ಯಾದಗಿರಿ: ಜಿಲ್ಲೆಯ ಪ್ರಸಿದ್ಧ ಕ್ಷೇತ್ರವಾದ ಮೈಲಾಪುರದಲ್ಲಿ ದೀಪಾವಳಿ ಅಂಗವಾಗಿ ಮೈಲಾರಲಿಂಗೇಶ್ವರ ಜಾತ್ರೆ ಅದ್ದೂರಿಯಾಗಿ ಜರುಗಿತು. ಅತ್ತೆಯ ಮನೆಯಾದ ಹಳಗೇರಿ ಗ್ರಾಮದಲ್ಲಿ ಐದು ದಿನಗಳು ಉಳಿದುಕೊಂಡಿದ್ದ ಮೈಲಾರಲಿಂಗೇಶ್ವರನನ್ನು (ಕಂಡರಾಯ) ಭಕ್ತರು ಮೆರವಣಿಗೆಯೊಂದಿಗೆ ಕರೆತಂದರು.
ದೀಪಾವಳಿ ಜಾತ್ರೆಯ ಅಂಗವಾಗಿ ದೇವಸ್ಥಾನ ಹಾಗೂ ಗ್ರಾಮದಲ್ಲಿ ಹಲವು ವಿಧಿವಿಧಾನಗಳು ಜರುಗಿದವು. ಸ್ವಕ್ಷೇತ್ರಕ್ಕೆ ಬಂದ ಕಂಡರಾಯನನ್ನು ಭಕ್ತರು ದೀವಟಿಗೆ ಹಿಡಿದು ಡೊಳ್ಳು, ಬಾಜಾ–ಭಜಂತ್ರಿ, ಭಂಡಾರ ಎರಚುತ್ತಾ ಏಳು ಕೋಟಿ ಜಯಘೋಷಗಳೊಂದಿಗೆ ಬರ ಮಾಡಿಕೊಂಡರು.
ಮೈಲಾರಲಿಂಗೇಶ್ವರನ ತಾಯಿಯಾದ ಬನ್ನಿ ಮಹಾಂಕಾಳಿ ತಾಯಿಗೆ ಭಾನುವಾರ ರಾತ್ರಿ ಮಹಾಪೂಜೆ ಮತ್ತು ನೈವೇದ್ಯ (ಭೂಮದ ಪೂಜೆ)
ನೆರವೇರಿತು.
ಬನ್ನಿ ಮಹಾಂಕಾಳಿ ತಾಯಿಗೆ ಪೂಜೆ ಸಲ್ಲಿಸಿದ ಬಳಿಕ ನಡೆದ ದೇವರ ಹೇಳಿಕೆಯಲ್ಲಿ ‘ನಾಲ್ಕು ಮೂಲೆ ಎಂಟು ದಿಕ್ಕುಗಳು ಸಂಪೂರ್ಣ’ ಎಂದು ಭವಿಷ್ಯ ನುಡಿಯುತ್ತಿದಂತೆ ಜಯ ಘೋಷಗಳು ಮೊಳಗಿದವು. ಆ ನಂತರ ಸಂಪ್ರದಾಯದಂತೆ ದೇವಸ್ಥಾನದ ಬೆಟ್ಟದ ಆರಂಭಿಕ ಮೆಟ್ಟಿಲುಗಳ ಸಮೀಪದಲ್ಲಿ ಪೂಜಾರಿಯು ಕಬ್ಬಿಣದ ಸರಪಳಿಯನ್ನು ಹರಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.