ಶಹಾಪುರ: ಕೃಷ್ಣಾ ನದಿ ಹಂಚಿಕೆ ಕುರಿತು ಐತೀರ್ಪಿನಂತೆ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಬೇಕು ಎಂದು ನೀರಾವರಿ ತಜ್ಞ ಭಾಸ್ಕರರಾವ್ ಮುಡಬೂಳ ಒತ್ತಾಯಿಸಿದ್ದಾರೆ.
ಕೃಷ್ಣಾ ನದಿ ನೀರಿನ ಹಂಚಿಕೆ ಕುರಿತು ನೂತನ ನ್ಯಾಯಮಂಡಳಿ ನೇಮಿಸಬೇಕೆಂದು ತೆಲಂಗಾಣ ರಾಜ್ಯ ಸರ್ಕಾರದ ಬೇಡಿಕೆಯಲ್ಲಿ ರಾಜಕೀಯ ಸ್ವಾರ್ಥ ಅಡಗಿದೆ. 2013ರಲ್ಲಿನ ಐತೀರ್ಪಿನಲ್ಲಿ ಸ್ಪಷ್ಟವಾಗಿ ಮಹಾರಾಷ್ಟ್ರ, ಆಂಧ್ರಪ್ರದೇಶ, ಕರ್ನಾಟಕಕ್ಕೆ ನೀರು ಹಂಚಿಕೆ ತಿಳಿಸಿರುವಾಗ ಅನವಶ್ಯಕವಾಗಿ ಗೊಂದಲ ಸೃಷ್ಟಿ ಮಾಡುವ ಬದಲು ಐತೀರ್ಪಿನಂತೆ ಸರ್ಕಾರ ಅಧಿಸೂಚನೆ ಹೊರಡಿಸಬೇಕು ಎಂದು ಅವರು ಹೇಳಿದ್ದಾರೆ.
2014ರಲ್ಲಿ ತೆಲಂಗಾಣ ರಾಜ್ಯ ಉದಯವಾಗಿದೆ. ಆದರೆ ಕೃಷ್ಣಾ ನದಿ ನೀರಿನ ಹಂಚಿಕೆ ಬಗ್ಗೆ ಈಗಾಗಲೇ ಆಂಧ್ರ ಪ್ರದೇಶಕ್ಕೆ ನೀರು ಹಂಚಿಕೆ ಮಾಡಲಾಗಿದೆ. ಸುಪ್ರಿಂ ಕೋರ್ಟ್ನಲ್ಲಿಯೂ ಅರ್ಜಿ ವಜಾ ಆಗಿರುವಾಗ ಮರುವಿಚಾರಣೆ ನಡೆಸುವ ಪ್ರಶ್ನೆ ಉದ್ಭವಿಸದು. ಆದರೆ ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ರಾಜಕೀಯ ಪ್ರೇರಿತವಾಗಿ ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ಬಿಜೆಪಿಯ ಅಸ್ತಿತ್ವಕ್ಕಾಗಿ ಕೃಷ್ಣಾ ನ್ಯಾಯಮಂಡಳಿಯ ತಗಾದೆಗೆ ಮರು ಜೀವ ನೀಡುವ ಪ್ರಯತ್ನ ಮಾಡುತ್ತಿದ್ದು, ಕೂಡಲೇ ಇದನ್ನು ನಿಲ್ಲಿಸಬೇಕು ಎಂದು ಹೇಳಿದ್ದಾರೆ.
ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಐತೀರ್ಪು ಸ್ವಾಗತ ಮಾಡಿ ತ್ವರಿತವಾಗಿ ನೀರಾವರಿ ಯೋಜನೆ ಪೂರ್ಣಗೊಳಿಸುವುದಾಗಿ ತಿಳಿಸಿದ್ದರು. ಈಗಲೂ ಅವರೇ ಮುಖ್ಯಮಂತ್ರಿಯಾಗಿದ್ದಾರೆ. ಕೃಷ್ಣಾ ಅಚ್ಚುಕಟ್ಟು ಪ್ರದೇಶದ ರೈತರ ಜೀವನಾಡಿಗೆ ಐತೀರ್ಪು ಜಾರಿಗೆ ಅಧಿಸೂಚನೆ ಹೊರಡಿಸಿ ಬದ್ದತೆಯನ್ನು ಪ್ರದರ್ಶಿಸಬೇಕು. ತೆಲಂಗಾಣದ ಕ್ಯಾತೆಯ ಬಗ್ಗೆ ರಾಜ್ಯದ 25 ಬಿಜೆಪಿ ಸಂಸದರು ವಿರೋಧಿಸಬೇಕು ಎಂದು ಅವರು ಸಲಹೆ ನೀಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.