ಶಹಾಪುರ: ನಕಲಿ ಸಹಿ ಮಾಡಿ ಹಣ ದುರ್ಬಳಕೆ ಮಾಡಿಕೊಂಡ ಆರೋಪದ ಮೇಲೆ ಇಬ್ಬರು ಆರೋಪಿಗಳಿಗೆ ಶಹಾಪುರ ಹೆಚ್ಚುವರಿ ನ್ಯಾಯಾಲಯದ ನ್ಯಾಯಾಧೀಶ ಬಸವರಾಜ ಅವರು ಮಂಗಳವಾರ ದಂಡ ವಿಧಿಸಿ ಆದೇಶ ನೀಡಿದ್ದಾರೆ.
ಮರೆಮ್ಮ ಭೀಮರಾಯ ರಾಜಾಪುರ ಅವರಿಗೆ ನ್ಯಾಯಾಲಯ ₹ 20 ಸಾವಿರ ದಂಡ ಹಾಗೂ ಒಂದು ದಿನ ಶಿಕ್ಷೆ ಹಾಗೂ ಪಿಡಿಒ ಜ್ಞಾನಮಿತ್ರ ಅವರಿಗೆ ₹18 ಸಾವಿರ ದಂಡ ಒಂದು ದಿನದ ಶಿಕ್ಷೆ ವಿಧಿಸಿದ್ದಾರೆ.
2009-10ನೇ ಸಾಲಿನ ಇಂದಿರಾ ಅವಾಜ್ ಯೋಜನೆಯ ಹೊಸಕೇರಾ ಗ್ರಾ.ಪಂ.ವ್ಯಾಪ್ತಿಯ ರಾಜಾಪುರ(ಬಿ) ಗ್ರಾಮದ ಆಯ್ಕೆಯಾದ ಫಲಾನುಭವಿಯ ತಲಾ ₹ 10 ಸಾವಿರದ ಎರಡು ಚೆಕ್ ಅನ್ನು ಬೇರೊಬ್ಬ ಫಲಾನುಭವಿ ತೆಗೆದುಕೊಂಡಿದ್ದಾರೆ ಎಂದು ಆರೋಪಿಸಿ ಅಂದಿನ ಗ್ರಾಮ ಪಂಚಾಯಿತಿ ಸದಸ್ಯೆ ಮರೆಮ್ಮ, ಪಿಡಿಒ ಜ್ಞಾನಮಿತ್ರ ಹಾಗೂ ಕಂಪ್ಯೂಟರ್ ಆಪರೇಟರ್ ಭೀಮಾಶಂಕರ ವಿರುದ್ಧ ಅಂದಿನ ತಾ.ಪಂ.ಇಒ ಭೀಮರಾಯ ಕವಾಲ್ದಾರ ಅವರು 2011 ಡಿಸೆಂಬರ್ 23ರಂದು ಗೋಗಿ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಮಂಗಳವಾರ ನಡೆದ ವಿಚಾರಣೆ ವೇಳೆ ಭೀಮಾ ಶಂಕರ ಮೇಲೆ ಆರೋಪ ಸಾಬೀತು ಆಗದ ಕಾರಣ ಯಾವುದೇ ದಂಡ ವಿಧಿಸಿಲ್ಲ ಎಂದು ತೀರ್ಪಿನಲ್ಲಿ ಉಲ್ಲೇಖಿಸಲಾಗಿದೆ.
ಗೋಗಿ ಠಾಣೆಯ ಅಂದಿನ ಪಿಎಸ್ಐ ವಿಜಯಕಮಾರ ಅವರು ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.ಫಿರ್ಯಾದಿದಾರರ ಪರವಾಗಿ ಸರ್ಕಾರಿ ಸಹಾಯಕ ಅಭಿಯೋಜಕ ವೈ.ಬಿ.ದೇಸಾಯಿ ಕಕ್ಕೇರಿ ವಾದ ಮಂಡಿಸಿದ್ದರು.
ಎಪಿಎಂಸಿಗೆ ನಾಮನಿರ್ದೇಶಿತ ಸದಸ್ಯರ ನೇಮಕ
ಶಹಾಪುರ: ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯು ತಾಲ್ಲೂಕಿನ ಮೂವರು ಸದಸ್ಯರನ್ನು ನಾಮ ನಿರ್ದೇಶರನ್ನಾಗಿ ನೇಮಕಗೊಳಿಸಿ ಸಹಕಾರ ಇಲಾಖೆಯ ಅಧೀನ ಕಾರ್ಯದರ್ಶಿ ಜಿ.ಎನ್.ಧನಲಕ್ಷ್ಮಿ ಮಂಗಳವಾರ ಆದೇಶಿಸಿದ್ದಾರೆ.
ಖಾನಾಪುರದ ರಾಮಣ್ಣ ಹೊರಮನಿ, ರಾಮಾ ನಾಯಕ ತಾಂಡಾದ ಶೇಖುಬಾಯಿ ಉಮಾಸಿಂಗ್ ಹಾಗೂ ನಗರದ ಸಣ್ಣ ನಿಂಗಪ್ಪ ನಾಯ್ಕೋಡಿ ಅವರನ್ನು ನಾಮ =ನಿರ್ದೇಶನ ಮಾಡಿ ನೇಮಕ ಮಾಡಲಾಗಿದೆ ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.