ADVERTISEMENT

ಕೈಗಾರಿಕಾಭಿವೃದ್ಧಿಗೆ ಆದ್ಯತೆ: ಜಗದೀಶ ಶೆಟ್ಟರ್

ಹೊಸ ಕೈಗಾರಿಕಾ ನೀತಿ ಕಾಯ್ದೆಯಲ್ಲಿ ಕೈಗಾರಿಕೆಗಳ ಬೆಳವಣಿಗೆಗೆ ಒತ್ತು

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2020, 15:56 IST
Last Updated 1 ಸೆಪ್ಟೆಂಬರ್ 2020, 15:56 IST
ಯಾದಗಿರಿ ತಾಲ್ಲೂಕಿನ ಕಡೇಚೂರ ಕೈಗಾರಿಕಾ ಪ್ರದೇಶ ವೀಕ್ಷಣೆ ಮಾಡಿದ ನಂತರ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ದಿಮೆ ಸಚಿವ ಜಗದೀಶ ಶೆಟ್ಟರ್‌ ಮುಖಂಡರೊಂದಿಗೆ ಚರ್ಚಿಸಿದರು
ಯಾದಗಿರಿ ತಾಲ್ಲೂಕಿನ ಕಡೇಚೂರ ಕೈಗಾರಿಕಾ ಪ್ರದೇಶ ವೀಕ್ಷಣೆ ಮಾಡಿದ ನಂತರ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ದಿಮೆ ಸಚಿವ ಜಗದೀಶ ಶೆಟ್ಟರ್‌ ಮುಖಂಡರೊಂದಿಗೆ ಚರ್ಚಿಸಿದರು   

ಯಾದಗಿರಿ: ‘ಉತ್ತರ ಕರ್ನಾಟಕ ಭಾಗದಲ್ಲಿ ಹೆಚ್ಚು ಕೈಗಾರಿಕೆಗಳ ಅಭಿವೃದ್ಧಿಗೆ ಹೊಸ ಕೈಗಾರಿಕಾ ನೀತಿ ಕಾಯ್ದೆಯಲ್ಲಿ ಕೈಗಾರಿಕೆಗಳ ಬೆಳವಣಿಗೆಗೆ ಹೆಚ್ಚಿನ ಒತ್ತು ನೀಡಲಾಗಿದೆ’ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ದಿಮೆ ಸಚಿವ ಜಗದೀಶ ಶೆಟ್ಟರ್‌ ಹೇಳಿದರು.

ತಾಲ್ಲೂಕಿನ ಕಡೇಚೂರ ಕೈಗಾರಿಕಾ ಪ್ರದೇಶ ವೀಕ್ಷಣೆ ಮಾಡಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

‘ರಾಜ್ಯದಲ್ಲಿ ಉದ್ಯಮ ಸ್ನೇಹಿಯಾಗಿ ಹೊಸ ಕೈಗಾರಿಕಾ ನೀತಿ ಈಗಾಗಲೇಪ್ರಕಟಿಸಿದ್ದು, ಅದರಲ್ಲಿ ಬೆಂಗಳೂರು ಕೇಂದ್ರೀಕೃತ ಹೊರತುಪಡಿಸಿ ಇತರೆ ಎರಡನೇ ಮತ್ತು ಮೂರನೇ ಹಂತದ ನಗರಗಳಲ್ಲಿ ಕೈಗಾರಿಕೆ ಸ್ಥಾಪನೆಗೆ ಮತ್ತು ಹೂಡಿಕೆಗೆ ವಿಶೇಷ ಒತ್ತು ನೀಡಲಾಗಿದೆ’ ಎಂದರು.

ADVERTISEMENT

‘ಎಸ್‌ಐಆರ್ (ಸ್ಪೇಷಲ್ ಇನ್ವೆಸ್ಟ್ಮೆಂಟ್ ರಿಜನಲ್) ಈ ಪಾಲಸಿಯಲ್ಲಿ ಧಾರವಾಡ, ಕಲಬುರ್ಗಿ, ಶಿವಮೊಗ್ಗ ಕೈಗಾರಿಕಾ ಕೇಂದ್ರಗಳಾಗಿ ಕೈಗಾರಿಕೋದ್ಯಮ ಅಭಿವೃದ್ಧಿಗಾಗಿ ಹೆಚ್ಚಿನ ಒತ್ತು ನೀಡಲಾಗಿದೆ’ ಎಂದು ತಿಳಿಸಿದರು.

