
ಸುರಪುರ: ತಾಲ್ಲೂಕಿನ ರುಕ್ಮಾಪುರ ಗ್ರಾಮದ ಕೊಟ್ಟೂರು ಬಸವೇಶ್ವರ ಜಾತ್ರಾ ಮಹೋತ್ಸವದ ನಿಮಿತ್ತ ಗುರುವಾರ ಭಕ್ತ ಸಮೂಹದ ಮಧ್ಯೆ ರಥೋತ್ಸವವು ಅದ್ದೂರಿಯಾಗಿ ನಡೆಯಿತು.
ಬೆಳಿಗ್ಗೆ ದೇವಸ್ಥಾನದಲ್ಲಿ ಕೊಟ್ಟೂರು ಬಸವೇಶ್ವರ ದೇವರಿಗೆ ಬಿಲ್ವಾರ್ಚನೆ ಪೂಜೆ, ರುದ್ರಾಭಿಷೇಕ, ನೈವೇದ್ಯ ಅರ್ಪಣೆ ಸೇವಾ ಕಾರ್ಯಗಳು ಜರುಗಿದವು. ಬೆಳಗ್ಗೆಯಿಂದಲೇ ಭಕ್ತರು ದೇವಸ್ಥಾನಕ್ಕೆ ಭೇಟಿ ನೀಡಿ ಭಕ್ತಿ ಸಮರ್ಪಿಸಿದರು. ಕಾಯಿ, ಕರ್ಪೂರ ಸಲ್ಲಿಸಿ ದೇವರ ದರ್ಶನ ಪಡೆದರು. ಭಕ್ತರು ತೇರಿಗೆ ಬಾಳೆಹಣ್ಣು, ಉತ್ತತ್ತಿ ಅರ್ಪಿಸಿ ಭಕ್ತಿ ಹರಕೆ ತೀರಿಸಿ ಧನ್ಯತೆ ಮೆರೆದರು. ಜಯ ಘೋಷಗಳು ಮುಗಿಲು ಮುಟ್ಟಿದವು.
ಹಿರೇಮಠ ಸಂಸ್ಥಾನದ ಪೀಠಾಧಿಪತಿ ಗುರುಶಾಂತಮೂರ್ತಿ ಶಿವಾಚಾರ್ಯರು ಸಂದೇಶ ನೀಡಿ, ‘ಭಾರತೀಯ ಸಂಸ್ಕೃತಿಯಲ್ಲಿ ಜಾತ್ರೆಗೆ ಮಹತ್ವದ ಸ್ಥಾನವಿದೆ. ಜಾತ್ರೆ ಮತ್ತು ಉತ್ಸವಗಳು ನಮ್ಮ ಸಂಸ್ಕೃತಿಯ ಪ್ರತೀಕವಾಗಿವೆ. ಸೌಹಾರ್ದತೆ ಮತ್ತು ಭಾವ್ಯಕ್ಯದ ಸಂಕೇತಗಳಾಗಿವೆ. ಸಾಮರಸ್ಯದ ವಾತಾವರಣ ನಿರ್ಮಾಣವಾಗುತ್ತದೆ. ಜಾತಿ, ಧರ್ಮದ ಲೇಪವಿರುವುದಿಲ್ಲ’ ಎಂದು ಹೇಳಿದರು.
‘ಪರಂಪರಾಗತವಾಗಿ ಆಚರಿಸಿಕೊಂಡು ಬಂದ ಜಾತ್ರೆ, ಹಬ್ಬಗಳು ಎಲ್ಲ ಸಮುದಾಯದ ಜನರಲ್ಲಿ ಸಮಾನತೆ, ಒಗ್ಗಟ್ಟು, ಹೊಂದಾಣಿಕೆ ಮನೋಭಾವ ಮೂಡಿಸುತ್ತವೆ. ಹೀಗಾಗಿ ಪ್ರತಿವರ್ಷ ಜಾತ್ರೆ, ಹಬ್ಬಗಳನ್ನು ಸಂಭ್ರಮದಿಂದ ಆಚರಿಸಬೇಕು. ಗ್ರಾಮೀಣ ಭಾರತದ ಸೌಹಾರ್ದ ಮತ್ತು ಆರ್ಥಿಕ ಸುಭದ್ರತೆಯಲ್ಲಿ ಜಾತ್ರೆಗಳು ಮಹತ್ತರ ಪಾತ್ರ ವಹಿಸುತ್ತವೆ’ ಎಂದರು.
‘ಪ್ರತಿಯೊಬ್ಬರೂ ಧರ್ಮದ ತಳಹದಿ ಮೇಲೆ ಬದುಕು ರೂಪಿಸಿಕೊಳ್ಳಬೇಕು. ಮಕ್ಕಳಿಗೆ ಉತ್ತಮ ಶಿಕ್ಷಣ, ಸಂಸ್ಕಾರ ನೀಡಬೇಕು. ಕೊಟ್ಟೂರು ಬಸವೇಶ್ವರ ಸಕಲ ಭಕ್ತವೃಂದಕ್ಕೆ ಸನ್ಮಂಗಳವನ್ನುಂಟು ಮಾಡಲಿ’ ಎಂದು ಹರಸಿದರು.
ಜಾತ್ರೆ ನಿಮಿತ್ತ ಸೋಮವಾರ ಉಚ್ಚಾಯ ಮಹೋತ್ಸವ, ಮಂಗಳವಾರ ಸೇವಾ ಕಾರ್ಯ, ಬುಧವಾರ ಪುರವಂತರ ಸೇವೆ, ನಂದಿಕೋಲು, ಪಲ್ಲಕ್ಕಿ ಉತ್ಸವ ಸೇವಾ ಕಾರ್ಯಗಳು ಜರುಗಿದವು. ಶನಿವಾರ ಕಡುಬಿನ ಕಾಳಗ, ಸೋಮವಾರ ಕಳಸಾರೋಹಣದೊಂದಿಗೆ ಜಾತ್ರೆ ಸಂಪನ್ನಗೊಳ್ಳಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.