ಸೈದಾಪುರ (ಯಾದಗಿರಿ): ಪುಸ್ತಕಗಳಿಲ್ಲದೇ ದೂಳು ಹಿಡಿದು ನಿಂತ ಖುರ್ಚಿ, ಟೇಬಲ್... ಇದು ಸೈದಾಪುರ ಪಟ್ಟಣದ ಗ್ರಂಥಾಲಯದ ಚಿತ್ರಣ.
ಪಟ್ಟಣದ ಜನ ಭರಿತ ಪ್ರದೇಶದಲ್ಲಿ ಒಂದಾಗಿರುವ ರೈಲು ನಿಲ್ದಾಣದ ಪಕ್ಕದಲ್ಲಿರುವ ಸಾರ್ವಜನಿಕ ಗ್ರಂಥಾಲಯ ಕಟ್ಟಡ ಶಿಥಿಲಾವ್ಯವಸ್ಥೆಯಲ್ಲಿದೆ.
ಸುತ್ತಮುತ್ತಲಿನ ಪ್ರದೇಶವನ್ನು ವ್ಯಾಪಾರಿಗಳು ಒತ್ತುವರಿ ಮಾಡಿಕೊಂಡಿದ್ದಾರೆ. ಇದರಿಂದ ಆ ಕಡೆ ಯಾರು ಹೋಗದಿರುವುದರಿಂದ ಗ್ರಂಥಾಲಯ ಕಟ್ಟಡ ಪಾಳು ಬಿದ್ದಿದೆ.
ಸೈದಾಪುರ ಪಟ್ಟಣ ದಿನದಿಂದ ದಿನಕ್ಕೆ ಬೆಳೆಯುತ್ತಿದೆ. ಪ್ರಾಥಮಿಕ, ಪ್ರೌಢ, ಪದವಿ ಸೇರಿದಂತೆ ವೃತ್ತಿ ಶಿಕ್ಷಣ ಪದವಿ ಮಾಡಿರುವ ಯುವಜನರು ಪಟ್ಟಣದಲ್ಲಿ ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಗ್ರಂಥಾಲಯದಿಂದ ಅವರ ಓದಿಗೆ ಅನುಕೂಲವಾಗಲಿದೆ. ಈಗ ಇರುವ ಗ್ರಂಥಾಲಯ ಕಟ್ಟಡವನ್ನು ಸ್ಥಳಾಂತರಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸುತ್ತಾರೆ.
ಪುಸ್ತಕಗಳಿಲ್ಲದ ಗ್ರಂಥಾಲಯ: ಗ್ರಂಥಾಲಯ ಕಟ್ಟಡ ಶಿಥಿಲಾವಸ್ಥೆಗೆ ತಲುಪಿದೆ. ಅಲ್ಲಿ ಹೆಚ್ಚಿನ ಪುಸ್ತಕಗಳಿಲ್ಲ. ಇರುವ ಪುಸ್ತಕಗಳು ಸಹ ದೂಳು ಹಿಡಿದು ಕೊಳೆಯುತ್ತಿವೆ. ದಿನ ಪತ್ರಿಕೆಗಳು ಹಾಗೂ ಪುಸ್ತಕಗಳಿಲ್ಲದ ಕಟ್ಟಡವನ್ನು ಗ್ರಂಥಾಲಯವೆಂದು ಹೇಗೆ ಕರೆಯಲಾಗುತ್ತದೆ ಎಂದು ಜನರು ಪ್ರಶ್ನಿಸುತ್ತಾರೆ.
ಗ್ರಂಥಾಲಯದಲ್ಲಿಯ ಅವ್ಯವಸ್ಥೆಯನ್ನು ಸರಿಪಡಿಸಿ ಎಂದು ಹಲವು ಬಾರಿ ಅಧಿಕಾರಿಗಳಿಗೆ ಮನವಿ ಮಾಡಲಾಗಿದೆ. ಆದರೆ ಅಧಿಕಾರಿಗಳು ಸಂಬಂಧವಿಲ್ಲದಂತೆ ವರ್ತಿಸುತ್ತಿದ್ದಾರೆ. ಪಿಡಿಒ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಯುವಕರು ಒತ್ತಾಯಿಸುತ್ತಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.