ಯಾದಗಿರಿ: ಜಿಲ್ಲೆಯ ಶಹಾಪುರ ತಾಲ್ಲೂಕಿನ ಚಾಮನಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮ, ತಾಂಡಾಗಳಲ್ಲಿ ಸುಮಾರು 7,500 ರೇಷ್ಮೆ ಮೊಟ್ಟೆಯ ಹುಳುಗಳು 21 ದಿನ ಸಾಕಾಣಿಕೆ ನಂತರ ರೇಷ್ಮೆ ಗೂಡು ಕಟ್ಟುವ ಕೊನೆಯ ಹಂತದಲ್ಲಿ ಗೂಡು ಕಟ್ಟುತ್ತಿಲ್ಲ. ಇದರಿಂದಾಗಿ ರೇಷ್ಮೆ ಬೆಳೆಗಾರರು ಸಾಲ ಮಾಡಿದ ಬಡ್ಡಿ ಕಟ್ಟಲು ಪರದಾಡುತ್ತಿದ್ದಾರೆ.
ಚಾಮನಾಳ, ಲಚಮಾನಾಯಕ್ ತಾಂಡಾ, ಚಂದಾಪುರ ತಾಂಡಾ, ಚಂದಾಪುರ, ಉಕ್ಕಿನಾಳ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಎರಡು ತಲೆಮಾರುಗಳಿಂದ ರೇಷ್ಮೆ ಕೃಷಿ ಮಾಡುತ್ತಿದ್ದಾರೆ. ಕಳೆದ ಎರಡು ವರ್ಷಗಳಿಂದ ಮಾತ್ರ ರೇಷ್ಮೆ ಗೂಡು ಕಟ್ಟುತ್ತಿಲ್ಲ ಎನ್ನುವುದು ಬೆಳೆಗಾರರ ಅನುಭವದ ಮಾತಾಗಿದೆ. ರೇಷ್ಮೆ ಬೆಳೆಗಾಗಿ ಲಕ್ಷಾಂತರ ರೂಪಾಯಿ ವೆಚ್ಚ ಮಾಡಿದ ಬೆಳೆಗಾರರು ಬೆಳೆ ಬಾರದಿದ್ದರಿಂದ ಹಿಪ್ಪುನೇರಳೆ ಸಮೇತ ಹುಳುಗಳನ್ನು ಸುಡುತ್ತಿದ್ದಾರೆ. ಕೆಲವೆಡೆ ರಸ್ತೆಗೆ ಬಿಸಾಡುತ್ತಿದ್ದಾರೆ.
‘ರೇಷ್ಮೆ ಹುಳುಗಳು ಗೂಡು ಕಟ್ಟದ ಹವಾಗುಣ ಅಥವಾ ಸ್ಥಳೀಯ ಮಟ್ಟದಲ್ಲಿ ಆಗಿರುವ ಏರುಪೇರುಗೆ ಸಂಬಂಧಿಸಿದಂತೆ ರೇಷ್ಮೆ ಇಲಾಖೆ ಅಧಿಕಾರಿಗಳು ಒಮ್ಮೆಯೂ ಭೇಟಿ ನೀಡಿ ಮಾಹಿತಿ ನೀಡಿಲ್ಲ’ ಎಂದು ಬೆಳೆಗಾರರಾದ ಗೋವಿಂದ್ ತೇಜು, ರಮೇಶ್ ತಾರು, ಫುಲಸಿಂಗ್ ರಾಠೋಡ್ ಆರೋಪಿಸುತ್ತಾರೆ.
ಶಹಾಪುರ ತಾಲ್ಲೂಕಿನಲ್ಲಿ ಹೆಚ್ಚು ಬೆಳೆಗಾರರು: ಜಿಲ್ಲೆಯ ಆರು ತಾಲ್ಲೂಕುಗಳಲ್ಲಿ 300ಕ್ಕೂ ಹೆಚ್ಚು ರೇಷ್ಮೆ ಬೆಳೆಗಾರರಿದ್ದಾರೆ. ಶಹಾಪುರ ತಾಲ್ಲೂಕಿನಲ್ಲಿ ಮಾತ್ರ ಹೆಚ್ಚು ರೇಷ್ಮೆ ಬೆಳೆಗಾರರಿದ್ದಾರೆ. ಅದರಲ್ಲೂ ಚಾಮನಾಳ, ಚಂದಾಪುರ, ದರ್ಶನಾಪುರ, ಉಕ್ಕಿನಾಳ ಗ್ರಾಮ, ತಾಂಡಾಗಳಲ್ಲಿ ಚಾಕಿ, ಗೂಡು ಉತ್ಪಾದನೆ ಮಾಡುತ್ತಾರೆ.
ಜೀವ ಕೊಟ್ಟ ರೇಷ್ಮೆ
ಒಂದು ಕಾಲದಲ್ಲಿ ರೇಷ್ಮೆ ಕೃಷಿ ಮಾಡಿ ಹಲವರು ಜೀವನ ಕಟ್ಟಿಕೊಂಡಿದ್ದರೆ, ಈಗ ಜೀವ ಕಳೆದುಕೊಳ್ಳುವ ಮಟ್ಟಿಗೆ ಬೆಳೆಗಾರರು ತಲುಪಿದ್ದಾರೆ.
