ಬಾಲಕನ ಗಂಟಲಿನಲ್ಲಿ ಸಿಲುಕಿದ್ದ ಪ್ಲಾಸ್ಟಿಕ್ ಕ್ಲಿಪ್
ಯಾದಗಿರಿ: ಐದು ವರ್ಷದ ಬಾಲಕನ ಗಂಟಲಿನಲ್ಲಿ ಸಿಲುಕಿದ್ದ ಸೀರೆಗೆ ಹಚ್ಚುವ ಪಿನ್ನಿನ ಪ್ಲಾಸ್ಟಿಕ್ ಕ್ಲಿಪ್ ಅನ್ನು ನಗರದ ನಾಯ್ಕೋಡಿ ಆಸ್ಪತ್ರೆಯ ಕಿವಿ, ಮೂಗು, ಗಂಟಲು ತಜ್ಞ ಡಾ.ರಾಹುಲ್ ಎಸ್.ನಾಯ್ಕೋಡಿ ನೇತೃತ್ವದ ವೈದ್ಯರ ತಂಡ ಹೊರತೆಗೆಯುವಲ್ಲಿ ಯಶಸ್ವಿಯಾಗಿದೆ.
ಈ ಕುರಿತು ಮಾಹಿತಿ ನೀಡಿದ ಡಾ.ರಾಹುಲ್ ನಾಯ್ಕೋಡಿ, ‘ಮನೆಯಲ್ಲಿ ಆಟವಾಡುವ ಸಮಯದಲ್ಲಿ ಪಿನ್ನಿನ ಪ್ಲಾಸ್ಟಿಕ್ ಕ್ಲಿಪ್ ನುಂಗಿದ್ದಾನೆ ಎಂದು ‘ವಡಗೇರಾ ತಾಲ್ಲೂಕಿನ ಗಡ್ಡೆಸೂಗುರ ಗ್ರಾಮದ ಸಾಹೇಬರೆಡ್ಡಿ ಎಂಬುವರ ಐದು ವರ್ಷದ ಬಾಲಕ ಆಕಾಶನನ್ನು ನಮ್ಮ ಆಸ್ಪತ್ರೆಗೆ ದಾಖಲಿಸಿದ್ದರು. ನಾವು ಕೆಲವು ಪರೀಕ್ಷೆ ನಡೆಸಿ ಪರಿಶೀಲಿಸಿದಾಗ ಅದು ಗಂಟಲಿನಲ್ಲಿ ಸಿಲುಕಿರುವುದು ತಿಳಿಯಿತು’ ಎಂದರು.
‘ಗಂಟಲಿನಲ್ಲಿ ಸಿಕ್ಕಿಹಾಕಿಕೊಂಡ ಕಾರಣ ಮಗುವಿನ ಉಸಿರಾಟಕ್ಕೆ ತೊಂದರೆ ಉಂಟಾಗಿ ಆರೋಗ್ಯದಲ್ಲಿ ಏರುಪೇರಾಗಿತ್ತು. ತಕ್ಷಣ ವೈದ್ಯರ ತಂಡ ಲ್ಯಾರಿಂಗೊಸ್ಕೋಪಿ ಚಿಕಿತ್ಸೆ ಮೂಲಕ ಕ್ಲಿಪ್ ಹೊರತೆಗೆದು ಮಗುವಿನ ಜೀವ ರಕ್ಷಿಸಲಾಯಿತು’ ಎಂದು
ವಿವರಿಸಿದರು.
‘ಪಾಲಕರು ಚಿಕ್ಕ ಮಕ್ಕಳ ಕೈಗೆ ಮತ್ತು ಅವರ ಮುಂದೆ ಸಣ್ಣಪುಟ್ಟ ವಸ್ತುಗಳು, ವಿಶೇಷವಾಗಿ ನಾಣ್ಯಗಳನ್ನು ಕೊಡಬಾರದು. ಮಕ್ಕಳ ಗಂಟಲಿನಲ್ಲಿ ಪ್ಲಾಸ್ಟಿಕ್ ಅಥವಾ ನಾಣ್ಯದಂಥ ವಸ್ತುಗಳು ಸಿಲುಕಿದರೆ, ಮಗುವಿನ ಪ್ರಾಣ ಹಾನಿ ಸಂಭವ ಹೆಚ್ಚಾಗಿರುತ್ತದೆ. ಚಿಕ್ಕ ಮಕ್ಕಳ ಪಾಲಕರು ಜಾಗೃತೆ ವಹಿಸಬೇಕು’ ಎಂದು ಸಲಹೆ ನೀಡಿದರು.
ಈ ಚಿಕಿತ್ಸೆಯಲ್ಲಿ ಡಾ.ರಾಹುಲ್ ನಾಯ್ಕೋಡಿ, ಅರಿವಳಿಕೆ ತಜ್ಞ ಡಾ.ಚೇತನ್ ಜೆವೂರ, ಡಾ.ರಾಜೇಶ್ವರಿ ಆರ್.ನಾಯ್ಕೋಡಿ ಹಾಗೂ ಆಸ್ಪತ್ರೆಯ ಸಿಬ್ಬಂದಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.