ಯಾದಗಿರಿ: ನಗರಸಭೆ ಅಧ್ಯಕ್ಷರ ಗಮನಕ್ಕೆ ತಾರದೆ ಸಿಬ್ಬಂದಿ ಸ್ಥಾನ ಪಲ್ಲಟ, ತಾಂತ್ರಿಕ ಶಾಖೆಯ ಮುಖ್ಯ ವಿಷಯ, ನೈರ್ಮಲ್ಯ ಶಾಖೆಯಂತಹ ಮುಖ್ಯ ವಿಷಯಗಳನ್ನು ಏಕ ಪಕ್ಷಿಯವಾಗಿ ನಿರ್ಣಯ ತೆಗೆದುಕೊಂಡು ನಗರಸಭೆ ಪೌರಾಯುಕ್ತ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಆರೋಪಿಸಿ ಜಿಲ್ಲಾಧಿಕಾರಿಗೆ ನಗರಸಭೆ ಅಧ್ಯಕ್ಷ ಸುರೇಶ ಅಂಬಿಗೇರ ದೂರು ಸಲ್ಲಿಸಿದ್ದಾರೆ.
ಉದ್ಯಾನವನ ಮಾರ್ಗದಲ್ಲಿ ಅನಧಿಕೃತವಾಗಿ ಕಾಂಪೌಂಡ್ ನಿರ್ಮಿಸುತ್ತಿರುವುದು ಕಂಡು ನಾನು ಪೌರಾಯುಕ್ತರಿಗೆ ಅದೇ ಸ್ಥಳದಲ್ಲಿ ಕರೆ ಮಾಡಿ ವಿಷಯ ತಿಳಿಸಿದ್ದೇನೆ. ಇದಕ್ಕೆ ಅವರು ‘ಕಟ್ಟಲಿ ಬಿಡಿ ಸರ್’ ಎಂದು ಹಾರಿಕೆ ಉತ್ತರ ನೀಡಿರುತ್ತಾರೆ. ಆದರೆ, ಆ ರಸ್ತೆಯಲ್ಲಿ ಸಂಚರಿಸುವ ವಾಹನಗಳಿಗೆ ಹಾಗೂ ಸಾರ್ವಜನಿಕರಿಗೆ ತುಂಬಾ ತೊರದರೆಯಾಗುತ್ತಿದ್ದು, ಜಿಲ್ಲಾಧಿಕಾರಿ ಸ್ಥಳ ಪರಿಶೀಲನೆ ಮಾಡಬಹುದು ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಅಕ್ಟೋಬರ್ 14ರಂದು ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ, ಸ್ಥಾಯಿ ಸಮಿತಿ ಅಧ್ಯಕ್ಷ ಮತ್ತು ಸೇರಿ 20 ಜನ ನಗರಸಭೆ ಸದಸ್ಯರು ಪೌರಾಯುಕ್ತರ ವಿರುದ್ಧ ದೂರು ನೀಡಿದರೂ ದೂರಿನ ಬಗ್ಗೆ ಇಲ್ಲಿಯವರೆಗೆ ಯಾವುದೇ ಕ್ರಮ ಕೈಗೊಂಡ ಬಗ್ಗೆ ಮಾಹಿತಿ ಇಲ್ಲ. ಯಾದಗಿರಿ ಶಾಸಕ, ಜಿಲ್ಲಾ ಉಸ್ತುವಾರಿ ಸಚಿವ ಪೌರಾಯುಕ್ತರ ವಿರುದ್ಧ ಕ್ರಮ ಕೈಗೊಳ್ಳಲು ಮೌಖಿಕವಾಗಿ ಹೇಳಿದ್ದರೂ ಇಲ್ಲಿಯವರೆಗೆ ಪೌರಾಯುಕ್ತರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ತಿಳಿಸಿದ್ದಾರೆ.
ನವೆಂಬರ್ 17ರಂದು ಸ್ಥಾಯಿ ಸಮಿತಿ ಸಭೆಗೆ ತಡವಾಗಿ ಹಾಜರಾಗಿದ್ದಾರೆ. ಈ ಮೂಲಕ ಸದಸ್ಯರನ್ನು ಸಭೆಯಲ್ಲಿ ಕಾಲಹರಣ ಮಾಡಿಸಲು ಕಾರಣರಾಗಿದ್ದಾರೆ ಎಂದು ದೂರಿನಲ್ಲಿ ವಿವರಿಸಿದ್ದಾರೆ.
ಶಾಸಕರು, ಯಾದಗಿರಿ ಮತಕ್ಷೇತ್ರ, ಮಾನ್ಯ ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವರು ಇವರುಗಳು ಸಹ ಪೌರಾಯುಕ್ತರ ವಿರುದ್ಧ ಕ್ರಮ ಕೈಗೊಳ್ಳಲು ತಮಗೆ ಮೌಖಿಕವಾಗಿ ಹೇಳಿರುವರು, ತಾವು ಇಲ್ಲಿಯವರೆಗೆ ಪೌರಾಯುಕ್ತರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರಿದ್ದಾರೆ.
ಹೆಚ್ಚುವರಿ ಜಿಲ್ಲಾಧಿಕಾರಿ ಅವರಿಗೆ ಮನವಿ ಸಲ್ಲಿಸಲಾಯಿತು. ಈ ವೇಳೆ ಸಂದರ್ಭದಲ್ಲಿ ನಗರಸಭೆ ಸ್ಥಾಯಿ ಸಮಿತಿ ರುಕಯ್ಯಾ ಬೇಗಂ, ಉಪಾಧ್ಯಕ್ಷೆ ಚಂದ್ರಕಲಾ ಚಂದ್ರಕಾಂತ ಮಡ್ಡಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.