‘ನಮ್ಮ ಭಾಗದಲ್ಲಿ ಹಲವರು ಎರಡು, ಮೂರು ಎಕರೆಗಳಲ್ಲಿ ರೇಷ್ಮೆ ಕೃಷಿ ಮಾಡುತ್ತಿದ್ದಾರೆ. ರೇಷ್ಮೆ ಗೂಡು ಮನೆ ನಿರ್ಮಾಣಕ್ಕೆ ಲಕ್ಷಾಂತರ ಖರ್ಚು ಮಾಡಿದ್ದಾರೆ. ಒಂದು ಬಾರಿಯ ರೇಷ್ಮೆ ಗೂಡಿಗೆ ಲಕ್ಷಾಂತರ ಖರ್ಚು ವೆಚ್ಚವಿದೆ. ಹಿಪ್ಪು ನೇರಳೆ ಕಡಿದು ಹಾಕಲು ಕೂಲಿಯಾಳುಗಳಿಗೆ ಸಾವಿರಾರು ರೂಪಾಯಿ ಕೂಲಿ ನೀಡಬೇಕಿದೆ. ಹಣ ಖರ್ಚು ಮಾಡಿದರೂ ಹುಳು ಎಲೆ ತಿಂದು ಉದ್ದವಾಗುತ್ತಿದೆಯೇ ಹೊರತು ಗೂಡುಕಟ್ಟುತ್ತಿಲ್ಲ. ಹೀಗಾಗಿ ಸಾಲ ಹೆಚ್ಚಾಗಿ ನಮ್ಮ ಜೀವಕ್ಕೆ ಕಂಟಕವಾಗಿದೆ’ ಎಂದು ಬೆಳೆಗಾರರಾದ ಸಿದ್ದಲಿಂಗ ಸಾಹುಕಾರ, ಗೋಪಾಲ ಕೃಷ್ಣಪ್ಪ ರಾಠೋಡ್ ಹೇಳುತ್ತಾರೆ.
‘ಈ ಭಾಗದಲ್ಲಿ ಕೋಟಿಗಟ್ಟಲೆ ಬೆಳೆ ಹಾನಿಯಾಗಿ ರೇಷ್ಮೆ ಬೆಳೆಗಾರರು ನೇಣಿಗೆ ಶರಣಾಗುವ ಪರಿಸ್ಥಿತಿ ನಿರ್ಮಾಣವಾಗಿದೆ. ರೇಷ್ಮೆ ಬೆಳೆ ಗೂಡು ಕಟ್ಟದ ಕಾರಣ ಏನು ಎಂಬುದು ತಿಳಿಯದಾಗಿದೆ. ಅಧಿಕಾರಿಗಳು ಬಂದು ಮಾಹಿತಿ ನೀಡುತ್ತಿಲ್ಲ. ಡಿಸಿಸಿ ಬ್ಯಾಂಕ್ನಲ್ಲಿ ₹ 20 ಲಕ್ಷ ಸಾಲ ತೆಗೆದುಕೊಂಡಿದ್ದೇವೆ. ಬಡ್ಡಿ ಹಣ ಕಟ್ಟಲು ಹಣವಿಲ್ಲ. ಮಕ್ಕಳನ್ನು ಹಾಸ್ಟೆಲ್ನಲ್ಲಿಟ್ಟು ಓದಿಸುತ್ತಿದ್ದೇವೆ. ಮಕ್ಕಳನ್ನು ಸಾಕಲು, ಬಡ್ಡಿ ಕಟ್ಟಲು ಹಣವಿಲ್ಲ’ ಎನ್ನುತ್ತಾರೆ ಅನಿತಾ–ಗೋವಿಂದ ಚವ್ಹಾಣ ದಂಪತಿ.
‘ರೇಷ್ಮೆ ಹುಳು ಗೂಡುಕಟ್ಟದ ಕುರಿತು ಅಕ್ಟೋಬರ್ 18ರಂದು ವಿಜ್ಞಾನಿಗಳ ತಂಡ ಯಾದಗಿರಿಗೆ ಭೇಟಿ ನೀಡಿ ಬೆಳೆಗಾರರ ಜೊತೆ ಸಂವಾದ ನಡೆಸಲಿದೆ. ರೇಷ್ಮೆ ಹುಳುಗಳಿಗೆ ವೈರಲ್ ಜ್ವರ ಬಂದಿದ್ದು, ವಿಜ್ಞಾನಿಗಳು ಹೇಳುವ ಮಾಹಿತಿಯನ್ನು ಪಾಲಿಸಿದರೆ ಬೆಳೆ ಸಿಗಲಿದೆ’ಎನ್ನುತ್ತಾರೆ ಯಾದಗಿರಿ ರೇಷ್ಮೆ ಕೃಷಿ ಉಪ ನಿರ್ದೇಶಕ ನಾಗಪ್ಪ ಬಿರಾದಾರ.
‘ರಾಜ್ಯವಾಪ್ತಿ ಸಮಸ್ಯೆ’
ಯಾದಗಿರಿ ಜಿಲ್ಲೆಯಲ್ಲಿ ಮಾತ್ರ ರೇಷ್ಮೆ ಗೂಡುಕಟ್ಟದ ಪರಿಸ್ಥಿತಿ ಇಲ್ಲ. ಅತಿ ಹೆಚ್ಚು ರಸಾಯನಿಕ ಬಳಕೆ ಮಾಡುವ ರಾಜ್ಯದ ಎಲ್ಲ ಕಡೆ ರೇಷ್ಮೆ ಗೂಡು ಕಟ್ಟುತ್ತಿಲ್ಲ. ಸೆಪ್ಟೆಂಬರ್ನಿಂದ ಡಿಸೆಂಬರ್ ವರೆಗೆ ರಸಾಯನಿಕ ಬಳಕೆ ಹೆಚ್ಚಿರುವುದರಿಂದ ರೇಷ್ಮೆ ಬೆಳೆ ಬರುವುದಿಲ್ಲ ಎಂದು ರೇಷ್ಮೆ ಇಲಾಖೆ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.