ಕೆಂಭಾವಿ: ಅಮಲಿಹಾಳ ಗ್ರಾಮದಲ್ಲಿ ಶನಿವಾರ ಪರಿಶಿಷ್ಟ ಜಾತಿ ಮತ್ತು ಪಂಗಡದ 10 ಜನರು ಪೊಲೀಸ್ ಭದ್ರತೆಯಲ್ಲಿ ಹನುಮಾನ್ ದೇವಸ್ಥಾನ ದೇಗುಲ ಪ್ರವೇಶಿಸಿ, ಪೂಜೆ ಸಲ್ಲಿಸಿದ ಪ್ರಕರಣ ಇನ್ನೂ ತಿಳಿಗೊಂಡಿಲ್ಲ. ಅಮಲಿಹಾಳ ಮತ್ತು ಹೂವಿನಹಳ್ಳಿ ಗ್ರಾಮಗಳಲ್ಲಿ ಬಿಗುವಿನ ವಾತಾವರಣವಿದ್ದು, ಪೊಲೀಸರ ಬಿಗಿ ಬಂದೋಬಸ್ತ್ ಮುಂದುವರೆದಿದೆ. ನಿಷೇಧಾಜ್ಞೆ ಜಾರಿಯಲ್ಲಿದೆ.
‘ದೇಗುಲ ಪ್ರವೇಶಕ್ಕೆ ಸಂಬಂಧಿಸಿದಂತೆ ಎರಡೂ ಗ್ರಾಮಗಳ ನಡುವೆ ವೈಮನಸ್ಸು ಮೂಡಿತ್ತು. ಗ್ರಾಮದ ಮುಖಂಡರ ಜೊತೆ ಚರ್ಚಿಸಿದ ಪೊಲೀಸರು ಹೂವಿನಹಳ್ಳಿಯ 10 ಜನರಿಗೆ ಭದ್ರತೆ ನೀಡಿ, ದೇಗುಲ ಪ್ರವೇಶಕ್ಕೆ ಅವಕಾಶ ಕಲ್ಪಿಸಿದರು. ಒಟ್ಟು ಮೂವರು ಸಿಪಿಐ, ಐವರು ಪಿಎಸ್ಐ ಮತ್ತು 100 ಪೊಲೀಸರು ಇದ್ದರು.
‘ಅಹಿತಕರ ಘಟನೆ ಜರುಗದಂತೆ ತಡೆಯಲು ಡಿವೈಎಸ್ಪಿ ನೇತೃತ್ವದಲ್ಲಿ 3 ಸಿಪಿಐ, 10 ಪಿಎಸ್ಐ, 20 ಎಎಸ್ಐ, 2 ಕೆಎಸ್ಆರ್ಪಿ ತುಕಡಿ, 2 ಡಿಆರ್ ಪೊಲೀಸ್ ವಾಹನ ಮತ್ತು 100 ಪೊಲೀಸರನ್ನು ಬಂದೋಬಸ್ತ್ಗೆ ನಿಯೋಜಿಸಲಾಗಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸಿ.ಬಿ.ವೇದಮೂರ್ತಿ ‘ಪ್ರಜಾವಾಣಿ’ಗೆ ತಿಳಿಸಿದರು.
‘ಸಂಗನಗೌಡ, ರಾಜೂಗೌಡ ಮತ್ತು ಇತರರು ದೇಗುಲ ಪ್ರವೇಶಕ್ಕೆ ಅಡ್ಡಿ ಮಾಡುವರು. ದೇಗುಲ ಪ್ರವೇಶಿಸಲು ಭದ್ರತೆ ನೀಡುವಂತೆ ಶಿವಪುತ್ರ ಬಡಿಗೇರ ಮತ್ತು ಭೀಮಪ್ಪ ಬಡಿಗೇರ ಕೆಂಭಾವಿ ಪೊಲೀಸ್ ಠಾಣೆಗೆ ಅರ್ಜಿ ನೀಡಿದ್ದರು. ಅದರಂತೆ ಶಾಂತಿ ಸಭೆ ನಡೆಸಿ, ಅವರನ್ನು ದೇಗುಲಕ್ಕೆ ಕರೆದೊಯ್ಯಲಾಯಿತು’ ಎಂದು ಅವರು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.