ಯಾದಗಿರಿ: ತಾಲ್ಲೂಕಿನ ಅಬ್ಬೆತುಮಕೂರ ಗ್ರಾಮದ ಬಿ.ಇಡಿ ಕಾಲೇಜು ಮುಂಭಾಗದ ವಿಶ್ವಾರಾಧ್ಯರ ಗದ್ದುಗೆ ಬಳಿ ಬಟ್ಟೆಯಲ್ಲಿ ಸುತ್ತಿಟ್ಟಿದ್ದ ನವಜಾತಶಿಶುವನ್ನು ಅಧಿಕಾರಿಗಳು ರಕ್ಷಿಸಿದ್ದಾರೆ.
ಗಂಡು ಮಗು 2.5 ಕೆಜಿ ತೂಕವಿದ್ದು, ಆರೋಗ್ಯವಾಗಿದೆ. ಜಿಲ್ಲಾಸ್ಪತ್ರೆಯ ಎಸ್ಎನ್ಸಿಯುನಲ್ಲಿ ದಾಖಲಿಸಲಾಗಿದೆ.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಪ್ರಭಾಕರ ಕವಿತಾಳ, ಶಿಶು ಯೋಜನಾಧಿಕಾರಿ ಅಭಿವೃದ್ಧಿ ಅಧಿಕಾರಿ ರಾಧಾ ಮಣ್ಣೂರ ಸೇರಿದಂತೆ ಪೊಲೀಸ್, ಮಕ್ಕಳ ಸಹಾಯವಾಣಿ ಅಧಿಕಾರಿಗಳು ಇದ್ದರು.
ಇತ್ತಿಚೆಗೆ ತಾಲ್ಲೂಕಿನ ಮುಂಡರಗಿ ಸಮೀಪದ ಮಳ್ಳುಕಂಟಿಯಲ್ಲಿಯೂ ಒಂದು ದಿನದ ನವಜಾತು ಶಿಶುವನ್ನು ರಕ್ಷಿಸಲಾಗಿತ್ತು.
ಈ ಕುರಿತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಪ್ರಭಾಕರ ಕವಿತಾಳ ಅವರು 'ಪ್ರಜಾವಾಣಿ'ಗೆ ಪ್ರತಿಕ್ರಿಯಿಸಿ, ‘ಇಬ್ಬರು ಶಿಶುಗಳ ಪೋಷಕರ ಪತ್ತೆಗಾಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ವಿಶ್ವಾರಾಧ್ಯ ಗದ್ದುಗೆ ಬಳಿ ಸಿಸಿಟಿವಿ ಕ್ಯಾಮರಾ ಇದ್ದು, ಪೊಲೀಸರೊಂದಿಗೆ ಸೇರಿ ಯಾರು ಶಿಶುವನ್ನು ತಂದಿಟ್ಟಿದ್ದಾರೆ ಎಂದು ಪರಿಶೀಲಿಸಲಾಗುವುದು. ಮಂಗಳವಾರ ನವಜಾತು ಶಿಶುವನ್ನು ಕಲುಬುರ್ಗಿಗೆ ಕಳಿಸಿಕೊಡಲಾಗುತ್ತಿದೆ’ಎಂದು ಮಾಹಿತಿ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.