ADVERTISEMENT

‘ಸೋಲಿನ ಭೀತಿಯಲ್ಲಿ ಮಹಿಳೆಯರಿಗೆ ಅವಮಾನ’

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2024, 16:20 IST
Last Updated 15 ಏಪ್ರಿಲ್ 2024, 16:20 IST
ಶರಣಬಸಪ್ಪ ದರ್ಶನಾಪುರ
ಶರಣಬಸಪ್ಪ ದರ್ಶನಾಪುರ    

ಶಹಾಪುರ: ‘ಗ್ಯಾರಂಟಿಗಳಿಂದ ಹಳ್ಳಿಗಳ ಹೆಣ್ಣು ಮಕ್ಕಳು ದಾರಿ ತಪ್ಪಿದ್ದಾರೆ’ ಎಂಬ ಹೇಳಿಕೆ ನೀಡುವ ಮೂಲಕ ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಸೋಲಿನ ಭೀತಿಯಲ್ಲಿ ಮಹಿಳೆಯರನ್ನು ಅವಮಾನ ಮಾಡಿದ್ದಾರೆ. ಇದು ಅವರ ಹತಾಸೆಗೆ ಹಿಡಿದ ಕೈಗನ್ನಡಿಯಾಗಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಛೇಡಿಸಿದರು.

ತಾಲ್ಲೂಕಿನ ಚಾಮನಾಳ ಗ್ರಾಮದಲ್ಲಿ ಸೋಮವಾರ ಪತ್ರಕರ್ತರ ಜೊತೆ ಮಾತನಾಡಿದ ಅವರು, ‘ರಾಜ್ಯದಲ್ಲಿ ಕನಿಷ್ಠ 20 ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸುವುದರಲ್ಲಿ ಅನುಮಾನವಿಲ್ಲ. ರಾಯಚೂರು ಲೋಕಸಭೆಯ ಬಿಜೆಪಿ ಅಭ್ಯರ್ಥಿಯ ಗೊಂದಲ ಇನ್ನೂ ಬಗೆಹರಿದಿಲ್ಲ. ಇನ್ನೂ ಪ್ರಚಾರ ಮಾಡುವುದು ಯಾವಾಗ?’ ಎಂದು ಅವರು ಲೇವಡಿ ಮಾಡಿದರು.

‘ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಆಗದಂತೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ತಹಶೀಲ್ದಾರ ಉಸ್ತುವಾರಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಕಂಡು ಬಂದರೆ ತಕ್ಷಣ ಪರಿಹರಿಸಲು ಸೂಚಿಸಿದೆ. ನಾರಾಯಣಪುರ ಜಲಾಶಯದಿಂದ ಕಾಲುವೆಗೆ ನೀರು ಹರಿಸುವಂತೆ ಜಿಲ್ಲಾಧಿಕಾರಿ ಮೂಲಕ ಆರ್.ಸಿ ಅವರಿಗೆ ಪತ್ರ ಬರೆಯಲಿದೆ’ ಎಂದರು.

ADVERTISEMENT

ಕೆರೆಯ ನೀರು ಬೆಳೆಗೆ

ಶಹಾಪುರ: ‘ತಾಲ್ಲೂಕಿನ ನಡಿಹಾಳ ಕೆರೆಗೆ ಜೆಬಿಸಿ (ಜೇವರ್ಗಿ ಮುಖ್ಯ ಕಾಲುವೆ) ಮೂಲಕ ನೀರು ತುಂಬಿಸಿದರೆ ಸುತ್ತಮುತ್ತಲಿನ ರೈತರು ಕೆರೆಯ ನೀರನ್ನು ಬೆಳೆಗೆ ಉಪಯೋಗಿಸಿದರೆ ಏನು ಮಾಡಬೇಕು?’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಬೇಸರ ವ್ಯಕ್ತಪಡಿಸಿದರು. ‘ರೈತರು ಪರಿಸ್ಥಿತಿ ಅರಿತುಕೊಳ್ಳಬೇಕು. ಮೊದಲು ಕುಡಿಯುವ ನೀರಿನ ಆದ್ಯತೆ ನಮ್ಮದಾಗಿದೆ. ಇದಕ್ಕೆ ಎಲ್ಲರ ಸಹಕಾರ ಅಗತ್ಯವಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.