‘ಉದ್ಯಮ ಸ್ಥಾಪನೆಗೆ ಉದ್ದಿಮೆದಾರರು ಪಡುವ ಸಂಕಷ್ಟಗಳನ್ನು ತಪ್ಪಿಸಲು ಸಿಂಗಲ್ ವಿಂಡೋ ಸಿಸ್ಟಮ್ ಜಾರಿಗೊಳಿಸಿದ್ದು, ₹15 ಕೋಟಿ ವರೆಗಿನ ಯೋಜನೆಗಳ ಮಂಜೂರಾತಿಗೆ ಜಿಲ್ಲಾಧಿಕಾರಿಗೆ ಅಧಿಕಾರ ನೀಡಲಾಗಿದೆ. ₹15 ಕೋಟಿಗಿಂತ ಹೆಚ್ಚಿನ ಮೊತ್ತದ ಯೋಜನೆಗಳಿಗೆ ತಾವು ಒಳಗೊಂಡಂತೆ ಮುಖ್ಯಮಂತ್ರಿಗಳ ನೇತೃತ್ವದ ಸಮಿತಿ ಒಪ್ಪಿಗೆ ನೀಡುತ್ತದೆ. ಇದಲ್ಲದೆ ಇತ್ತೀಚೆಗೆ ಭೂ ಸುಧಾರಣೆ ಕಾಯ್ದೆಗೆ ತಿದ್ದುಪಡಿ ತಂದು 79(ಎ), 79(ಬಿ) ಕಲಂಗಳನ್ನು ತೆಗೆದು ಹಾಕಲಾಗಿದ್ದು, ಇದರಿಂದ ಉದ್ಯಮಿಗಳು ನೇರವಾಗಿ ರೈತರಿಂದ 100 ಎಕರೆ ವರೆಗೆ ಜಮೀನು ಖರೀದಿಸಬಹುದಾಗಿದೆ. ಕಾಯ್ದೆ ತಿದ್ದುಪಡಿಯಿಂದ ಅನ್ನದಾತನಿಗೆ ಯಾವುದೇ ರೀತಿಯ ಅನ್ಯಾಯವಾಗಿಲ್ಲ. ಕೈಗಾರಿಕೆ ಬೆಳವಣಿಗೆಗೆ ಅನುಕೂಲವಾಗಲಿದೆ’ ಎಂದು ಹೇಳಿದರು.

‘ಕಡೇಚೂರ‌ನಲ್ಲಿ 15 ಕಂಪನಿಗಳು ಪ್ರಾರಂಭವಾಗಲಿವೆ. ಕಡೇಚೂರನಲ್ಲಿ ಫಾರ್ಮಾ ಪಾರ್ಕ್ ದೇಶದಾದ್ಯಂತ 4-5 ಕಡೆ ಕೇಂದ್ರ ಸರ್ಕಾರ ‘ಫಾರ್ಮಾ ಪಾರ್ಕ್’ ಘೋಷಣೆ ಮಾಡುವ ಸಾಧ್ಯತೆ ಇರುವುದರಿಂದ ಜಿಲ್ಲೆಯ ಕಡೇಚೂರಿನಲ್ಲಿ ಬಲ್ಕ್‌ಡ್ರಗ್ ಫಾರ್ಮಾ ಪಾರ್ಕ್ ಸ್ಥಾಪನೆಗೆ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಅವರಿಗೆ ಮನವಿ ಮಾಡಲಾಗುವುದು’ ಎಂದರು.

ಚೀನಾಗೆ ಸ್ಪರ್ಧೆ: ‘ಈಚೆಗೆ ನಡೆದ ಮನ್‌ಕಿ ಬಾತ್‌ ಕಾರ್ಯಕ್ರಮದಲ್ಲಿ ಆಟಿಕೆ ಉತ್ಪಾದನೆಗಳಿಗೆ ಹೆಚ್ಚಿನ ಒತ್ತು ನೀಡುವ ಮೂಲಕ ಚೀನಾಗೆ ಸ್ಪರ್ಧೆ ನೀಡಲಾಗುವುದು. ಅಕ್ಟೋಬರ್‌ನಲ್ಲಿ ಇದಕ್ಕೆ ಚಾಲನೆ ನೀಡಲಾಗುವುದು’ ಎಂದು ತಿಳಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಬಿ.ಚವ್ಹಾಣ, ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಾಬುರಾವ್ ಚಿಂಚನಸೂರ, ರಾಯಚೂರುಸಂಸದ ರಾಜಾ ಅಮರೇಶ್ವರ ನಾಯಕ, ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ಆರ್., ಜಿಲ್ಲಾ ಪಂಚಾಯಿತಿಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಿಲ್ಪಾ ಶರ್ಮಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ ಭಗವಾನ ಸೋನವಣೆ, ಉಪ ವಿಭಾಗಾಧಿಕಾರಿ ಶಂಕರಗೌಡ ಎಸ್.ಸೋಮನಾಳ ಸೇರಿದಂತೆ ಜನಪ್ರತಿನಿಧಿಗಳು ಹಾಗೂ ರಾಜಕೀಯ ಮುಖಂಡರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.