ADVERTISEMENT

ಯಾದಗಿರಿ: ಜಿಪಂ ಅಧ್ಯಕ್ಷರ ದಿಢೀರ್ ಭೇಟಿ

ಕಚೇರಿಗಳಲ್ಲಿ ಹಾಜರಿ ಪುಸ್ತಕ ಪರಿಶೀಲಿಸಿದ ಬಸನಗೌಡ ಯಡಿಯಾಪುರ

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2020, 16:14 IST
Last Updated 3 ಆಗಸ್ಟ್ 2020, 16:14 IST
ಯಾದಗಿರಿಯ ಕೃಷಿ ಇಲಾಖೆಗೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಬಸನಗೌಡ ಯಡಿಯಾಪುರ ದಿಢೀರ್ ಭೇಟಿ ನೀಡಿ ಹಾಜರಾತಿ ಪರಿಶೀಲಿಸಿದರು
ಯಾದಗಿರಿಯ ಕೃಷಿ ಇಲಾಖೆಗೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಬಸನಗೌಡ ಯಡಿಯಾಪುರ ದಿಢೀರ್ ಭೇಟಿ ನೀಡಿ ಹಾಜರಾತಿ ಪರಿಶೀಲಿಸಿದರು   

ಯಾದಗಿರಿ: ಜಿಲ್ಲಾಡಳಿತ ಭವನದ ಸಾಮಾಜಿಕ ಅರಣ್ಯ, ಅಕ್ಷರ ದಾಸೋಹ ಹಾಗೂ ಕೃಷಿ ಇಲಾಖೆಗಳಿಗೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಬಸನಗೌಡ ಯಡಿಯಾಪುರ ಅವರು ಸೋಮವಾರ ದಿಢೀರ್ ಭೇಟಿ ನೀಡಿದರು.

ಸಾರ್ವಜನಿಕ ಕೆಲಸ ಕಾರ್ಯಗಳ ವಿಳಂಬ ದೂರಿನ ಹಿನ್ನೆಲೆಯಲ್ಲಿ ಕಚೇರಿಗಳಿಗೆ ಭೇಟಿ ನೀಡಿ ಕಚೇರಿಗಳ ಸಿಬ್ಬಂದಿಯ ಹಾಜರಿ ಪುಸ್ತಕ ಪರಿಶೀಲಿಸಿದರು.

ಸಾಮಾಜಿಕ ಅರಣ್ಯ ಇಲಾಖೆಯ ಜಿಲ್ಲಾ ಅರಣ್ಯ ಅಧಿಕಾರಿ ಯಾದಗಿರಿ ಹಾಗೂ ರಾಯಚೂರು ಜಿಲ್ಲೆಗಳಿಗೆ ಪ್ರಭಾರಿ ಇದ್ದು, ನಾಲ್ಕು ತಿಂಗಳಿನಿಂದ ಯಾದಗಿರಿಗೆ ಬರದೇ ಇರುವ ಸಂಗತಿಯನ್ನು ಸಿಬ್ಬಂದಿ ಅಧ್ಯಕ್ಷರಿಗೆ ತಿಳಿಸಿದರು.

ADVERTISEMENT

ಕಚೇರಿಗೆ ಬಂದ ಪತ್ರಗಳ ಕುರಿತು ಹಾಗೂ ವಿಲೇವಾರಿ ಮಾಡಿರುವುದಕ್ಕೆ ಯಾವುದೇ ದಾಖಲೆ ನೀಡದಿರುವುದು ಕಂಡು ಬಂತು. ಕೊರೊನಾ ಹಿನ್ನೆಲೆಯಲ್ಲಿ ರಾಯಚೂರಿಗೆ ಎಲ್ಲ ಅರ್ಜಿಗಳನ್ನು ತರಿಸಿಕೊಂಡು ವಿಲೇವಾರಿ ಮಾಡುವುದಾಗಿ ಅಧ್ಯಕ್ಷರು ಕರೆ ಮಾಡಿದಾಗ ಡಿಎಫ್‌ಒ ತಿಳಿಸಿದರು.

ನಂತರ ಕೃಷಿ ಇಲಾಖೆಗೆ ಭೇಟಿ ನೀಡಿದ ಅವರು ಜಂಟಿ ನಿರ್ದೇಶಕಿ ಆರ್ ದೇವಿಕಾ ಅವರೊಂದಿಗೆ ಪ್ರಸ್ತುತ ಜಿಲ್ಲೆಯಲ್ಲಿ ಲಭ್ಯವಿರುವ ರಸಗೊಬ್ಬರ ದಾಸ್ತಾನು ಕುರಿತು ಮಾಹಿತಿ ಪಡೆದರು.

ಹಾಜರಾತಿ ಪುಸ್ತಕ ಪರಿಶೀಲನೆ ಮಾಡಿ ವಿಚಾರಿಸಿದಾಗ ಹಲವಾರು ಸಿಬ್ಬಂದಿಗೆ ಕೊರೊನಾ ಸೋಂಕು ತಗುಲಿದ್ದು, ಚಿಕಿತ್ಸೆಯ ನಂತರ ಬಿಡುಗಡೆಯಾಗಿ ಕ್ವಾರಂಟೈನ್‌ನಲ್ಲಿ ಇದ್ದಾರೆ ಎಂದು ದೇವಿಕಾ ಅವರು ಅಧ್ಯಕ್ಷರಿಗೆ ತಿಳಿಸಿದರು.

ಈ ವೇಳೆ ಶಿಕ್ಷಣ ಹಾಗೂ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಶಿವಲಿಂಗಪ್ಪ ಪುಟಗಿ, ಜಿಪಂ ಸದಸ್ಯ ಅಮರದೀಪ್, ಸದಾಶಿವಪ್ಪಗೌಡ ರೊಟ್ನಡಗಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.