ಶಹಾಪುರ: ತಾಲ್ಲೂಕಿನ ಹತ್ತಿಗೂಡೂರ ಗ್ರಾಮದ ಬಸವರಾಜ ಮಲ್ಲಪ್ಪ ಟಣಕೆದಾರ ಕರ್ನಾಟಕ ಲೋಕಸೇವಾ ಆಯೋಗದ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ.
ಪಿಯುಸಿ ಪಾಸಾದಾಗ ಕಲಬುರ್ಗಿಗೆ ಉದ್ಯೋಗ ಕಚೇರಿಗೆ ಹೆಸರು ನೋಂದಾಯಿಸಲು ತೆರಳಿದ್ದರು. ಆದರೆ ತಾನೇ ಉದ್ಯೋಗ ಅಧಿಕಾರಿಯಾಗಿ ನೇಮಕಗೊಳ್ಳುತ್ತೇನೆ ಎಂದು ಕನಸ್ಸಿನಲ್ಲಿಯೂ ಉಹಿಸಿರಲಿಲ್ಲ.
ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಣವನ್ನು ಹತ್ತಿಗೂಡೂರ ಗ್ರಾಮದಲ್ಲಿ ಓದಿದ್ದಾರೆ. ನಂತರ ಪಿಯುಸಿಯನ್ನು ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಅಭ್ಯಾಸ ಮಾಡಿದರು. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 1999ರಲ್ಲಿ ಪ್ರಥಮ ರ್ಯಾಂಕ್ ಗಳಿಸಿದ ದಿನವೇ ಉನ್ನತ ಹುದ್ದೆ ಪಡೆಯಬೇಕೆಂಬ ಹಂಬಲ ಬೆಳೆಸಿಕೊಂಡರು. ನಂತರ ಎಂ.ಎ ಹಾಗೂ ಬಿ.ಎಡ್ ಪದವಿ ಪಡೆದೆಕೊಂಡರು. ಈಗ 9 ವರ್ಷದಿಂದ ಬೀದರ್ ನಗರಸಭೆಯಲ್ಲಿ ಕಂದಾಯ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಸರ್ಕಾರ ಭೂರಹಿತರಿಗೆ ನೀಡಿದ ಎರಡು ಎಕರೆ ಜಮೀನು ಬಿಟ್ಟು ಮತ್ತೇನೂ ನಮಗೆ ಆಸರೆ ಇಲ್ಲ. ತುಂಬು ಕುಟುಂಬ ನಮ್ಮದು. ಇಬ್ಬರು ಅಣ್ಣಂದಿರು ಹಾಗೂ ಇಬ್ಬರು ಅಕ್ಕಂದಿರು ಮತ್ತು ಒಬ್ಬ ತಂಗಿ ಹೀಗೆ ಆರು ಜನರಲ್ಲಿ ನಾನೊಬ್ಬನೇ ಶಾಲೆ ಕಲಿತವನು. ತಂದೆ ತಾಯಿ ಕೂಲಿ ಕೆಲಸ ಮಾಡಿ ಓದಿಸಿದರು. 2010 ಮತ್ತು 2014ರಲ್ಲಿ ಪರೀಕ್ಷೆ ಬರೆದೆ ಯಶಸ್ವಿಯಾಗಿಲಿಲ್ಲ. 2015ರಲ್ಲಿ ಬರೆದ ಪರೀಕ್ಷೆಯಲ್ಲಿ ಸಾಧನೆಯ ಮೆಟ್ಟಿಲು ತಲುಪಿದೆ. ತಂದೆ-ತಾಯಿ ಹಾಗೂ ಪತ್ನಿ ಜ್ಯೋತಿ ಬೆಂಬಲ ಬಿಟ್ಟರೆ ಬೇರೆ ಯಾರದೂ ಸಹಕಾರ ಇಲ್ಲದೆ ಸ್ವಂತ ಪರಿಶ್ರಮದಿಂದ ಮೇಲೆ ಬಂದಿರುವೆ ಎಂದು ಅವರು ಹೇಳಿದರು
ನಮ್ಮ ಬೆನ್ನ ಹಿಂದೆ ಬಡತನದ ಅಂಟಿರುವುದನ್ನು ನೆನಪಿಸಿಕೊಂಡು ಮುಂದೆ ಹೆಜ್ಜೆ ಇಟ್ಟರೆ ಅನಾಯಸವಾಗಿ ಗುರಿ ತಲುಪಲು ಸಾಧ್ಯ ಎನ್ನುತ್ತಾರೆ ಬಸವರಾಜ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.