMENT

ಮಾತಿಗೆ ಮಾತು ಬೆಳೆದು ಕೈ-ಕೈ ಮಿಲಾಯಿಸುವ ಮೂಲಕ ಹೊಡೆದಾಡಿದ್ದಾರೆ. ನಂತರ ಸ್ಥಳೀಯರು ಮಧ್ಯಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ.

ಸ್ಥಳಕ್ಕೆ ಪಿಐ ಅಂಬಾರಾಯ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಘಟನೆಯ ಕುರಿತು ಸದ್ಯ ವಾಟ್ಸ್‌ ಆ್ಯಪ್‌ನಲ್ಲಿ ವಿಡಿಯೊ ಹರಿದಾಡುತ್ತಿದೆ. ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿಲ್ಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.