ಗುರುಮಠಕಲ್: ಕೋಲಾರ ಜಿಲ್ಲೆಯ ಬಂಗಾರಪೇಟೆ ತಹಶೀಲ್ದಾರ್ ಚಂದ್ರಮೌಳೇಶ್ವರ ಅವರನ್ನು ವಿವಾದಿತ ಭೂಮಿ ಸರ್ವೆ ಕಾರ್ಯದಲ್ಲಿರುವಾಗಲೇ ಚಾಕುವಿನಿಂದ ಇರಿದು ಕೊಲೆಮಾಡಿದ ಹಂತಕನನ್ನು ಕೂಡಲೇ ಬಂಧಿಸಿ ಕಠಿಣ ಶಿಕ್ಷೆ ನೀಡುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಯಾದಗಿರಿ ಜಿಲ್ಲಾ ಘಟಕದ ವತಿಯಿಂದ ಶುಕ್ರವಾರ ತಹಶೀಲ್ದಾರ್ ಸಂಗಮೇಶ ಜಿಡಗೆ ಅವರಿಗೆ ಮನವಿ ಸಲ್ಲಿಸಲಾಯಿತು.
ಮುಖ್ಯವಾಗಿ ಕಂದಾಯ, ಭೂಮಾಪನ, ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಗಳ ನೌಕರರ ಮೇಲೆ ಸರ್ಕಾರಿ ಕೆಲಸಗಳನ್ನು ಮಾಡುವಾಗಲೇ ಹತ್ಯೆಯಾಗುವುದು, ದಾಳಿಗಳಾಗುವುದು ಸಾಮಾನ್ಯವೆನ್ನುವಂತಾಗಿದೆ. ಇಂತಹ ಘಟನೆಗಳು ಪುನರಾವರ್ತನೆಯಾಗದಂತೆ ರಾಜ್ಯದಲ್ಲಿ ಕಠಿಣ ಕಾನೂನು ಜಾರಿ ಮಾಡುವಂತೆ ಮನವಿಯಲ್ಲಿ ಆಗ್ರಹಿಸಲಾಗಿದೆ.
ಮೃತರ ಕುಟುಂಬಕ್ಕೆ ಸಿಗಬೇಕಾದ ಆರ್ಥಿಕ ಸೌಲಭ್ಯಗಳನ್ನು ಶೀಘ್ರವೇ ತಲುಪಿಸಬೇಕು. ಸರ್ಕಾರಿ ನೌಕರರಿಗೆ ಸೂಕ್ತ ಭದ್ರತೆ ಒದಗಿಸುವುದು ಹಾಗೂ ಗರಿಷ್ಠ ಮಟ್ಟದ ಪರಿಹಾರಧನವನ್ನು ನೀಡುವಂತೆ ಮನವಿ ಮಾಡಲಾಯಿತು.
ಸಂಘದ ರಾಜ್ಯ ಪರಿಷತ್ ಸದಸ್ಯ ಸಂತೋಷ ನಿರೇಟಿ, ಜಿಲ್ಲಾ ಘಟಕದ ಉಪಾಧ್ಯಕ್ಷ ಪಾಂಡುರಂಗ ಮೇದಾರ, ಘಟಕದ ಕ್ರೀಡಾ ಕಾರ್ಯದರ್ಶಿ ಕಿಷ್ಟರೆಡ್ಡಿ, ಆಂತರಿಕ ಲೆಕ್ಕಪರಿಶೋಧಕ ಸಂತೋಷ ಕುಮಾರ, ಗೋಪಾಲರೆಡ್ಡಿ, ನಾರಾಯಣರೆಡ್ಡಿ, ಜುಲ್ಫೀಕರ್ ಅಲಿ, ತಾಜೊದ್ದೀನ್, ಸುಭಾಷ, ಚಂದ್ರಶೇಖರ, ಬಾಲಪ್ಪ ಸಿರಿಗೆಂ, ಹನಮಂತು, ಅನಿಲ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.