ಯಾದಗಿರಿ: ಕಳೆದ 35 ವರ್ಷಗಳಿಂದ ಯಾದಗಿರಿ ನಗರಸಭೆಯಲ್ಲಿ ಪೌರಕಾರ್ಮಿಕರಾಗಿ ಕೆಲಸ ಮಾಡುತ್ತಿರುವ ರತ್ನಮ್ಮ ಶಿವಪ್ಪ ಸ್ವಂತಿ ಅವರಿಗೆ 2020–21ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಒಲಿದುಬಂದಿದೆ.
ನಗರದ 19ನೇ ವಾರ್ಡ್ನ ಇಂದಿರಾ ನಗರ ನಿವಾಸಿ ರತ್ನಮ್ಮ ಶಿವಪ್ಪ ಅವರು ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದು, ಸಂತಸ ವ್ಯಕ್ತಪಡಿಸಿದ್ದಾರೆ.
ರತ್ನಮ್ಮ ಶಿವಪ್ಪ ದಂಪತಿಗೆ ಐದು ಮಕ್ಕಳಿದ್ದು, ಹಿರಿಯ ಮಗ ನಿಧನರಾಗಿದ್ದಾರೆ. ಮೂವರು ಪುತ್ರಿಯರು, ಇಬ್ಬರು ಪುತ್ರರ ಕೂಡು ಕುಟುಂಬ ರತ್ಮಮ್ಮ ಅವರದ್ದು. ನಾಲ್ಕುಮಕ್ಕಳಿಗೆವಿವಾಹವಾಗಿದೆ. ಒಬ್ಬ ಪುತ್ರಿಗೆ ಮಾತ್ರ ವಿವಾಹವಾಗಿಲ್ಲ.
ರತ್ನಮ್ಮ ಸ್ವಂತಿ ಅವರು ‘ಪ್ರಮಾಣಿಕವಾಗಿ ಕೆಲಸ ಮಾಡಿದ್ದರಿಂದ ಪ್ರಶಸ್ತಿ ಹರಸಿಕೊಂಡು ಬಂದಿರುವುದು ಸಂತಸ ತಂದಿದೆ. ಸುದೀರ್ಘ ಸೇವೆಯನ್ನು ಸರ್ಕಾರ ಗುರುತಿಸಿದೆ. ಇದಕ್ಕೆ ಕಾರಣರಾದ ಎಲ್ಲರಿಗೂ ಧನ್ಯವಾದ ಅರ್ಪಿಸುತ್ತೇನೆ’ ಎಂದರು.
ರತ್ನಮ್ಮ ಪುತ್ರಿ ಅಂಜನಮ್ಮ ಸ್ವಂತಿ ‘ಪ್ರಜಾವಾಣಿ’ ಜೊತೆ ಮಾತನಾಡಿ, ‘ತಾಯಿ ಸುಖಾಸುಮ್ಮನೆ ರಜೆ ತೆಗೆದುಕೊಳ್ಳದೇ ತಮಗೆ ವಹಿಸಿದ ಕೆಲಸವನ್ನು ಶ್ರದ್ಧೆಯಿಂದ ಮಾಡುತ್ತಿದ್ದಾರೆ. ಬೆಳಿಗ್ಗೆ 5 ಗಂಟೆಗೆ ಮನೆಯಿಂದ ತೆರಳಿದರೆ 9 ಗಂಟೆ ನಂತರವೇ ಮನೆಗೆ ಬರುತ್ತಿದ್ದರು. ಮತ್ತೆ ಮಧ್ಯಾಹ್ನದಿಂದ ಸಂಜೆವರೆಗೆ ಕಾರ್ಯ ನಿರ್ಹವಹಿಸುತ್ತಿದ್ದರು. ತಂದೆ ಶಿವಪ್ಪ ಬೀಡಿ ಕಟ್ಟುವುದು ಕೆಲಸ ಮಾಡುತ್ತಿದ್ದಾರೆ. ಇಬ್ಬರು ನಮ್ಮನ್ನು ಉತ್ತಮ ವಿದ್ಯಾಭ್ಯಾಸ ಕೊಡಿಸಿದ್ದಾರೆ. ನಾನು ಈಗ ವಕೀಲ ಪ್ರಾಕ್ಟಿಸ್ ಮಾಡುತ್ತಿದ್ದೇನೆ’ ಎಂದರು.
‘ನಗರದ ದುಖಾನವಾಡಿ, ಮೈಲಾಪುರ ಆಗಸಿ ಬಳಿ ಹೆಚ್ಚು ಕಾರ್ಯನಿರ್ಹಿಸುತ್ತಿದ್ದಾರೆ. ಇನ್ನೂ ಆರು ತಿಂಗಳು ಸೇವೆ ಇದೆ. ಪ್ರಮಾಣಿಕತೆಯಿಂದ ಕೆಲಸ ಮಾಡಿದ್ದರಿಂದ ಈ ಪ್ರಶಸ್ತಿ ಸಿಕ್ಕಿದೆ. ತುಂಬಾ ಖುಷಿಯಾಗಿದೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.