ಯಾದಗಿರಿ: ಜಿಲ್ಲೆಯಗುರುಮಠಕಲ್ ತಾಲ್ಲೂಕಿನ ಕಂದಕೂರ ಗ್ರಾಮದ ಕೊಂಡಮ್ಮ ದೇವಿ ಜಾತ್ರೆ ರದ್ದುಪಡಿಸಲಾಗಿದೆ ಎಂದು ಘೋಷಿಸಿದ್ದರೂ ಶನಿವಾರ ವಿವಿಧ ಊರು ಮತ್ತು ಗ್ರಾಮಗಳಿಂದ ಭಾರಿ ಸಂಖ್ಯೆಯಲ್ಲಿ ಸೇರಿದ್ದರು.
ಭಕ್ತರು ಬೆಟ್ಟವನ್ನು ಏರದಂತೆ ಕಂದಕೂರ ಗೇಟ್ ಬಳಿ ಪೊಲೀಸರು ಬ್ಯಾರಿಕೇಡ್ ಹಾಕಿದ್ದರು. ಪೊಲೀಸರು ನಿಗಾ ವಹಿಸಿದ್ದರಿಂದ ಕೆಲವರು ಹಿಂಬದಿಯಿಂದ ಬೆಟ್ಟವನ್ನು ಏರಿ ಚೇಳುಗಳನ್ನು ಹುಡುಕಲು ಪ್ರಯತ್ನಿಸಿದರು. ಮಕ್ಕಳು, ಮಹಿಳೆಯರು ಎನ್ನದೇ ಎಲ್ಲಾ ಭಕ್ತರು ಚೇಳನ್ನು ಕೈಯಲ್ಲಿ ಹಿಡಿದು ಸಂಭ್ರಮಿಸಿದರು.
ಬೆಟ್ಟದ ಸಣ್ಣಕಲ್ಲುಗಳನ್ನು ತೆಗೆದಾಗ ಓಡಾಡುತ್ತಿದ್ದ ಚೇಳನ್ನು ಕಂಡು ಭಕ್ತರು ಸಂಭ್ರಮಿಸುತ್ತಿದ್ದರು. ಯುವಕರು ಚೇಳನ್ನುಕೈಯಲ್ಲಿ ಹಿಡಿದು ಸೆಲ್ಫಿ ಕ್ಲಿಕ್ಕಿಸಿಕೊಂಡರು.
‘ಬೆಳಿಗ್ಗೆ ಆರ್ಚಕರು ಮಾತ್ರ ಪೂಜೆ ಸಲ್ಲಿಸಿದ್ದಾರೆ. ಸಂಜೆ ಮಹಾಮಂಗಳಾರತಿ ನಂತರ ಪೂಜಾ ಕಾರ್ಯಕ್ರಮ ಮುಕ್ತಾಯ ಆಗುತ್ತದೆ. ನೂರಾರು ವರ್ಷಗಳ ಇತಿಹಾಸವಿರುವ ದೇವಸ್ಥಾನದ ಜಾತ್ರೆ ಇದೇ ಮೊದಲ ಬಾರಿ ರದ್ದಾಗಿದೆ’ ಎಂದು ಆರ್ಚಕ ತಿಳಿಸಿದರು.
ಕಂದಕೂರ ಜಾತ್ರೆ ರದ್ದಾಗಿದ್ದರಿಂದ ಅಲ್ಲಿಗೆ ಬಂದಿದ್ದ ಭಕ್ತರು ಚಿಂತನಹಳ್ಳಿ ಗವಿಸಿದ್ಧೇಲಿಂಗೇಶ್ವರ ದೇವಸ್ಥಾನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜಮಾವಣೆಗೊಂಡಿದ್ದರು. ಕಾರು, ಬೈಕ್, ಆಟೊಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬಂದಿದ್ದರು. ಇಲ್ಲಿ ಪೊಲೀಸರನ್ನು ನಿಯೋಜಿಸಿರಲಿಲ್ಲ. ಹೀಗಾಗಿ ಯಾವುದೇ ನಿಯಮಗಳು ಪಾಲನೆಯಾಗಲಿಲ್ಲ. ಜನರು ಗುಂಪು ಗುಂಪಾಗಿ ತೆರಳುವ ದೃಶ್ಯ ಸಾಮಾನ್ಯವಾಗಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.